ಆರೋಗ್ಯ ತಪಾಸಣೆ ಮಾಡುವ ನೆಪದಲ್ಲಿ ವೈದ್ಯರೊಬ್ಬರು ಯುವತಿಯ ಶರ್ಟ್ ಬಿಚ್ಚಿಸಿ ಅಸಭ್ಯವಾಗಿ ವರ್ತನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಸದ್ಯ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಘಟನೆ ಬೆಂಗಳೂರಿನ ಜರಗನಹಳ್ಳಿಯಲ್ಲಿ ನಡೆದಿದೆ. ನಂತರ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲಾಗಿದೆ. ಇದನ್ನು ರದ್ದು ಮಾಡುವಂತೆ ಕೋರಿ ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, “ಪ್ರಕರಣದಲ್ಲಿ ಅನಪೇಕ್ಷಿತ ಮತ್ತು ಸ್ಪಷ್ಟವಾದ ಲೈಂಗಿಕ ಪ್ರಚೋದನೆ ಕಂಡುಬಂದಿರುವ ಕಾರಣ ವೈದ್ಯರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಮೊಕದಮ್ಮೆಯನ್ನು ರದ್ದುಗೊಳಿಸಲಾಗದು” ಎಂದು ಹೇಳಿದೆ.
“ಭಾರತೀಯ ವೈದ್ಯಕೀಯ ಮಂಡಳಿಯು ನಿಗದಿಪಡಿಸಿರುವ ಲೈಂಗಿಕ ಮಿತಿಗಳ ಕುರಿತ ಮಾರ್ಗಸೂಚಿಗಳ ಪ್ರಕಾರ, ಮಹಿಳಾ ರೋಗಿಯನ್ನು ಪುರುಷ ವೈದ್ಯರು ಪರೀಕ್ಷಿಸುವಾಗ, ಅದರಲ್ಲಿಯೂ ದೈಹಿಕ ಪರೀಕ್ಷೆಯ ಸಮಯದಲ್ಲಿ ಇನ್ನೊಬ್ಬ ಮಹಿಳೆಯ ಉಪಸ್ಥಿತಿಯು ಅವಶ್ಯಕವಾಗಿದೆ. ಆದರೆ, ವೈದ್ಯರು ಆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದಿದೆ.
“ವೈದ್ಯರು ಮತ್ತು ರೋಗಿಯ ನಡುವಿನ ನಂಬಿಕೆಯ ದುರ್ಬಳಕೆಯನ್ನು ಸಹಿಸಲಾಗುವುದಿಲ್ಲ. ಈ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡರೆ ಇಬ್ಬರ ನಡುವಿನ ಸಂಬಂಧ ಹಾಳುಗುತ್ತದೆ” ಕೋರ್ಟ್ ಹೇಳಿದೆ.
“ದೂರುದಾರರ ಬಳಿ ವೈದ್ಯರು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಆರೋಗ್ಯ ತಪಾಸಣೆ ವೇಳೆ, ಯುವತಿಯ ಶರ್ಟ್ ಮತ್ತು ಒಳ ಉಡುಪು ಬಿಚ್ಚುವಂತೆ ಹೇಳಿ, ಮಹಿಳೆಯ ಸ್ತನ ಸ್ಪರ್ಶಿಸಿ ಮುತ್ತು ನೀಡಿದ ಆರೋಪ ಎದುರಿಸುತ್ತಿದ್ದಾರೆ” ಎಂದಿದೆ.
“ರೋಗಿಯ ದೇಹದ ತಪಾಸಣೆ ಮಾಡುವ ಹಕ್ಕು ವೈದ್ಯರಿಗಿದೆ. ಆದರೆ, ಅದನ್ನು ಬೇರೆ ಯಾವುದೇ ಭಾವನೆಗಳಿಗೆ ಬಳಸಿಕೊಳ್ಳುವಂತಿಲ್ಲ. ರೋಗಿಗಳು ದುರ್ಬಲ ಸ್ಥಿತಿಯಲ್ಲಿದ್ದಾಗ ತಮ್ಮ ಸಹಾಯವನ್ನು ಪಡೆಯುತ್ತಾರೆ ಎಂಬುದನ್ನು ವೈದ್ಯರು ನೆನಪಿಟ್ಟುಕೊಳ್ಳಬೇಕು ಮತ್ತು ಅಂತಹ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಹೀಗಾಗಿ, ವೈದ್ಯರ ಈ ನಡತೆಯು ಐಪಿಸಿಯ ಸೆಕ್ಷನ್ 354ಎ(1)(i) ಅಡಿ ಅಪರಾಧವೆಂದು ಪರಿಗಣಿಸಲ್ಪಡುವ ಅಂಶಗಳಾಗಿರುತ್ತದೆ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ?
ಸಂತ್ರಸ್ತೆ ಯುವತಿ ಎದೆನೋವಿನಿಂದ ಬಳಲುತ್ತಿದ್ದ ಕಾರಣ ಬೆಂಗಳೂರಿನ ಜೆ.ಪಿ ನಗರದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ವೈದ್ಯರು ಯುವತಿಗೆ ಚಿಕಿತ್ಸೆ ನೀಡಿದ ಬಳಿಕ, ಇಸಿಜಿ ಮತ್ತು ಎದೆಯ ಎಕ್ಸ್-ರೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ. ಆ ವರದಿಗಳನ್ನು ವಾಟ್ಸ್ಆಪ್ ಮೂಲಕ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ.
ಯುವತಿ ವೈದ್ಯರು ಹೇಳಿದಂತೆ ಇಸಿಜಿ ಮತ್ತು ಎದೆಯ ಎಕ್ಸ್-ರೇ ಪರೀಕ್ಷೆ ಮಾಡಿಸಿಕೊಂಡು ವರದಿಗಳನ್ನು ವಾಟ್ಸ್ಆಪ್ ಮೂಲಕ ವೈದ್ಯರಿಗೆ ಕಳುಹಿಸಿದ್ದಾರೆ. ಈ ವರದಿಗಳನ್ನು ನೋಡಿದ ವೈದ್ಯರು ಮಾರ್ಚ್ 21 ರಂದು ಮಧ್ಯಾಹ್ನ 2 ಗಂಟೆಗೆ ಜರಗನಹಳ್ಳಿಯಲ್ಲಿರುವ ತನ್ನ ಕ್ಲಿನಿಕ್ಗೆ ಭೇಟಿ ನೀಡುವಂತೆ ಯುವತಿಗೆ ತಿಳಿಸಿದ್ದರು.
ವೈದ್ಯರು ಹೇಳಿದಂತೆ ಯುವತಿ ಕ್ಲಿನಿಕ್ಗೆ ಭೇಟಿ ನೀಡಿದ್ದರು. ಯುವತಿ ಕ್ಲಿನಿಕ್ಗೆ ಭೇಟಿ ನೀಡಿದ ವೇಳೆ, ವೈದ್ಯರೊಬ್ಬರೇ ಕ್ಲಿನಿಕ್ನಲ್ಲಿ ಇದ್ದರು. ಸಂತ್ರಸ್ತೆಯ ಆರೋಗ್ಯ ತಪಾಸಣೆ ಮಾಡುವ ವೇಳೆ ವೈದ್ಯ, ಆಕೆಯ ಎದೆಯ ಮೇಲೆ ಸ್ಟೆತಸ್ಕೋಪ್ ಇಟ್ಟು ಹೃದಯ ಬಡಿತ ಪರೀಕ್ಷಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ, ಯುವತಿಯ ಶರ್ಟ್ ಮತ್ತು ಒಳ ಉಡುಪು ಬಿಚ್ಚುವಂತೆ ಹೇಳಿ, ಮಹಿಳೆಯ ಸ್ತನ ಸ್ಪರ್ಶಿಸಿ ಮುತ್ತು ನೀಡಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದರ್ಶನ್ ಆರೋಪಿಯಾಗಿರುವ ಕೊಲೆ ಪ್ರಕರಣ: ಹತ್ಯೆಯ ಸಮರ್ಥನೆಗಿಳಿದ ಅಭಿಮಾನಿಗಳು
ಈ ಘಟನೆಯಿಂದ ಭಯಗೊಂಡ ಯುವತಿ ಕೂಡಲೇ ಕ್ಲಿನಿಕ್ನಿಂದ ಓಡಿಬಂದು ಮನೆಯವರಿಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮರುದಿನ ಅವರು ಪುಟ್ಟೇನಹಳ್ಳಿ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು.
ವೈದ್ಯರು ತಮ್ಮ ವಿರುದ್ಧ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ನನ್ನ ಕರ್ತವ್ಯ ಅಷ್ಟೇ ನಿಭಾಯಿಸಿದ್ದೇನೆ. ಯುವತಿಯ ಎದೆಯ ಮೇಲೆ ಸ್ಟೆತ್ಸ್ಕೋಪ್ ಮಾತ್ರ ಇರಿಸಿದ್ದೆ. ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.