ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ಗಳ ಮೇಲೆ ಏಕಾಏಕಿ ಪುಂಡರು ಅಟ್ಟಹಾಸ ಮೆರೆದಿದ್ದು, ರಾಡ್, ದೊಣ್ಣೆ, ಕಲ್ಲುಗಳಿಂದ ಬಸ್ನ ಗಾಜು ಹೊಡೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಈ ಘಟನೆ ಬೆಂಗಳೂರಿನ ಶಾಂತಲಾ ಸಿಗ್ನಲ್ ಬಳಿ ಜನವರಿ 16ರ ಮಧ್ಯರಾತ್ರಿ 1.45ರ ಸುಮಾರಿಗೆ ನಡೆದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಇಮ್ರಾನ್ ಮತ್ತು ಆರೀಫ್ ಎಂಬುವವರನ್ನು ಕಾಟನ್ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಘಟನೆ?
ಮೈಸೂರಿನಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಎರಡು ಬಸ್ಗಳು ಬರುತ್ತಿದ್ದವು. ಈ ವೇಳೆ, ಶಾಂತಲಾ ಸಿಗ್ನಲ್ ಬಳಿ ಎರಡು ಬಸ್ಗಳೂ ನಿಂತಿವೆ. ಬಸ್ಗಳ ಹಿಂದೆಯೇ ಆಟೋ ಹಾಗೂ ಎರಡು ಬೈಕ್ಗಳಲ್ಲಿ ಬಂದ ಪುಂಡರ ಗ್ಯಾಂಗ್ವೊಂದು ಏಕಾಏಕಿ ರಾಡ್, ದೊಣ್ಣೆ ಹಾಗೂ ಕಲ್ಲುಗಳಿಂದ ಬಸ್ನ ಕಿಟಕಿ ಗಾಜು ಹೊಡೆದು ಪರಾರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎರಡು ಬೈಕ್ಗಳ ನಡುವೆ ಭೀಕರ ಅಪಘಾತ: ತಂದೆ-ಮಗಳು ಸಾವು
ಈ ಘಟನೆ ನಡೆಯಲು ಕಾರಣ ಏನು ಎಂಬ ಬಗ್ಗೆ ಇನ್ನು ನಿಖರ ಮಾಹಿತಿ ಸಿಕ್ಕಿಲ್ಲ. ಸದ್ಯ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.