ಮಂಡ್ಯ ಜನ ಒರಟರಂತೆ ಕಂಡರೂ, ಸಹಾಯ ಸ್ಮರಿಸುವ ಹೃದಯವಂತರು. ನಾಡಿಗೆ ಕೃಷಿ ಮೂಲಕ ಅನ್ನ ಕೊಡುವ ಅನ್ನದಾತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಅಭಿವೃದ್ಧಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರವಾದದ್ದು, ಅವರನ್ನು ನಾವು ಸದಾ ಸ್ಮರಿಸಬೇಕು ಎಂದೂ ಹೇಳಿದ್ದಾರೆ.
ಮಂಡ್ಯದಲ್ಲಿ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಹಾಸ್ಟೆಲ್ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. “ನಿರ್ಮಾಣವಾಗಲಿರುವ ಹಾಸ್ಟೆಲ್ನಲ್ಲಿ ಕೇವಲ ಕುರುಬರ ಮಕ್ಕಳಿಗೆ ಮಾತ್ರವಲ್ಲ, ಎಲ್ಲ ಜಾತಿಯ ಬಡವರಿಗೂ ಅವಕಾಶ ಇರುತ್ತದೆ. ದಾನಿಗಳು ಕೊಟ್ಟಷ್ಟು ಕೊಡಲಿ. ನಾನೂ ಸಹಾಯ ಮಾಡುತ್ತೇನೆ. ಮಂಡ್ಯದ ಜನ ಹತ್ತಾರು ವರ್ಷಗಳಿಂದ ನನಗೆ ಬಂಬಲ ಕೊಡುತ್ತಲೇ ಬರುತ್ತಿದ್ದಾರೆ” ಎಂದರು.
“ಮಂಡ್ಯದಲ್ಲಿನ ಕುರುಬರ ಹಾಸ್ಟೆಲ್ ಕಟ್ಟಡ ಶಿಥಿಲ ಆಗಿದ್ದನ್ನು ನೋಡಿದ್ದೆ. ಅನುದಾನ ಕೊಡಲು ಸರ್ಕಾರ ಸಿದ್ದವಿರುವುದಾಗಿಯೂ ಹೇಳಿದ್ದೆ. ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶ ಈಡೇರಬೇಕಾದರೆ ಹಾಸ್ಟೆಲ್ಗಳ ಅಗತ್ಯವಿದೆ. ಹಳ್ಳಿಗಾಡಿನ ಮಕ್ಕಳೂ ವೈದ್ಯರು, ಎಂಜಿನಿಯರ್ ಗಳಾಗಬೇಕು. ಕೇವಲ ಒಂದು ವರ್ಗದವರು ಮಾತ್ರ ಆಗಬಾರದು, ಎಲ್ಲರಿಗೂ ಶಿಕ್ಷಣ ಸಿಗಬೇಕು” ಎಂದರು.
“ನಮ್ಮ ಸರ್ಕಾರ ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದೆ. ಮಾತ್ರವಲ್ಲ, ವಿದ್ಯುತ್ ಬಿಲ್, ದಂಡ ಎರಡನ್ನೂ ಮನ್ನಾ ಮಾಡಿದ್ದೇವೆ. ಇವತ್ತೇನಾದರೂ ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಉಳಿದಿದ್ದರೆ, ವೈದ್ಯ ಕಾಲೇಜು, ಕೃಷಿ ವಿವಿ ಬಂದಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಚಲುವರಾಯಸ್ವಾಮಿ ಅವರ ಕಾಳಜಿ, ಶ್ರಮ ಕಾರಣ” ಎಂದು ಹೇಳಿದರು.