2023ರ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈದಿನ.ಕಾಮ್ ರಾಜ್ಯದಲ್ಲಿ ಬೃಹತ್ ಸಮೀಕ್ಷೆ ನಡೆಸಿದೆ. ರಾಜ್ಯದ ಎಲ್ಲ ಭಾಗಗಳ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ವಿವಿಧ ಸಮುದಾಯಗಳ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿಯ ಚುನಾವಣೆಯ ಪ್ರಧಾನ ಸಂಗತಿ ಯಾವುದು ಎನ್ನುವ ಪ್ರಶ್ನೆಯನ್ನು ಮತದಾರರ ಮುಂದಿಟ್ಟಾಗ, ಅದಕ್ಕೆ ಬಹುತೇಕರಿಂದ ಬಂದ ಮೊದಲ ಉತ್ತರ ಭ್ರಷ್ಟಾಚಾರ; ನಂತರ ಬೆಲೆ ಏರಿಕೆ ಮತ್ತು ನಿರುದ್ಯೋಗ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಈ ವರದಿ ಓದಿ: ಚುನಾವಣೆ 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ ‘ಈ ದಿನ.ಕಾಮ್’ನ ಸಮೀಕ್ಷೆ
ಸಾಮಾನ್ಯವಾಗಿ ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಬೆಲೆ ಏರಿಕೆಯು ಒಂದು ಪ್ರಧಾನ ಸಮಸ್ಯೆಯಾಗಿ ತಮ್ಮನ್ನು ಕಾಡುತ್ತಿದೆಯೆಂದು ಮತದಾರರು ಹೇಳುತ್ತಾರೆ. ಈದಿನ ಸಮೀಕ್ಷೆಯಲ್ಲೂ ‘ನಿಮ್ಮನ್ನು ಕಾಡುವ ಪ್ರಧಾನ ಸಂಗತಿಯೇನು’ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟು, ಹಲವು ಆಯ್ಕೆಗಳನ್ನು ನೀಡಲಾಗಿತ್ತು. ಇಲ್ಲಿಯೂ ಹೆಚ್ಚಿನವರು ಬೆಲೆ ಏರಿಕೆಯನ್ನು, ಅದಕ್ಕಿಂತ ಸ್ವಲ್ಪ ಕಡಿಮೆ ಜನರು ಭ್ರಷ್ಟಾಚಾರವನ್ನು ತಮ್ಮನ್ನು ಕಾಡುತ್ತಿರುವ ಸಂಗತಿಯೆಂದು ಹೇಳಿದರು. ಇನ್ನೂ ಕಡಿಮೆ ಪ್ರಮಾಣದ ಮತದಾರರು ಹಲವು ಸಮಸ್ಯೆಗಳನ್ನು ಗುರುತಿಸಿದರು. ಪ್ರತಿಯೊಬ್ಬರೂ ತಮ್ಮನ್ನು ಕಾಡುತ್ತಿರುವ ಎರಡು ಪ್ರಮುಖ ಸಮಸ್ಯೆಗಳನ್ನು ಗುರುತಿಸಬೇಕೆಂದು ಕೇಳಿದ್ದರಿಂದ, ಮೊದಲ ಆಯ್ಕೆಯ ನಂತರ ಇನ್ನೊಂದು ಬಾರಿ ಅದೇ ಪಟ್ಟಿಯನ್ನು ಓದಿ, ಎರಡನೇ ಸಮಸ್ಯೆಯನ್ನು ಗುರುತಿಸಬೇಕೆಂದು ಕೇಳಲಾಯಿತು. ಆಶ್ಚರ್ಯವೆಂದರೆ, ಬೆಲೆ ಏರಿಕೆ ಅಥವಾ ಇನ್ನಿತರ ಸಮಸ್ಯೆಗಳನ್ನು ತಮ್ಮ ಮೊದಲ ಸಮಸ್ಯೆಯನ್ನಾಗಿ ಗುರುತಿಸಿದ್ದವರಲ್ಲಿ ಹೆಚ್ಚಿನವರು ಭ್ರಷ್ಟಾಚಾರವೇ ದೊಡ್ಡ ಸಮಸ್ಯೆ ಎಂದರು. ಮೊದಲ ಮತ್ತು ಎರಡನೆಯ ಆಯ್ಕೆಗಳೆರಡನ್ನೂ ಸೇರಿಸಿದರೆ ಕರ್ನಾಟಕದಲ್ಲಿ ಈ ಸಾರಿಯ ಚುನಾವಣೆಯ ಹೊತ್ತಿನಲ್ಲಿ ಭ್ರಷ್ಟಾಚಾರವು ಬಹುತೇಕ ಜನರನ್ನು ಕಾಡುತ್ತಿರುವ ಪ್ರಮುಖ ಅಂಶವಾಗಿದೆ.
ಭ್ರಷ್ಟಾಚಾರದ ನಂತರ ಬೆಲೆ ಏರಿಕೆ ಮತ್ತು ನಂತರದ ಸ್ಥಾನದಲ್ಲಿ ನಿರುದ್ಯೋಗಗಳಿವೆ. ಮಹಿಳೆಯರ ಸುರಕ್ಷತೆ, ಕುಡಿಯುವ ನೀರು ಮತ್ತು ವಿದ್ಯುಚ್ಛಕ್ತಿ, ಆರೋಗ್ಯ ಮತ್ತು ಶಿಕ್ಷಣ ಹಾಗೂ ಅಪರಾಧ, ದೌರ್ಜನ್ಯ, ಹಿಂಸೆಗಳು ಹೆಚ್ಚು ಕಡಿಮೆ ಸಮಪ್ರಮಾಣದಲ್ಲಿ ಜನರನ್ನು ಕಾಡುವ ಸಂಗತಿಗಳಾಗಿವೆ. ಆದರೆ ಯಾವ ಸಮುದಾಯ, ಯಾವ ವಯೋಮಾನದ ಜನರು, ಯಾವ ಪ್ರದೇಶದಲ್ಲಿ ಯಾರು ಯಾವುದನ್ನು ಹೆಚ್ಚಿನ ಸಮಸ್ಯೆ ಎಂದು ಹೇಳಿದ್ದಾರೆ ಎಂಬುದನ್ನು ವಿಶ್ಲೇಷಿಸಿದರೆ ಕೆಲವು ಸ್ವಾರಸ್ಯಕರ ಸಂಗತಿಗಳು ಗೋಚರಿಸುತ್ತವೆ.
ಕೋಷ್ಟಕ 1: ಮತದಾನವನ್ನು ಪ್ರಭಾವಿಸುವ ಸಂಗತಿಗಳು
ಭ್ರಷ್ಟಾಚಾರವು ಎಲ್ಲ ಪಕ್ಷಗಳ ಮತದಾರರನ್ನೂ ಕಾಡುವ ಸಂಗತಿಯಾಗಿದೆ. ಅಂತಿಮವಾಗಿ ಯಾರಿಗೆ ಮತ ಹಾಕುತ್ತೇವೆಂದು ಹೇಳಿದ್ದಾರೆ ಎಂಬುದನ್ನು ಆಧರಿಸಿ, ವಿವಿಧ ಪಕ್ಷಗಳ ಬೆಂಬಲಿಗರ ಅನಿಸಿಕೆಗಳೇನಾಗಿವೆ ಎಂಬುದನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಎಲ್ಲಾ ಪಕ್ಷಗಳ ಬೆಂಬಲಿಗರಿಗೂ ಇದು ದೊಡ್ಡ ಸಂಗತಿಯೇ ಆಗಿದೆ. ಆದರೆ ಕಾಂಗ್ರೆಸ್ಗೆ ಮತ ಹಾಕುವವರು ಹೆಚ್ಚಿನ ಪ್ರಮಾಣದಲ್ಲೂ, ಬಿಜೆಪಿಗೆ ಮತ ಹಾಕುವವರು ಕಡಿಮೆ ಪ್ರಮಾಣದಲ್ಲೂ ಭ್ರಷ್ಟಾಚಾರವೇ ದೊಡ್ಡ ಸಮಸ್ಯೆ ಎಂದಿದ್ದಾರೆ ಎಂಬುದನ್ನು ಗಮನಿಸಬಹುದು.
ಕೋಷ್ಟಕ 2 –ಭ್ರಷ್ಟಾಚಾರವೇ ಪ್ರಧಾನ ಎಂದ ಮೂರೂ ರಾಜಕೀಯ ಪಕ್ಷಗಳ ಬೆಂಬಲಿಗರು
ಕೋಷ್ಟಕ 3: ಬೆಲೆ ಏರಿಕೆ ಮತ್ತು ಆರ್ಥಿಕ ಸ್ಥಿತಿ
ಆದರೆ, ಬೆಲೆ ಏರಿಕೆಯೂ ಪ್ರಮುಖ ಅಂಶವಾಗಿ ಉಳಿದುಕೊಂಡಿದೆ. ಸಾಮಾನ್ಯವಾಗಿ ಬೆಲೆ ಏರಿಕೆಯೆಂದಾಗ ಅದು ಹಣದುಬ್ಬರ ಮತ್ತು ಬಡತನದ ಜೊತೆಗೆ ಸಂಬಂಧ ಹೊಂದಿರುತ್ತದೆ. ಹಾಗಾಗಿ ಅದು ಬಡವರನ್ನೇ ಹೆಚ್ಚು ಬಾಧಿಸುತ್ತದೆ. ಬಹುತೇಕ ಸಮೀಕ್ಷೆಗಳಲ್ಲಿ ಬೆಲೆ ಏರಿಕೆಯನ್ನೇ ಪ್ರಧಾನವಾದ ಸಮಸ್ಯೆಯೆಂದು ಮತದಾರರು ಹೇಳುವುದು ವಾಡಿಕೆ. ಅದನ್ನು ಇಲ್ಲಿಯೂ ನೋಡಬಹುದು.
ಕೋಷ್ಟಕ 4: ಬೆಲೆ ಏರಿಕೆ – ಮಹಿಳೆಯರ ಆತಂಕ
ಮಹಿಳೆಯರು ಪುರುಷರಿಗಿಂತ ಬೆಲೆ ಏರಿಕೆಯ ಕುರಿತು ಹೆಚ್ಚು ಆತಂಕ ಹೊಂದಿದ್ದಾರೆ. ಇದೂ ಸಹಾ ಸಾಮಾನ್ಯವಾಗಿ ಎಲ್ಲಾ ಸಮೀಕ್ಷೆಗಳಲ್ಲೂ ಕಂಡುಬರುವ ಅಂಶವಾಗಿದೆ. ಆದರೆ ಇಲ್ಲಿ ಇವೆರಡರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಶೇ.50 ಮಹಿಳೆಯರು ಮತ್ತು ಶೇ.45ರಷ್ಟು ಪುರುಷರು ತಮ್ಮ ಮೊದಲ ಆಯ್ಕೆಯಲ್ಲಿ ಬೆಲೆ ಏರಿಕೆಯನ್ನು ಪ್ರಧಾನ ಸಮಸ್ಯೆಯಾಗಿ ಗುರುತಿಸಿದ್ದಾರೆ.
ಕೋಷ್ಟಕ 5: ನಿರುದ್ಯೋಗ ಮತ್ತು ಶಿಕ್ಷಣದ ಮಟ್ಟ
ನಿರುದ್ಯೋಗವು ದೇಶದ ಇತರ ಭಾಗಗಳಲ್ಲಿರುವ ಪ್ರಮಾಣದಲ್ಲಿ ಕರ್ನಾಟಕದಲ್ಲಿಲ್ಲ. ಆದರೂ ಅದು ಮೊದಲ ಮೂರು ಅಂಶಗಳಲ್ಲಿ ಒಂದಾಗಿದೆ. ಅಶಿಕ್ಷಿತರಿಗೆ ಹೋಲಿಸಿದರೆ, ಹೆಚ್ಚು ಶಿಕ್ಷಣ ಪಡೆದವರು ನಿರುದ್ಯೋಗದ ಕುರಿತು ಹೆಚ್ಚು ಕಾಳಜಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಶಿಕ್ಷಣದ ಮಟ್ಟ ಹೆಚ್ಚಾಗುತ್ತಾ ಹೋದ ಹಾಗೆ ನಿರುದ್ಯೋಗದ ಆತಂಕವೂ ಹೆಚ್ಚಾಗುತ್ತಾ ಹೋಗಿರುವುದನ್ನು ಇಲ್ಲಿ ಗಮನಿಸಬಹುದು.
ಕೋಷ್ಟಕ 6: ನಿರುದ್ಯೋಗ ಮತ್ತು ವಯೋಮಾನ
ನಿರುದ್ಯೋಗವನ್ನು ಸಾಕಷ್ಟು ಜನರು ಒಂದು ಸಮಸ್ಯೆಯನ್ನಾಗಿ ಗುರುತಿಸಿದ್ದರೂ, ಅವರಲ್ಲಿ ಯುವಜನರು ನಿರುದ್ಯೋಗವು ಒಂದು ಸಮಸ್ಯೆಯೆಂದು ಹೆಚ್ಚಾಗಿ ಹೇಳಿದ್ದಾರೆ. ವಯಸ್ಸು ಹೆಚ್ಚಾಗುತ್ತಾ, ನಿರುದ್ಯೋಗವನ್ನು ಒಂದು ಸಮಸ್ಯೆಯೆಂದು ಹೇಳಿದವರ ಪ್ರಮಾಣವೂ ಕಡಿಮೆಯಾಗುತ್ತಾ ಹೋಗಿರುವುದನ್ನು ಗಮನಿಸಬಹುದು.
ಕೋಷ್ಟಕ 7: ಮಹಿಳಾ ಸುರಕ್ಷತೆ
ಮಹಿಳೆಯರ ಸುರಕ್ಷತೆ ಕುರಿತ ವಿಚಾರವು ಸಾಮಾನ್ಯವಾಗಿ ರಾಜಕೀಯ ಚರ್ಚೆಗಳಲ್ಲಿ ಹೆಚ್ಚು ಕಾಣುವುದಿಲ್ಲ. ಆದರೆ ಈ ಸಮೀಕ್ಷೆಯಲ್ಲಿ ಒಂದಷ್ಟು ಜನರು ಅದನ್ನು ಪ್ರಮುಖ ಸಂಗತಿಯನ್ನಾಗಿ ಭಾವಿಸಿದ್ದಾರೆ. ಸಹಜವಾಗಿ ಮಹಿಳೆಯರು ಈ ಕುರಿತು ಹೆಚ್ಚು ಆತಂಕ ಹೊಂದಿದ್ದಾರೆ. ಯುವತಿಯರು ಈ ಕುರಿತು ಮಿಕ್ಕವರಿಗಿಂತ ಹೆಚ್ಚು ಆತಂಕ ಹೊಂದಿರುವುದು ಕಂಡು ಬರುತ್ತದೆ. 18ರಿಂದ 25ರ ವಯೋಮಾನದ ಯುವತಿಯರು 46ಕ್ಕೂ ಹೆಚ್ಚು ವಯಸ್ಸಿನ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಮಹಿಳಾ ಸುರಕ್ಷತೆಯ ಕುರಿತು ಆತಂಕಿತರಾಗಿದ್ದಾರೆ.
ಕೋಷ್ಟಕ 8: ಕುಡಿಯುವ ನೀರು ಮತ್ತು ವಿದ್ಯುಚ್ಛಕ್ತಿ
ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆ ಪ್ರಧಾನವಾಗಿ ಗ್ರಾಮೀಣ ಭಾಗ ಹಾಗೂ ಬಡವರನ್ನು ಬಾಧಿಸಿದೆ. ಆದರೆ ಇದು ರಾಜ್ಯಾದ್ಯಂತ ಒಂದೇ ತೆರನಾಗಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಗಳ ಗ್ರಾಮೀಣ ಭಾಗದ ಜನರು ಮಾತ್ರ ಇದನ್ನು ಹೆಚ್ಚಾಗಿ ಗುರುತಿಸಿದ್ದಾರೆ. ಉಳಿದ ಭಾಗಗಳು ಇದನ್ನು ಹೆಚ್ಚು ಹೇಳಿಲ್ಲ.
ಕೋಷ್ಟಕ 9: ಶಿಕ್ಷಣದ ಮಟ್ಟ
ಆರೋಗ್ಯ ಮತ್ತು ಶಿಕ್ಷಣ: ಇವು ಹೆಚ್ಚು ಶಿಕ್ಷಣ ಪಡೆದವರು ಹಾಗೂ ಇದ್ದುದರಲ್ಲಿ ಉತ್ತಮ ಸ್ಥಿತಿಯಲ್ಲಿರುವವರು ಮಾತನಾಡುವ ಸಂಗತಿಗಳಾಗಿಯೇ ಉಳಿದಿವೆ. ಯಾರು ಅದರಿಂದ ಹೆಚ್ಚು ಬಾಧಿತರಾಗಬಹುದು ಎಂಬ ಭಾವನೆಯಿದೆಯೋ ಅವರು ಅದರ ಬಗ್ಗೆ ಹೆಚ್ಚು ಮಾತನಾಡಿಲ್ಲ.
ಕೋಷ್ಟಕ 10: ಕಾನೂನು ಮತ್ತು ಸುವ್ಯವಸ್ಥೆ
ಅಪರಾಧ, ಹಿಂಸೆ ಮತ್ತು ದೌರ್ಜನ್ಯಗಳ ಕುರಿತು ಧಾರ್ಮಿಕ ಅಲ್ಪಸಂಖ್ಯಾತರು ಹೆಚ್ಚು ಆತಂಕ ವ್ಯಕ್ತಪಡಿಸಿದ್ದಾರೆ. ಇದು ದಲಿತ ಸಮುದಾಯಕ್ಕಿಂತ ಹೆಚ್ಚು ಇದೆ.
ಪ್ರಶ್ನೆ ಏನಾಗಿತ್ತು?:
“ಸಾಮಾನ್ಯವಾಗಿ ಎಲ್ಲರೂ ಮಾತನಾಡುವ ಕೆಲವು ಸಮಸ್ಯೆಗಳ ಪಟ್ಟಿಯನ್ನು ನಾನು ಓದುತ್ತೇನೆ. ಅವುಗಳಲ್ಲಿ ನೀವು ವ್ಯಕ್ತಿಗತವಾಗಿ ಓಟು ಮಾಡುವಾಗ ನಿಮಗೆ ಮುಖ್ಯ ಅನಿಸುವ ಅಂಶ ಯಾವುದು ಎಂದು ಹೇಳಿ.”
“ಇದರ ನಂತರ ಇನ್ನೊಮ್ಮೆ ಇದೇ ಪಟ್ಟಿಯನ್ನು ಓದಿ, ಮೊದಲು ನೀವು ಹೇಳಿದ್ದಲ್ಲದೇ ಈ ಪಟ್ಟಿಯಲ್ಲಿ ನಿಮಗೆ ಮುಖ್ಯ ಎನಿಸುವ ಇನ್ನೊಂದು ಸಮಸ್ಯೆ ಇದ್ದರೆ ಅದನ್ನೂ ಹೇಳಿ.”
ಗಮನಿಸಿ: ಈ ಪ್ರಶ್ನೆಯನ್ನು ಮೇಲಿನಂತೆ ಎರಡು ಬಾರಿ ಕೇಳಿದ್ದರಿಂದ, ಹೆಚ್ಚಿನವರು ಅದಕ್ಕೂ ಉತ್ತರ ಕೊಟ್ಟಿದ್ದಾರೆ. ಹಾಗಾಗಿಯೇ ಒಟ್ಟು ಮೊತ್ತ 100% ದಾಟಿದೆ. ಏನೂ ಹೇಳದವರು ಅಥವಾ ಗೊತ್ತಿಲ್ಲ ಎಂದವರನ್ನು ಈ ವಿಶ್ಲೇಷಣೆಯಿಂದ ಹೊರಗಿಡಲಾಗಿದೆ.
Good effort.