ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಂ ಶಾಸಕರೊಬ್ಬರು ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಹೋರಾಟಗಾರ್ತಿ, ಜೆಡಿಎಸ್ ಮಹಿಳಾ ಕಾರ್ಯಾಧ್ಯಕ್ಷ ನಜ್ಮಾ ನಜೀರ್, ‘ಕೆಲವರ ಬಾಯಿಂದ ಮಾನ್ಯ ಅಧ್ಯಕ್ಷರೆ ಎಂಬ ಪದ ಕೇಳಲು ಉತ್ಸುಕಳಾಗಿದ್ದೇನೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ, ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಅವರನ್ನು ವಿಧಾನಸಭೆ ಸಭಾಧ್ಯಕ್ಷನ್ನಾಗಿ ನೇಮಿಸಲು ನಿರ್ಧರಿಸಿದೆ. ಮೇ 24ರಂದು ನಡೆಯುವ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಯು.ಟಿ ಖಾದರ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಯು.ಟಿ ಖಾದರ್ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಬಗ್ಗೆ ಸಂತಸ ಹಂಚಿಕೊಂಡು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ನಜ್ಮಾ, “ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸಲ್ಮಾನ ಸಮುದಾಯದವರೊಬ್ಬರು ಸಭಾಪತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.ಅದರಲ್ಲೂ ವಿಶೇಷವಾಗಿ ಮಾನ್ಯ ಯು.ಟಿ ಖಾದರ್ ರವರು ಈ ಸ್ಥಾನ ಅಲಂಕರಿಸಿರುವುದು ವಿಧಾನಸಭೆಗೂ ಒಂದು ಭೂಷಣ” ಎಂದಿದ್ದಾರೆ.
“ಪಕ್ಷಾತೀತವಾಗಿ ಎಲ್ಲ ಪಕ್ಷದ ಸದಸ್ಯರ ಹಕ್ಕು ಬಾಧ್ಯತೆಗಳನ್ನು ಕಾಪಾಡುವ ಮೂಲಕ ಸಾಂವಿಧಾನಿಕ ಆಶಯದಂತೆ ಸಭಾಧ್ಯಕ್ಷರ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯುತ್ತೀರ ಎಂಬ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
“ಕೆಲವರ ಬಾಯಿಂದ ‘ಮಾನ್ಯ ಅಧ್ಯಕ್ಷರೆ’ ಎಂಬ ಸಂಬೋಧನೆಯನ್ನು ಕೇಳಲು ಉತ್ಸುಕಳಾಗಿದ್ದೇನೆ. ಶುಭಾಶಯಗಳು ಸನ್ಮಾನ್ಯ ಸಭಾಧ್ಯಕ್ಷರೆ” ಎಂದು ಪೋಸ್ಟ್ ಮಾಡಿದ್ದಾರೆ.