ಮುಂಜಾನೆ ಎದ್ದು ಬಿಸಿ-ಬಿಸಿ ಕಾಫಿ ಕುಡಿದು, ದೈನಂದಿನ ಕಾರ್ಯ ಶುರು ಮಾಡುವವರಿಗೆ ಇನ್ಮುಂದೆ ಈ ಪೇಯ ಕೊಂಚ ಹೆಚ್ಚೇ ಕಹಿ ಎನಿಸಬಹುದು. ಪ್ರತಿದಿನ ನಾವು ಬಳಸುವ ಬಹುತೇಕ ಅಗತ್ಯ ವಸ್ತುಗಳು ಈಗಾಗಲೇ ದುಬಾರಿಯಾಗಿದೆ. ಚಹಾ ಪುಡಿ, ಹಾಲು, ಸಕ್ಕರೆ ದರ ಹೆಚ್ಚಾದರೂ ರೂಢಿ ತಪ್ಪಿಸಲಾಗದೆ, ಮಾಸಿಕ ಬಜೆಟ್ನ ಕೊಂಚ ಅಧಿಕ ಪಾಲನ್ನೇ ಚಹಾಕ್ಕಾಗಿ ಮೀಸಲಿಡುತ್ತೇವೆ. ಕಾಫಿ ಪ್ರಿಯರ ಅವಸ್ಥೆ ಕೂಡಾ ಇದುವೇ. ಇತ್ತ ಬೆಳೆ ಕೊರತೆ, ಅತ್ತ ಬೆಲೆ ಹೆಚ್ಚಳ, ನಡುವಲ್ಲಿ ಸಿಲುಕುವವರು ಕಾಫಿ ಪ್ರಿಯರು.
ಮೆಟ್ರೋ, ಬಸ್ ಟಿಕೆಟ್ ದರ, ಶಾಲೆಯ ಶುಲ್ಕ ಏರಿಕೆಯನ್ನು ಕಂಡಿರುವ ಬೆಂಗಳೂರಿಗರು ಈಗ ತಾವು ದಿನನಿತ್ಯ ಸವಿಯುವ ಫಿಲ್ಟರ್ ಕಾಫಿಗೂ ಕೂಡಾ ಹೆಚ್ಚು ಬೆಲೆ ತೆರಬೇಕಾದೀತು. ಬೆಂಗಳೂರಿನಲ್ಲಿ ಶೀಘ್ರವೇ ಕಾಫಿ ಬೆಲೆಯು ಶೇಕಡ 10-15ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ ತಿಂಗಳಿನಿಂದ (ಮಾರ್ಚ್ನಿಂದ) ಕಾಫಿ ಬೆಲೆ ಹೆಚ್ಚಿಸಲಾಗುವುದು ಎಂದು ಬೃಹತ್ ಬೆಂಗಳೂರು ಹೋಟೆಲಿಗರ ಸಂಘ (BBHA) ಕಳೆದ ತಿಂಗಳೇ ಖಚಿತಪಡಿಸಿದೆ. ಸದ್ಯ 10-15 ರೂಪಾಯಿ ಇರುವ ಒಂದು ಕಪ್ ಕಾಫಿ ಬೆಲೆ 20ರಿಂದ 25 ರೂಪಾಯಿ ಆಗಲಿದೆ. ಕಾಫಿ ಪುಡಿ, ಹಾಲಿನ ಬೆಲೆ ಏರಿಕೆ ಸಾಧ್ಯತೆ ಹಿನ್ನೆಲೆ ಹೋಟೆಲ್ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಸಣ್ಣ ಅಂಗಡಿಗಳಲ್ಲಿ ಕಾಫಿ ಬೆಲೆ ಹೆಚ್ಚಿಸದಿದ್ದರೂ ಕೆಲವು ಹೋಟೆಲ್ಗಳಲ್ಲಿ ಒಂದು ಕಪ್ ಕಾಫಿ ಬೆಲೆ 3-5 ರೂಪಾಯಿ ಏರಿಸಲಾಗಿದೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಬಾಬಾ ಬುಡನ್ ಗಿರಿಗೆ ಕಾಫಿ ಬೆಳೆ ಹೇಗೆ ಬಂತು?
ಭಾರತದಲ್ಲಿ ಕಾಫಿ ಬೆಳೆ
ಭಾರತದಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಾಫಿ ಬೆಳೆಯಲಾಗುತ್ತದೆ. ಅದರಲ್ಲಿಯೂ ಕರ್ನಾಟಕ ಅತ್ಯಧಿಕ ಕಾಫಿ ಬೆಳೆಯುವ ರಾಜ್ಯ. ಕೇರಳ, ತಮಿಳುನಾಡು ನಂತರದ ಸ್ಥಾನದಲ್ಲಿದೆ. ಹಲವು ತಳಿಯ ಕಾಫಿಯನ್ನು ದೇಶದಲ್ಲಿ ಬೆಳೆಯಲಾಗುತ್ತದೆ. ದೇಶದಲ್ಲಿ ಒಟ್ಟು ಬೆಳೆಯಲಾಗುವ ಕಾಫಿ ಪೈಕಿ ಶೇಕಡ 70ರಷ್ಟು ಬೆಳೆಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಾಫಿ ಬೆಳೆಯಲಾಗುತ್ತದೆ. ಉಳಿದಂತೆ ಕಾಫಿ ನಾಡು ಚಿಕ್ಕಮಗಳೂರು, ಹಾಸನದಲ್ಲಿ ಬೆಳೆಯಲಾಗುತ್ತದೆ. ಇದನ್ನು ಹೊರತುಪಡಿಸಿ ಇಟಲಿ, ಬೆಲ್ಜಿಯಂ ಮತ್ತು ರಷ್ಯಾದಿಂದ ಕಾಫಿ ಆಮದು ಮಾಡಿಕೊಳ್ಳಲಾಗುತ್ತದೆ.
ಕಾಫಿ ಬೀಜ ಬೆಳೆ ಕೊರತೆ, ಕಾಫಿ ಪುಡಿ ಬೆಲೆ ಏರಿಕೆ
ಬ್ರೆಝಿಲ್ ಮತ್ತು ವಿಯೇಟ್ನಾಂ ವಿಶ್ವದಲ್ಲೇ ಅತ್ಯಧಿಕ ಕಾಫಿ ಬೆಳೆಯುವ ದೇಶ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇವೆರಡೂ ದೇಶಗಳಲ್ಲಿ ಕಾಫಿ ಬೆಳೆ ಕೊರತೆ ಕಾಣಿಸಿಕೊಂಡಿದೆ. ತಜ್ಞರ ಪ್ರಕಾರ ದಿಢೀರ್ ಆಗಿ ನಷ್ಟ ಕಂಡ ಈ ಕೃಷಿ ಬೆಳೆಯು ಮತ್ತೆ ಸುಧಾರಿಸಿಕೊಳ್ಳಬೇಕಾದರೆ ಆರೇಳು ವರ್ಷವಾದರೂ ಬೇಕಾದೀತು. ಬ್ರೆಝಿಲ್ ಮತ್ತು ವಿಯೇಟ್ನಾಂನಲ್ಲಿ ಕಾಫಿ ಬೆಲೆ ಕೊರತೆ ಉಂಟಾಗಿರುವುದು ಜಾಗತಿಕ ಮಾರುಕಟ್ಟೆಗೆ ಏಟು ನೀಡಿದೆ.
ಅರೇಬಿಕಾ ಕಾಫಿ ಹೆಚ್ಚಾಗಿ ಬೆಳೆಯುತ್ತಿದ್ದ ಬ್ರೆಝಿಲ್ನಲ್ಲಿ 2021ರಲ್ಲಿ ಅಧಿಕ ಹಿಮಪಾತ ಸಂಭವಿಸಿದೆ. ದಶಕಗಳಲ್ಲೇ ಅತೀ ಕೆಟ್ಟ ಹವಾಮಾನವನ್ನು 2021ರಲ್ಲಿ ಬ್ರೆಝಿಲ್ ಕಂಡಿದೆ. ಅದರ ಪ್ರಭಾವ ಮಾಸುವ ಮುನ್ನವೇ ಬರಗಾಲ ಬ್ರೆಝಿಲ್ ಕಾಫಿ ಮಾರುಕಟ್ಟೆ ತತ್ತರಿಸುವಂತೆ ಮಾಡಿದೆ. ಇವೆಲ್ಲ ಕಾರಣದಿಂದಾಗಿ ಈ ಬಾರಿಯೂ ಇಳುವರಿ ಕಡಿಮೆಯಾಗಿದೆ, ಕಾಫಿ ಬೆಲೆ ಹೆಚ್ಚಾಗಿದೆ. 2023ರಲ್ಲಿ ಬ್ರೆಝಿಲ್ ಕಾಫಿ ಬೆಲೆ ಅಂದಾಜಿಗಿಂತ ಕಡಿಮೆಯಾಗಿತ್ತು. 2024ರಲ್ಲಿಯೂ ಅದೇ ಸ್ಥಿತಿ.
ಇದನ್ನು ಓದಿದ್ದೀರಾ? ಕೊಡಗು | ಕಾಫಿ ಕಳವು ಪ್ರಕರಣ; ನಾಲ್ವರ ಬಂಧನ
ರೋಬೋಸ್ಟಾ ಕಾಫಿಯನ್ನು ಅಧಿಕವಾಗಿ ಬೆಳೆಯುವ ವಿಯೇಟ್ನಾಂ ಸನ್ನಿವೇಶವೂ ಬ್ರೆಜಿಲ್ನಂತಿದೆ. ಪ್ರವಾಹ, ಬರಗಾಲ – ಹೀಗೆ ಹಲವು ಹವಾಮಾನ ವೈಪರೀತ್ಯಗಳಿಗೆ ಮೈಯೊಡ್ಡಿದ ಕಾಫಿ ಬೆಲೆ ನಾಶವಾಗಿದೆ. ಭಾರತ ಸೇರಿದಂತೆ ಹೆಚ್ಚಿನ ದೇಶಗಳು ಬಳಸುವ ಈ ಕಾಫಿ ತಳಿಯ ರಫ್ತು ಈಗ ಕಡಿಮೆಯಾಗಿದೆ.
ಭಾರತದಲ್ಲಿ ವಾರ್ಷಿಕ 3,65,000 ಟನ್ ಕಾಫಿ ಬೆಳೆಯಲಾಗುತ್ತದೆ. ಈ ಪೈಕಿ ಶೇಕಡ 70ರಷ್ಟು ಯುರೋಪ್ ದೇಶಗಳಿಗೆ ರಫ್ತಾಗುತ್ತದೆ. ಉಳಿದಂತೆ ವಿಯೆಟ್ನಾಂ, ಬ್ರೆಝಿಲ್ ಸೇರಿದಂತೆ ಇತರೆ ದೇಶಗಳಿಂದ ಕಾಫಿ ಆಮದು ಮಾಡಿಕೊಳ್ಳಲಾಗುತ್ತದೆ. 2023ರಲ್ಲಿ ಭಾರತ 193 ಮಿಲಿಯನ್ ಡಾಲರ್ ಮೌಲ್ಯದ ಕಾಫಿ ಆಮದು ಮಾಡಿಕೊಂಡಿದೆ. ಈ ಆಮದು ರಫ್ತು ನಡುವೆ ಭಾರತದಲ್ಲಿ ಕಾಫಿ ಬೆಲೆ ಹೆಚ್ಚಾಗುತ್ತಿದೆ.
2024ರಲ್ಲಿ ತೀವ್ರ ಮಳೆ, ಭೂಕುಸಿತದಿಂದಾಗಿ ಕರ್ನಾಟಕದಲ್ಲಿ ಕಾಫಿ ಬೆಳೆ ನಷ್ಟವಾಗಿದೆ. ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಕಾಫಿ ಬೆಳೆ ಶೇಕಡ 60ರಷ್ಟು ಕಡಿಮೆಯಾಗಿದೆ. ಈ ವರ್ಷ ಕಾಫಿ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ರಾಜ್ಯದಲ್ಲಿ ಬೆಳೆಗಾರರಲ್ಲಿ ಉತ್ಸಾಹ ತುಂಬಿದೆ. ಕಾಫಿ ಪ್ಲ್ಯಾಂಟ್ಗಳಿಗೆ ಚಿತ್ರದುರ್ಗ, ಪಾಲಕ್ಕಾಡ್, ತುಮಕೂರು, ಹೊಸೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕೃಷಿಕರು ಕರೆ ಮಾಡಿ ಕಾಫಿ ಬೆಳೆಯುವ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಆದರೆ ಈ ಬೆಲೆ ಏರಿಕೆ ಕಾಫಿ ಪ್ರಿಯರಿಗೆ ಕೊಂಚ ಏಟು ನೀಡಿದೆ. ಸದ್ಯ ಹೋಟೆಲ್ಗಳಲ್ಲಿ ಕಾಫಿ ಬೆಲೆ ಹೆಚ್ಚಾಗದಿದ್ದರೂ ಈ ತಿಂಗಳು ಕಳೆಯುತ್ತಿದ್ದಂತೆ ದರ ಏರಿಸಲು ಮಾಲೀಕರು ಸಜ್ಜಾಗಿದ್ದಾರೆ.
ಕಾಫಿ ಬೆಳಗಾರರು ಹೇಳುವುದೇನು?
ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯೆ ನೀಡಿದ ಕೊಡಗಿನ ಕಾಫಿ ಬೆಳೆಗಾರ ತೇಜಸ್ ನಾಣಯ್ಯ, “ಈ ವರ್ಷ ಕಾಫಿ ಇಳುವರಿ ನನಗೆ ಹೆಚ್ಚಾಗಿದೆ. ಆದರೆ ಬಹುತೇಕ ರೈತರಿಗೆ ಕಾಫಿ ಬೆಳೆಯಲ್ಲಿ ಹೆಚ್ಚು ಇಳುವರಿ ಸಿಕ್ಕಿಲ್ಲ. ಪ್ರತಿ ದಿನ ಕೇವಲ ಒಂದು ಬಾರಿ ಮಾತ್ರ ನೀರು ಹಾಕಿರುವುದೇ ಇದಕ್ಕೆ ಕಾರಣ” ಎಂದು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ವೈಯಕ್ತಿಕ ದ್ವೇಷಕ್ಕೆ ಕಾಫಿತೋಟ ನಾಶ ಮಾಡಿದ ಕಿಡಿಗೇಡಿಗಳು
“ಮಳೆ ಬಂದರೂ ಕೂಡಾ ಕಾಫಿ ಬೆಳೆಗೆ ಪ್ರತಿ ದಿನ ಎರಡು ಬಾರಿ ನೀರು ಹಾಕುವ ಅಗತ್ಯವಿದೆ. ಎರಡು ಬಾರಿ ನೀರು ಹಾಕಿದ ಕಾರಣ ನನಗೆ ಉತ್ತಮ ಇಳುವರಿ ಬಂದಿದೆ. ಈ ಬಾರಿ ಕಾಫಿಗೆ ಉತ್ತಮ ಬೆಲೆಯಿದೆ. ರೈತರಿಗೆ ಕಾಫಿ ಅತೀ ಲಾಭದಾಯಕ ಕೃಷಿ” ಎಂದು ಹೇಳಿದ್ದಾರೆ.
ಆದರೆ ಕಾರ್ಮಿಕರ ಸಮಸ್ಯೆಯೂ ಕಾಡುತ್ತಿದೆ ಎಂದು ಕಾಫಿ ಬೆಳಗಾರ ತೇಜಸ್ ತಿಳಿಸಿದ್ದಾರೆ. “ಕಾಫಿ ಇಳುವರಿ ಉತ್ತಮವಾಗಿ ಬಂದು, ಕಾಫಿ ಬೆಲೆ ಹೆಚ್ಚಾಗಿದ್ದರೂ ಕೂಡಾ ಕಾರ್ಮಿಕರ ಸಮಸ್ಯೆ ತಪ್ಪಿದಲ್ಲ. ಇತ್ತೀಚೆಗೆ ಕಾರ್ಮಿಕರು ಸಿಗುತ್ತಿಲ್ಲ. ಈ ಹಿಂದೆ ಕಾರ್ಮಿಕರು 400 ರೂಪಾಯಿ ಕೂಲಿ ಪಡೆಯುತ್ತಿದ್ದರು, ಆದರೆ ಈಗ 600 ರೂಪಾಯಿ ಕೇಳುತ್ತಾರೆ. ಈ ವರ್ಷವೂ ಫಸಲು ಚೆನ್ನಾಗಿದೆ. ರಸಗೊಬ್ಬರ ಬೆಲೆ ಹೆಚ್ಚಾಗಿದೆ, ಆದರೆ ಅದರಂತೆ ಕಾಫಿ ಬೆಲೆಯೂ ಇದೆ. ಹೆಚ್ಚು ಹೊರೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿಯೂ ಹೀಗೆಯೇ ಉತ್ತಮ ಇಳುವರಿ ಬಂದರೆ ಸಾಕು” ಎಂದಿದ್ದಾರೆ.
ಯಾವುದೇ ವಸ್ತುಗಳ ಬೆಲೆ ಹೆಚ್ಚಾದರೂ ನೇರ ಪ್ರಭಾವ ಗ್ರಾಹಕರ ಮೇಲೆ ಬೀಳುತ್ತದೆ. ದಿನನಿತ್ಯದ ಖರ್ಚು ಅಧಿಕವಾದರೂ ವೇತನ ಮಾತ್ರ ಏರಿಕೆಯಾಗಿಲ್ಲ. ದುಬಾರಿ ಯುಗದಲ್ಲಿ ಕಾಲದೂಡುವುದು ತುಟ್ಟಿ ಎಂದು ಸಚಿವರು, ಶಾಸಕರುಗಳ ವೇತನ ದುಪ್ಪಟ್ಟು ಹೆಚ್ಚಿಸಿದಂತೆ ಜನ ಸಾಮಾನ್ಯರ ವೇತನವು ಅಧಿಕವಾಗಬೇಕಿದೆ. ಈ ಹಣದುಬ್ಬರದ ನಡುವೆ ಹಾಲಿನ ದರ, ಕಾಫಿ, ಚಹಾ, ಸಕ್ಕರೆ, ಅಕ್ಕಿ, ತರಕಾರಿ, ಮಾಂಸ- ಹೀಗೆ ತಿಂಗಳ ವೆಚ್ಚ ಅಧಿಕವಾಗುತ್ತದೆಯೇ ಹೊರತು ಕಡಿಮೆಯಾಗದು. ಜನರಿಗೆ ಈ ಬೆಲೆ ಏರಿಕೆಯಿಂದ ಮುಕ್ತಿ ನೀಡುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳುವುದು ಅನಿವಾರ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.