ಕರ್ನಾಟಕದಲ್ಲಿ ರೈತರ ಜಮೀನನ್ನು ವಕ್ಫ್ ಬೋರ್ಡ್ ಆಕ್ರಮಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿ, ಇಲ್ಲದ ವಿವಾದವನ್ನು ಮುನ್ನೆಲೆಗೆ ತಂದು, ಗದ್ದಲ ಎಬ್ಬಿಸುತ್ತಿದೆ. ಇದಕ್ಕೆ ಕೆಲವು ಮುಖ್ಯವಾಹಿನಿ ಎಂದು ಎನಿಸಿಕೊಂಡ ಮಾಧ್ಯಮಗಳು ಕೂಡ ಕೈ ಜೋಡಿಸಿವೆ. ಇದರಿಂದಾಗಿ ಈಗಾಗಲೇ ಗಲಭೆ, ಸಂಘರ್ಷಗಳು ನಡೆಯುವಂತೆ ಆಗಿದೆ.
ವಕ್ಫ್ ಆಸ್ತಿ ವಿಚಾರ ಇಟ್ಟುಕೊಂಡು ಬಿಜೆಪಿ ಹರಡುತ್ತಿರುವ ಕೋಮುದ್ವೇಷದ ನಡುವೆಯೇ, ಬಿಜೆಪಿಯ ಆಷಾಢಭೂತಿತನಕ್ಕೆ ಮತ್ತೊಂದು ಪುರಾವೆಯನ್ನು ಈ ದಿನ.ಕಾಮ್ ಸಂಶೋಧನಾ ತಂಡವು ಪತ್ತೆ ಹಚ್ಚಿದೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರೇ, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಒತ್ತುವರಿಯಾಗಿರುವಂತಹ ವಕ್ಫ್ ಜಾಗಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿರುವುದು ಸಾಬೀತಾಗಿದೆ.
ಒತ್ತುವರಿ ಮಾಡಿದ್ದನ್ನು ತೆರವುಗೊಳಿಸುವ ಭರವಸೆ ನೀಡುವುದು ತಪ್ಪಲ್ಲ. ಆದರೆ, ಬಿಜೆಪಿಯವರು ಕೋಮು ಪ್ರಚೋದನೆಗಾಗಿ ಕರ್ನಾಟಕದ ಅಲ್ಪಸಂಖ್ಯಾತ, ವಕ್ಫ್ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಹಮ್ಮಿಕೊಂಡಂತಹ ವಕ್ಫ್ ಅದಾಲತ್ ಎನ್ನುವ ಕಾನೂನು ಕ್ರಮದ ವಿರುದ್ಧ ದ್ವೇಷದ ಅಭಿಯಾನ ನಡೆಸಲು ಹೋಗಿದ್ದು, ಈಗ ವಿವಾದ ಮಾಡಿದ್ದ ಬಿಜೆಪಿಯೇ ಅದರಲ್ಲಿ ಸಿಲುಕಿಕೊಂಡಿದೆ.
ಜಮೀರ್ ಅಹ್ಮದ್ ಇತ್ತೀಚಿಗೆ ಕೆಲವು ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ನ ವೇಳೆ, “ವಕ್ಫ್ ಆಸ್ತಿ ಎನ್ನುವುದು ಅಲ್ಲಾಹನ ಆಸ್ತಿ. ಸಮುದಾಯದ ಜನರ ಏಳಿಗೆಗಾಗಿ ನೀಡಿರುವ ಸೊತ್ತು. ಅದನ್ನು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದರು. ಇದೇ ಧಾಟಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ 2022ರಲ್ಲಿ ಹೇಳಿಕೆ ನೀಡಿದ್ದರು. ಬೊಮ್ಮಾಯಿ ನೀಡಿದ್ದ ಹೇಳಿಕೆಯನ್ನು ಈ ದಿನ.ಕಾಮ್ ಪ್ರಸಾರ ಮಾಡಿದ ಬೆನ್ನಲ್ಲೇ ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ವಕ್ಫ್ ಆಸ್ತಿ ವಿಚಾರದಲ್ಲಿ ವಿವಾದವನ್ನಾಗಿ ಮಾಡುತ್ತಿದ್ದ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರಿಗೆ ಇರುಸು-ಮುರುಸು ತಂದೊಡ್ಡಿತ್ತು. ಇದೆಲ್ಲವೂ ನಮ್ಮ ಕಣ್ಣ ಮುಂದೆ ಇರುವಾಗಲೇ, 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವತಃ ಬಿಜೆಪಿಯವರೇ ವಕ್ಫ್ ಆಸ್ತಿ ಅತಿಕ್ರಮಣ ಆಗಿರುವುದನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು ಎಂಬ ಸಂಗತಿ ಗೊತ್ತಾಗಿದೆ.

2014ರಲ್ಲಿ ಅಂದರೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ಪ್ರಧಾನಿ ಸ್ಥಾನಕ್ಕೆ ಮೊದಲ ಬಾರಿಗೆ ನರೇಂದ್ರ ಮೋದಿಯವರು ಅಭ್ಯರ್ಥಿಯಾಗಿದ್ದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಸುಮಾರು 52 ಪುಟಗಳ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿತ್ತು. ಈ ಪ್ರಣಾಳಿಕೆಯ 17ನೇ ಪುಟದಲ್ಲಿ “ಅಲ್ಪಸಂಖ್ಯಾತರು – ಸಮಾನ ಅವಕಾಶ” ಎಂಬ ಕಾಲಂನ ಅಡಿಯಲ್ಲಿ ವಕ್ಫ್ ಹಾಗೂ ವಕ್ಫ್ ಆಸ್ತಿಯ ವಿಚಾರವನ್ನು ಪ್ರಸ್ತಾಪಿಸಿದೆ.
ಅದರಲ್ಲಿ ಈ ರೀತಿಯಲ್ಲಿ ಉಲ್ಲೇಖಿಸಲಾಗಿದೆ, “ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚಿಸಿ ವಕ್ಫ್ ಮಂಡಳಿಗಳನ್ನು ಸಬಲೀಕರಣಗೊಳಿಸುತ್ತೇವೆ. ವಕ್ಫ್ ಆಸ್ತಿಗಳ ಅತಿಕ್ರಮಣ ಮತ್ತು ಅನಧಿಕೃತ ಒತ್ತುವರಿಯನ್ನು ತೆಗೆದುಹಾಕಲು ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂಬ ಭರವಸೆಯನ್ನು ನರೇಂದ್ರ ಮೋದಿಯವರೇ ನೀಡಿದ್ದರು. ಇದು ಈಗ ಬಿಜೆಪಿಯವರನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸಿದೆ.
ವಕ್ಫ್ ಸೊತ್ತುಗಳು ಒತ್ತುವರಿ ಮಾಡಲಾಗಿದೆ. ವಕ್ಫ್ ಬೋರ್ಡ್ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಸಾಕಷ್ಟು ಸಮಯದಿಂದ ಮುಸ್ಲಿಂ ಸಮುದಾಯದವರಲ್ಲಿದೆ. ಈ ಒತ್ತುವರಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಬಹಳಷ್ಟು ಜನ ಇದ್ದಾರೆ ಎಂಬ ಆರೋಪ ಕೂಡ ಇದೆ.
ಇದಲ್ಲದೇ, ಇದರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕೃಷಿ ಯೋಗ್ಯ ಭೂಮಿ ಇದ್ದುದ್ದರಿಂದಾಗಿ ಅವುಗಳ ಬಗ್ಗೆ ಮಾಹಿತಿ ಪಡೆಯಲು ನೋಟಿಸ್ ನೀಡಲಾಗಿತ್ತು. ಈ ರೈತರ ಪೈಕಿ ಹಿಂದೂಗಳು ಸೇರಿದಂತೆ ಮುಸ್ಲಿಮರು ಕೂಡ ಇದ್ದರಾದರೂ, ಯಾರನ್ನೂ ಕೂಡ ರಾಜ್ಯದ ಕಾಂಗ್ರೆಸ್ ಸರ್ಕಾರ ಒಕ್ಕಲೆಬ್ಬಿಸಿಲ್ಲ. ಆದರೆ, ಕೆಲವು ಸರ್ವೇ ನಂಬರ್ಗಳಲ್ಲಿ ಆದ ಪ್ರಮಾಣದಿಂದಾಗಿ ನೋಟಿಸ್ ಹೋಗಿದ್ದನ್ನೇ ಬಿಜೆಪಿಯವರು ವಿವಾದವನ್ನಾಗಿಸಿದ್ದಾರೆ.
ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ ಬಿ ಪಾಟೀಲ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಸೇರಿದಂತೆ ಎಲ್ಲರೂ ಕೂಡ ಸ್ಪಷ್ಟೀಕರಣ ನೀಡಿದ ಮೇಲೂ ಉಪಚುನಾವಣೆಯ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೆ ಮತ್ತೆ ಇದೇ ವಿಚಾರವನ್ನು ಮುಂದಕ್ಕೆ ತಂದಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.
ವಕ್ಫ್ ಆಸ್ತಿಯ ಒತ್ತುವರಿ ತೆರವು ಬಗ್ಗೆ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಇನ್ನೂ ಚರ್ಚೆಯಲ್ಲಿರುವಾಗಲೇ, ಮೋದಿಯವರು 2014ರಲ್ಲಿ ನೀಡಿದ್ದ ಭರವಸೆ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ವಿವಾದ ಸೃಷ್ಟಿಸಿದ್ದ ಬಿಜೆಪಿಯೇ ಈಗ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಎಸ್ಐಟಿ ಅಥವಾ ಸಿಬಿಐಗೆ ವಹಿಸಿ ಎಂದ ಬೊಮ್ಮಾಯಿ!
ಬಿಜೆಪಿಯೇ ಉಂಟು ಮಾಡಿದ್ದ ವಕ್ಫ್ ಆಸ್ತಿ ವಿವಾದವು ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿಗೆ ತಿರುಗುಬಾಣವಾಗಿದೆ. ಇದಕ್ಕೆ ಕಾರಣವಾದದ್ದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2022ರಲ್ಲಿ ಕೆಎಂಡಿಸಿ ಭವನ ಉದ್ಘಾಟನಾ ಸಮಾರಂಭದಲ್ಲಿ ನೀಡಿದ್ದ ಹೇಳಿಕೆ ಎಂದರೆ ತಪ್ಪಾಗಲಾರದು.
ಈ ಎಲ್ಲಾ ಬೆಳವಣಿಗೆಯ ನಡುವೆ ಭಾನುವಾರ ತನ್ನ ಹೇಳಿಕೆಯ ಬಗ್ಗೆ ಬೊಮ್ಮಾಯಿ ಸಮರ್ಥನೆ ನೀಡಿದ್ದರು. ಅಲ್ಲದೇ, ಈ ನಡುವೆಯೇ ಟ್ವೀಟ್ ಮಾಡಿರುವ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಸ ಸಲಹೆಯೊಂದನ್ನು ಕೂಡ ನೀಡಿದ್ದಾರೆ.

“ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ತಕ್ಷಣ ಎಸ್ಐಟಿ ಅಥವಾ ಸಿಬಿಐ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ” ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, “ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರು ಅಂದು ಹೇಳಿದ ಮಾತಿನಿಂದ ಸ್ವಲ್ಪ ಮುಜುಗರ ಆದಂತೆ ಕಾಣುತ್ತದೆ. ಈಗ ಪುನಃ ಮತ್ತೊಂದು ಉತ್ತಮ ಸಲಹೆ ಕೊಟ್ಟಿದ್ದಾರೆ. ಈ ಸಲಹೆಯನ್ನು ಪಾಲನೆ ಮಾಡಿದರೆ ಸಾಕು. ವಕ್ಫ್ ಸೊತ್ತು ವಿಷಯದ ಎಲ್ಲಾ ಸಮಸ್ಯೆ ಬಹಳ ಸಲೀಸಾಗಿ ಖಂಡಿತಾ ಪರಿಹಾರವಾಗುತ್ತದೆ. ಬೊಮ್ಮಾಯಿಯವರ ಈ ಸಲಹೆಯನ್ನು ಬಿಜೆಪಿಯ ಎಷ್ಟು ಮಂದಿ ನಾಯಕರು ಒಪ್ಪುತ್ತಾರೆ ಅನ್ನೋದು ಎರಡನೇ ವಿಷಯ. ಅವರ ಸಮಯದಲ್ಲೇ ಇದನ್ನು ಎಸ್ಐಟಿ ಅಥವಾ ಸಿಬಿಐಗೆ ಕೊಡೋದನ್ನು ಯಾರೂ ವಿರೋಧ ಮಾಡುವ ಅವಕಾಶ ಇರಲಿಲ್ಲ. ಆಗ ಯಾಕೆ ಕೊಡಲಿಲ್ಲ ಎನ್ನುವುದೇ ಪ್ರಶ್ನೆ. ಇರಲಿ ಏನಿದ್ದರೂ ಈ ಸಲಹೆಯನ್ನು ಸಿದ್ದರಾಮಯ್ಯನವರು ಸ್ವೀಕರಿಸಿ ಎಸ್ಐಟಿ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿದರೆ ವಕ್ಫ್ ಸೊತ್ತಿನ ಸಂಪೂರ್ಣ ಅಸಲಿಯತ್ತು ಹೊರಬರಬಹುದು” ಎಂದು ತಿಳಿಸಿದ್ದಾರೆ.
