ಭಾರತದ ಹೈಟೆಕ್ ಉದ್ಯಮದ ಕೇಂದ್ರವಾದ ಬೆಂಗಳೂರಿನಲ್ಲಿ ಆಟೋಗಳು ಬಡವರ ರಥ ಎಂದೆನಿಸಿಕೊಂಡಿದ್ದವು. ಆದರೆ, ಈಗ ನಗರದಲ್ಲಿ ಆಟೋ ಚಾಲಕರದ್ದೇ ದರ್ಬಾರ್ ನಡೆಯುತ್ತಿದೆ. ಮೊದಲೆಲ್ಲ ರಾತ್ರಿ ವೇಳೆ ಮಾತ್ರ, ಮೀಟರ್ಗಿಂತ ಹೆಚ್ಚು ಹಣ ಕೇಳುತ್ತಿದ್ದ ಆಟೋ ಚಾಲಕರು, ಇದೀಗ ಬೆಳಂಬೆಳಗ್ಗೆಯೇ ದುಪ್ಪಟ್ಟು ಹಣ ಕೇಳಲು ಆರಂಭಿಸಿದ್ದಾರೆ. ಬೆಳಗ್ಗೆ ಇರಲಿ, ಮಧ್ಯಾಹ್ನ ಇರಲಿ ಅಥವಾ ರಾತ್ರಿಯೇ ಇರಲಿ ಮೀಟರ್ ಮೇಲೆ ಅವರು ಕೇಳಿದಷ್ಟು ಹಣ ಕೊಡಲೇಬೇಕು. ಇಲ್ಲವಾದಲ್ಲಿ, ನಗರವಾಸಿಗಳು ಆಟೋ ಹತ್ತುವುದೇ ಕಷ್ಟಸಾಧ್ಯವಾಗಿಬಿಟ್ಟಿದೆ.
ಬೆಂಗಳೂರು ಸುಮಾರು 800 ಚದರ ಕಿ.ಮೀ ವ್ಯಾಪಿಸಿದೆ. ಇಲ್ಲಿ, ಸರಿಸುಮಾರು 1.30 ಕೋಟಿಗೂ ಅಧಿಕ ಜನರಿದ್ದಾರೆ. ದಿನಕ್ಕೆ 45 ಲಕ್ಷಕ್ಕೂ ಅಧಿಕ ಮಂದಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಬಳಕೆ ಮಾಡಿದರೆ, 7 ಲಕ್ಷಕ್ಕೂ ಅಧಿಕ ಜನರು ‘ನಮ್ಮ ಮೆಟ್ರೋ’ ಬಳಸುತ್ತಿದ್ದಾರೆ. ಉಳ್ಳವರು ವೈಯಕ್ತಿಯ ವಾಹನಗಳನ್ನು ಬಳಸುತ್ತಿದ್ದಾರೆ. ಇನ್ನುಳಿದಂತೆ ಬಿಬಿಎಂಟಿ, ಮೆಟ್ರೋ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಹಾಗೂ ತುರ್ತುಸಂದರ್ಭಗಳಲ್ಲಿ ಬಡ, ಮಧ್ಯಮ ವರ್ಗದ ಹೆಚ್ಚಿನ ಜನರು ಆಟೋಗಳನ್ನೇ ತಮ್ಮ ತೇರಾಗಿ ಅವಲಂಬಿಸಿದ್ದಾರೆ.
ನಗರದಲ್ಲಿ ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 2.10 ಲಕ್ಷ ಆಟೋಗಳಿವೆ. ನಿತ್ಯ 50 ಲಕ್ಷಕ್ಕೂ ಹೆಚ್ಚು ಜನರನ್ನು ಹೊತ್ತು ಸಾಗುವ ಆಟೋಗಳು ಇದೀಗ ನಗರದಲ್ಲಿ ತಮ್ಮದೇ ದರ್ಬಾರ್ ಆರಂಭಿಸಿದ್ದಾರೆ. ಸದ್ಯ ನಗರದಲ್ಲಿ ಮಧ್ಯಮ ವರ್ಗದವರು ಮತ್ತು ಬಡವರು ಈ ಆಟೋಗಳಲ್ಲಿ ಹೆಚ್ಚಾಗಿ ಸಂಚಾರ ಮಾಡುತ್ತಾರೆ. ಅದರಲ್ಲಿಯೂ ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು ಆಟೋ ಬಳಕೆ ಮಾಡುವುದು ಹೆಚ್ಚು. ದುಡಿಯುವ ವರ್ಗದ ಮಹಿಳೆಯರಲ್ಲಿ ಶೇ.60 ರಷ್ಟು ಮಂದಿ ಮನೆಯಿಂದ ಕೆಲಸದ ಸ್ಥಳಕ್ಕೆ ಹಾಗೂ ಕೆಲಸದ ಸ್ಥಳದಿಂದ ಮನೆಗೆ ಆಟೊಗಳ ಮೇಲೆ ಅವಲಂಬಿತರಾಗಿದ್ದಾರೆ.
ಅದೇನೆ ಇರಲಿ, ಸಾರಿಗೆ ಇಲಾಖೆ ನಿಯಮದ ಪ್ರಕಾರ ಆಟೋ ಚಾಲಕರು ಪ್ರಯಾಣಿಕರು ಕರೆದ ಕಡೆ ಹೋಗಬೇಕು. ಮೀಟರ್ ದುಡ್ಡಿಗಿಂತ ಹೆಚ್ಚಿನ ಹಣ ಪ್ರಯಾಣಿಕರಿಂದ ಪಡೆಯಬಾರದು. ಹಾಗೆಯೇ, ಸಂಚಾರ ನಿಯಮ ಪಾಲನೆ ಕಡ್ಡಾಯವಾಗಿದೆ. ಆದರೆ, ಈ ಮೂರು ನಿಯಮಗಳೇಂದರೆ ಆಟೋ ಚಾಲಕರಿಗೆ ಅಸಡ್ಡೆ. ನಗರದಲ್ಲಿ ಲಕ್ಷಗಟ್ಟಲೆ ಆಟೋಗಳಿದ್ದರೂ, ಪ್ರಯಾಣಿಕರು ಕರೆದಲ್ಲಿಗೆ ಬರಲು ಆಟೋಗಳಿಲ್ಲ. ಆಟೋ ಚಾಲಕರು ಹೋಗುವ ಕಡೆಗೆ ಪ್ರಯಾಣಿಕರು ತೆರಳುವಂತಾಗಿದೆ.
ಇಷ್ಟು ದಿನ, ನಗರದಲ್ಲಿ ರಾತ್ರಿ ಸಮಯ ಹಾಗೂ ಮೆಜೆಸ್ಟಿಕ್, ಯಶವಂತಪುರದಿಂದ ಸಂಚಾರ ಒದಗಿಸುವ ಆಟೋ ಚಾಲಕರು ಬೆಳಂಬೆಳಗ್ಗೆಯೇ ಮೀಟರ್ ಮೇಲೆ ಹೆಚ್ಚಿನ ಹಣ ಪಡೆಯುತ್ತಿದ್ದರು. ಆದರೆ ಇದೀಗ, ದುಪ್ಪಟ್ಟು ಹಣ ಕೇಳುವ ಚಾಳಿ ಬೆಂಗಳೂರಿನಾದ್ಯಂತ ವ್ಯಾಪಿಸಿದೆ. ನಗರದ ಹಲವೆಡೆ ಬೆಳ್ಳಂಬೆಳಿಗ್ಗೆ ಮೀಟರ್ ಮೇಲೆ ಹೆಚ್ಚಿನ ಹಣ ನೀಡಿದರೆ ಮಾತ್ರ ಪ್ರಯಾಣಿಕರು ಕರೆದ ಕಡೆಗೆ ಬರುತ್ತಾರೆ. ಇಲ್ಲದಿದ್ದರೆ, ಪ್ರಯಾಣಿಕರು ಆಟೋಗಾಗಿ ಕಾದು ಕಾದು ಸುಸ್ತಾದರೂ ಯಾವ ಆಟೋಗಳು ನಿಲ್ಲಿಸದಂತಹ ಪರಿಸ್ಥಿತಿ ಎದುರಾಗಿದೆ.
‘ಹೊಟ್ಟೆ ತುಂಬಿದವನಿಗೆ ಹಸಿವಿನ ಸಂಕಟ ಏನು ಗೊತ್ತು?’ ಎಂಬ ಗಾದೆ ಮಾತಿನಂತೆ ಆಟೋ ಚಾಲಕರು ದುಡಿಯುವ ಹಂಬಲಕ್ಕಿಂತ ಜನರಿಂದ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ. ಬಹುತೇಕ ಆಟೋ ಚಾಲಕರು ಡಿಜಿಟಲ್ ಮೀಟರ್ ಅಳವಡಿಸಿಲ್ಲ. ಅಲ್ಲದೆ, ಸಾರಿಗೆ ನಿಯಮಗಳನ್ನು ಪಾಲಿಸದೇ ಪ್ರಯಾಣಿಕರನ್ನು ವಂಚಿಸುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ.
ಈ ಹಿಂದೆ ಆಟೋಗಳಿಗೆ ಕನಿಷ್ಠ ಚಾರ್ಜ್ ₹25 ಇತ್ತು. ಸದ್ಯ ಈ ದರವನ್ನು ಹೆಚ್ಚಿಸಲಾಗಿದ್ದು, ₹30 ನಿಗದಿಯಾಗಿದೆ. ಜತೆಗೆ ಈ ಹಿಂದೆ ಒಂದು ಕಿ.ಮೀಗೆ ₹13 ಮೀಟರ್ ಮುಖಾಂತರ ಪಡೆದುಕೊಳ್ಳಲಾಗುತ್ತಿತ್ತು. ಇದೀಗ, ಮೀಟರ್ ದರವನ್ನು ₹2 ಏರಿಕೆ ಮಾಡಿ, ಒಂದು ಕಿ.ಮೀಗೆ ₹15 ಪಡೆಯಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕನಿಷ್ಠ 2 ಕಿ.ಮೀ ಪ್ರಯಾಣಕ್ಕೆ ₹30 ಹಾಗೂ ನಂತರ ಪ್ರತಿ ಕಿ.ಮೀಗೆ ₹15 ಪಡೆಯಬೇಕು. ಒಂದು ವೇಳೆ, ಮೀಟರ್ ಹಾಕದೇ ಹೆಚ್ಚಿನ ಹಣ ಪಡೆದರೆ, ಅಂತಹ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶಿಸಿದೆ. ಆದರೆ, ಅದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ.
ಸುರಕ್ಷಿತ ಹಾಗೂ ಸುಲಭ ಪ್ರಯಾಣದ ಸೇವೆ ನೀಡಬೇಕಿದ್ದ ಆಟೋ ಚಾಲಕರು, 2 ಕಿ.ಮೀ ವ್ಯಾಪ್ತಿಗೂ ₹80 ನಿಂದ ₹100 ವರೆಗೆ ವಸೂಲಿ ಮಾಡುತ್ತಿದ್ದಾರೆ. ಆಗಾಗ್ಗೆ ತಪಾಸಣೆ ನಡೆಸಿ, ದಂಡ ಹಾಕದ ಕಾರಣ ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿಗಿಳಿದಿದ್ದಾರೆ ಎಂಬ ಆರೋಪಗಳು ಕೂಡ ಸಾರಿಗೆ ಮತ್ತು ಸಂಚಾರ ಇಲಾಖೆ ವಿರುದ್ಧ ಕೇಳಿ ಬರುತ್ತಿವೆ.
ನ್ಯೂರಲ್ ಗ್ಯಾರೇಜ್ನ ಸಹ-ಸಂಸ್ಥಾಪಕ ಮತ್ತು ಸಿಇಒ ಮಂದರ್ ನಾಟೇಕರ್ ಅವರು ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಅಗ, ಅವರು ಆಟೋದ ಮೀಟರ್ ಫೋಟೋ ಪೋಸ್ಟ್ ಮಾಡಿ, ಇದು ‘ಬೆಂಗಳೂರಿನ ಅತ್ಯಂತ ಅಲಂಕಾರಿಕ ವಸ್ತು’ ಎಂದು ಹಾಸ್ಯಮಯವಾಗಿ ಉಲ್ಲೇಖಿಸಿದ್ದರು. ಅಲ್ಲದೇ, ಬೆಂಗಳೂರಿನಲ್ಲಿ ಆಟೋ ಚಾಲಕರು ಮೀಟರ್ ಅನ್ನು ತುಂಬಾ ವಿರಳವಾಗಿ ಬಳಸುತ್ತಾರೆ ಎಂದು ವ್ಯಂಗ್ಯ ಮಾಡಿದ್ದರು. 500 ಮೀಟರ್ ಆಟೋ ಸವಾರಿಗೆ ₹100 ಪಾವತಿಸಿದ ಬಗ್ಗೆ ಅವರು ತಮ್ಮ ಅನುಭವವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಅಧಿವೇಶನದಲ್ಲಿ ಪ್ರಸ್ತಾಪ
ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಶಾಸಕ ಸಿ.ಕೆ. ರಾಮಮೂರ್ತಿ ಅವರು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು.
“ನಗರದಲ್ಲಿ ಆಟೋ ಚಾಲಕರು ಮೀಟರ್ ಹಾಕದೇ ಕನಿಷ್ಠ 2 ಕಿ.ಮೀ. ವ್ಯಾಪ್ತಿಗೂ ₹80 ನಿಂದ ₹100 ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೆ, ಪ್ರಯಾಣಿಕರು ಕೇಳಿದ ಕಡೆ ಹೋಗಲು ನಿರಾಕರಿಸುತ್ತಿದ್ದಾರೆ. ಇದರಿಂದ ಬಡವರು, ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ಆಟೋ ಚಾಲಕರು ಕಡ್ಡಾಯವಾಗಿ ಮೀಟರ್ ಹಾಕಿ ಓಡಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು” ಎಂದು ಅವರು ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಾರಿಗೆ ಸಚಿವರು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ₹372.13 ಕೋಟಿ ವೆಚ್ಚದಲ್ಲಿ ರಾಷ್ಟ್ರವ್ಯಾಪಿ 1,275 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ
ರಾಜಧಾನಿಯಲ್ಲಿ ಆಟೋ ಚಾಲಕರ ದರ್ಬಾರ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಪ್ರಯಾಣಿಕ ಸುಕೇಶ್, “ಸಾಮಾನ್ಯವಾಗಿ ನಾನು ಬೆಳಿಗ್ಗೆ ಕೆಲಸಕ್ಕೆ ಹೋಗಬೇಕಾದರೆ ಆಟೋಗಳನ್ನೇ ಅವಲಂಬಿಸಿದ್ದೇನೆ. ಬಸ್ನಲ್ಲಿ ಪ್ರಯಾಣಿಸಿ ಆಫೀಸ್ ಹೋಗಿ ಮುಟ್ಟೊದು ಲೇಟ್ ಆಗುತ್ತದೆಂಬ ಕಾರಣ ಆಟೋಗಳ ಮೊರೆ ಹೋಗುತ್ತೇನೆ. ರಸ್ತೆಯಲ್ಲಿ ನಿಂತು ಎಷ್ಟೇ ಕೈ ಬೀಸಿದರೂ ಒಂದೇ ಒಂದು ಆಟೋ ನಿಲ್ಲೋದಿಲ್ಲ. ನಿಂತರು ಮೀಟರ್ ಮೇಲೆ ₹20 ಕೊಡಿ, ₹50 ಕೊಟಿ, ₹100 ಕೊಡಿ ಎನ್ನುತ್ತಾರೆ. ಆಫೀಸ್ಗೆ ತಡವಾಗುತ್ತದೆ ಎಂದು ಬೇರೆ ವಿಧಿಯಲ್ಲದೇ ಅವರು ಕೇಳಿದಷ್ಟು ಹಣ ಕೊಟ್ಟು ತೆರಳಬೇಕಾಗುತ್ತದೆ” ಎಂದು ಹೇಳಿದರು.
ಮತ್ತೋರ್ವ ಪ್ರಯಾಣಕಿ ಸುಮಲತಾ ಈ ದಿನ.ಕಾಮ್ ಜತೆಗೆ ಮಾತನಾಡಿ, “ಸರ್ವೇ ಸಾಮಾನ್ಯವಾಗಿ ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಯಶವಂತಪುರದ ಬಳಿ ಬೆಳ್ಳಿಗೆಯ ಸಮಯದಲ್ಲಿಯೂ ಆಟೋ ಚಾಲಕರು ಕರೆದ ಕಡೆ ಬರುವುದಿಲ್ಲ. ಬಂದರೂ, ಅವರು ಕೇಳಿದಷ್ಟು ಹಣ ನೀಡಬೇಕಾಗುತ್ತದೆ. ಇದೀಗ, ನಗರದ ಹಲವೆಡೆ ಆಟೋ ಚಾಲಕರು ಮೀಟರ್ ಮೇಲೆ ಹೆಚ್ಚಿನ ಹಣ ಕೇಳುತ್ತಿದ್ದಾರೆ. ಇದು ಸರಿಯಲ್ಲ. ಇದು ಸಂಪೂರ್ಣ ನಿಯಮ ಉಲ್ಲಂಘನೆಯಾಗಿದೆ. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡ ಆಟೋ ಚಾಲಕರ ದರ್ಬಾರ್ಗೆ ಬ್ರೇಕ್ ಹಾಕಬೇಕಾಗಿದೆ. ಇಲ್ಲವಾದರೇ, ಬಡವರು, ಮಧ್ಯಮವರ್ಗದವರಿಗೆ ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ” ಎಂದು ತಿಳಿಸಿದರು.
“ಮೀಟರ್ ಮೇಲೆ ಹೆಚ್ಚಿನ ದುಡ್ಡು ತಿಂದು ಏನಾಗಬೇಕಾಗಿದೆ. ಸರ್ಕಾರ ನಿಯಮ ರೂಪಿಸಿ ಪ್ರಯಾಣಿಕರಿಂದ ಇಷ್ಟು ಹಣ ತೆಗೆದುಕೊಳ್ಳಿ ಎಂದು ಹೇಳಿದ ಮೇಲೆ, ಅದನ್ನು ಮೀರಿ ನಾವು ಹೆಚ್ಚಿನ ಹಣ ತೆಗೆದುಕೊಳ್ಳಬಾರದು. ನಮ್ಮ ಆಟೋ ಹತ್ತೋವವರು ಶ್ರೀಮಂತರಲ್ಲ. ಅವರು ಕೂಡ ಬಡವರೇ. ಅವರಿಂದ ಹೆಚ್ಚಿನ ಹಣ ಪಡೆದು ಲಾಭಕ್ಕಾಗಿ ವಂಚನೆ ಮಾಡಬಾರದು” ಎಂದು ಆಟೋ ಚಾಲಕ ಶಿವಪ್ರಸಾದ್ ಈ ದಿನ.ಕಾಮ್ಗೆ ಹೇಳಿದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಎಂ.ಅನುಚೇತ್, “ಈಗಾಗಲೇ, ನಿಯಮ ಮೀರುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಮುಂದೆಯೂ ಕ್ರಮ ಕೈಗೊಳ್ಳಲಾಗುವುದು. ಆಟೋ ಚಾಲಕರು ಪ್ರಯಾಣಿಕರು ಕರೆದಲ್ಲಿಗೇ ಬರದೇ ಇದ್ದರೆ, ಮೀಟರ್ ಮೇಲೆ ಹೆಚ್ಚಿನ ಹಣ ಪಡಿಯುತ್ತಿದ್ದರೆ 112ಗೆ ಕರೆ ಮಾಡಿ ದೂರು ನೀಡಬಹುದು. ನಾವು ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.