ರಾಜ್ಯದ ಕಾಂಗ್ರೆಸ್ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲೂ ಮುಸ್ಲಿಮರ ಓಲೈಕೆ ಮಾಡುವ ಉದ್ದೇಶದಿಂದ ನಮಾಜ್ಗಾಗಿ ಪರೀಕ್ಷೆಯ ಸಮಯವೇ ಬದಲು ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹರಡಿ, ಮುಸ್ಲಿಮರ ವಿರುದ್ಧ ದ್ವೇಷ ಕಾರಿರುವ ಸಂಘಪರಿವಾರದ ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. “ಚಕ್ರವರ್ತಿ ಸೂಲಿಬೆಲೆ ಓರ್ವ ತಲೆಹರಟೆ. ಅವರಿಗೆ ಮಾನ ಮರ್ಯಾದೆ ಇದೆಯಾ? ಕಳೆದ ಸರ್ಕಾರದ ಅವಧಿಯಲ್ಲಿ ಪಠ್ಯಪರಿಷ್ಕರಣೆಯ ಮಾಡುತ್ತೇವೆ ಎಂದು ನೆಪವೊಡ್ಡಿ ಮಕ್ಕಳ ಪಠ್ಯಪುಸ್ತಕದಲ್ಲಿ ದಿಕ್ಕು ತಪ್ಪಿಸುವಂತಹ ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ನಾನು ಶಿಕ್ಷಣ ಸಚಿವನಾದ ಬಳಿಕ ಅದನ್ನು ಕಿತ್ತು ಬಿಸಾಕಿದ್ದೇನೆ. ಕಿತ್ತು ಬಿಸಾಕಿದ್ದೇನೆ ಎಂದು ಹೇಳಿಕೆ ನೀಡಿದ್ದಾಗ ಅದು ಕೂಡ ದೊಡ್ಡ ಚರ್ಚೆ ಮಾಡಿದ್ದರು. ಇಂಥದ್ದನ್ನು ಕಿತ್ತು ಬಿಸಾಕದೆ ಇನ್ನೇನು ಮಾಡೋದು? ಹೊಲಸನ್ನು ಮನೆಯಲ್ಲಿ ಇಟ್ಟುಕೊಳ್ತೀರಾ?” ಎಂದು ಸಚಿವರು ಪ್ರಶ್ನಿಸಿದರು.
“ಮಾರ್ಚ್ 1 ರ ಶುಕ್ರವಾರದಂದು ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದೆ. ಶುಕ್ರವಾರ ಮಾತ್ರ ಬೆಳಗ್ಗೆ ಬದಲಿಗೆ ಮಧ್ಯಾಹ್ನ ಪರೀಕ್ಷೆ ನಡೆಸಲು ಸಮಯ ನಿಗದಿ ಮಾಡಲಾಗಿದೆ. ಯಾಕೆ ನಮಾಜಿಗಾ ಎಂದು ಸೂಲಿಬೆಲೆ ಟ್ವೀಟ್ ಮಾಡಿದ್ದಾನೆ. ಅವನಿಗೆ ತಲೆ ಇಲ್ಲ. ಅದಕ್ಕೆ ಟ್ವೀಟ್ ಮಾಡಿದ್ದಾನೆ. ಇಂಥವರು ತಾನೇ ದ್ವೇಷ ಹರಡುತ್ತಿರುವುದು? ಸೂಲಿಬೆಲೆ ಸ್ವಲ್ಪ ಓದಿಕೊಂಡು ಬರಲಿ. ಸೂಲಿಬೆಲೆ ಮೇಲೆ ಕ್ರಮಕ್ಕೆ ಆಗ್ರಹಿಸಿ ನಮಗೆ ದೂರುಗಳು ಬಂದಿದೆ. ಪ್ರಕರಣ ದಾಖಲಿಸುತ್ತೇವೆ” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
“ಮಾರ್ಚ್ 1ರಂದು ರಂದು ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ, ಆ ಪರೀಕ್ಷೆಗೆ ಕೆಲವು ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಹೀಗಾಗಿ ಅಂತಹ ಶಾಲಾ, ಕಾಲೇಜುಗಳಲ್ಲಿಯೇ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಬೇಕಾಗಿರುತ್ತದೆ. ಇದರಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ತೊಂದರೆ ಉಂಟಾಗುವುದನ್ನು ಮನಗಂಡಿದ್ದ ಅಧಿಕಾರಿಗಳು, ಆ ದಿನದಂದು ಎಸ್ಎಸ್ಎಲ್ಸಿ ವಿಜ್ಞಾನ ವಿಷಯದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿದ್ದಾರೆ. ಆದರೆ ಸೂಲಿಬೆಲೆಯಂಥವರು ನಮಾಜ್ಗಾಗಿ ಮಾಡಿದ್ದಾರೆ ಅಂತ ಸುಳ್ಳು ಹರಡಿಸಿದ್ದಾರೆ. ಇವರಿಗೆಲ್ಲ ಕಾಮನ್ಸೆನ್ಸ್ ಇಲ್ಲ” ಎಂದು ವಾಗ್ದಾಳಿ ನಡೆಸಿದರು.
“ಸೂಲಿಬೆಲೆಯಂಥವರು ಚುನಾವಣೆ ಬಂದಾಗ ತಲೆ ಎತ್ತಲು ಶುರುವಿಟ್ಟುಕೊಳ್ಳುತ್ತಾರೆ. ಇವೆಲ್ಲವನ್ನೂ ಬಿಟ್ಟು ಬಿಡಿ. ನಮ್ಮ ರಾಜ್ಯದಲ್ಲಿ ಭಾವನಾತ್ಮಕ ವಿಚಾರ ನಡೆಯಲ್ಲ. ಭಾವನಾತ್ಮಕ ವಿಚಾರವನ್ನೇ ಬಿಜೆಪಿಯವರು ಇನ್ನೂ ಮುಂದುವರಿಸಿದರೆ ರಾಜ್ಯದ ಜನ ಇನ್ನೂ ಶಿಕ್ಷಿಸುತ್ತಾರೆ. ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಅದಕ್ಕೆ ನಮ್ಮ ಗ್ಯಾರಂಟಿಗಳೇ ಕಾರಣವಾಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಾವು ಗ್ಯಾರಂಟಿ ಅನುಷ್ಠಾನಗೊಳಿಸಿ, ಮಾತು ಉಳಿಸಿಕೊಂಡಿದ್ದೇವೆ” ಎಂದು ಸಚಿವರು ತಿಳಿಸಿದರು.
ಇದನ್ನು ಓದಿದ್ದೀರಾ? ಎಸ್ಎಸ್ಎಲ್ಸಿ ಪರೀಕ್ಷೆಗೂ ಮುಸ್ಲಿಂ ದ್ವೇಷದ ಸುಳ್ಳು ಸುದ್ದಿ ಹರಡಿದ ಸೂಲಿಬೆಲೆ, ಕೋಣೆಮನೆ
“ಶಿವಮೊಗ್ಗದ ರಾಗಿಗುಡ್ಡದ ನಡೆದ ಸಂಘರ್ಷದ ಸಂದರ್ಭದಲ್ಲೂ ಇದೇ ರೀತಿ ಮಾಡಿದ್ದಾರೆ. ಇವರು ಸುಮ್ಮನೆ ಹೊಗೆ ಆಡಿಸಿದ್ದೇ ಆಡಿದ್ದು. ಆದರೆ ಅಲ್ಲಿ ಏನೂ ಆಗಿರಲಿಲ್ಲ. ಯಾರೆಲ್ಲ ಬಂದು ಗಲಭೆಗೆ ಸಂಚು ಹೂಡಿದ್ದರೋ ಅವರೆಲ್ಲರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಕೆ ಎಸ್ ಈಶ್ವರಪ್ಪ, ಸಂಘಪರಿವಾರದ ಅರುಣ್ ಕುಮಾರ್ ಪುತ್ತಿಲ ಇವರೆಲ್ಲ ಕಾನೂನಿಗೆ ವಿರುದ್ಧ ಹೇಳಿಕೆ ಕೊಟ್ಟಿದ್ದರೋ ಅವರೆಲ್ಲರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದ್ದೆ” ಎಂದು ಇದೇ ವೇಳೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.