- ಒಂದು ಕೋಟಿ 10 ಲಕ್ಷ ಬಹುಮಾನ ಘೋಷಿಸಿದ ತಮಿಳುನಾಡು ಸಿಎಂ ಸ್ಟ್ಯಾಲಿನ್
- ಮಲೇಷ್ಯಾವನ್ನು 4-3 ಗೋಲುಗಳಿಂದ ಸೋಲಿಸಿದ ಭಾರತ ಪುರುಷರ ಹಾಕಿ ತಂಡ
ಚೆನ್ನೈನಲ್ಲಿ ಶನಿವಾರ ರಾತ್ರಿ ನಡೆದ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ರೋಚಕ ಫೈನಲ್ನಲ್ಲಿ ಮಲೇಷ್ಯಾವನ್ನು 4-3 ಗೋಲುಗಳಿಂದ ಸೋಲಿಸಿ, ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ತಮಿಳುನಾಡು ಸಿಎಂ ಒಂದು ಕೋಟಿ 10 ಲಕ್ಷ ಬಹುಮಾನ ಘೋಷಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್, ‘4ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿರುವ ಟೀಮ್ಇಂಡಿಯಾಕ್ಕೆ ಅಭಿನಂದನೆಗಳು. ನಿಮ್ಮ ಸಾಧನೆ ಗಮನಾರ್ಹವಾದದ್ದು. ಭಾರತ ತಂಡದ ಅದ್ಭುತ ಗೆಲುವಿಗಾಗಿ 1,10,00,000 ಬಹುಮಾನವನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ’ ಎಂದು ತಿಳಿಸಿದ್ದಾರೆ.
ರೋಚಕ ಫೈನಲ್
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ರೋಚಕ ಫೈನಲ್ನಲ್ಲಿ ಮಲೇಷ್ಯಾವನ್ನು 4-3 ಗೋಲುಗಳಿಂದ ಸೋಲಿಸಿದ್ದ ಭಾರತ ಪುರುಷರ ಹಾಕಿ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಎತ್ತಿಹಿಡಿದಿತ್ತು.
ಚೆನ್ನೈನಲ್ಲಿ ನಡೆದ ಫೈನಲ್ನಲ್ಲಿ, ಆತಿಥೇಯ ಭಾರತವು ವಿರಾಮದ ವೇಳೆಗೆ 1-3 ರಿಂದ ಹಿನ್ನಡೆಯಲ್ಲಿತ್ತು. ಆದರೆ ಭಾರತವು ಒಂದು ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ 3-3 ರಿಂದ ಸಮಬಲ ಸಾಧಿಸಿತು.
ಪಂದ್ಯವು 3-3ರಿಂದ ಸಮಬಲಗೊಂಡಿದ್ದಾಗ 56ನೇ ನಿಮಿಷದಲ್ಲಿ ಅಮೋಘ ಫೀಲ್ಡ್ ಗೋಲು ಗಳಿಸಿದ ಆಕಾಶದೀಪ್ ಸಿಂಗ್ ಭಾರತಕ್ಕೆ 4-3 ಮುನ್ನಡೆ ಒದಗಿಸಿಕೊಟ್ಟರು. ಈ ಗೋಲಿನ ನೆರವಿನಿಂದ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು.
ಇದಕ್ಕೂ ಮೊದಲು ಭಾರತ 2011, 2016 ಮತ್ತು 2018ರಲ್ಲಿ ಚಾಂಪಿಯನ್ ಆಗಿತ್ತು. 2012ರಲ್ಲಿ ಟೀಂ ಇಂಡಿಯಾ ರನ್ನರ್ ಅಪ್ ಆಗಿತ್ತು.