ರಿಲಾಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ, ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಭೇದಿಸಿರುವ ಮುಂಬೈ ಪೊಲೀಸರು, ತೆಲಂಗಾಣದಲ್ಲಿ 19 ವರ್ಷದ ಯುವಕನೋರ್ವನನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಗಾಮ್ದೇವಿ ಠಾಣೆ ಪೊಲೀಸರು 19 ವರ್ಷದ ಯುವಕ ಗಣೇಶ್ ರಮೇಶ್ ವನಪರ್ಧಿ ಎಂಬಾತನನ್ನು ಇಂದು ಮುಂಜಾನೆ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಯುವಕನಿಗೆ ನ್ಯಾಯಾಲಯವು ನ.8ರವೆರೆಗೆ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.
ಅಂಬಾನಿಗೆ 400 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು ಇ- ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಇ-ಮೇಲ್ನ್ನು ಕಡೆಗಣಿಸಿದರೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು.
ಮುಖೇಶ್ ಅಂಬಾನಿ ಅ. 31 ಮತ್ತು ನ.1ರಂದು ಎರಡು ಬೆದರಿಕೆ ಇಮೇಲ್ಗಳನ್ನು ಸ್ವೀಕರಿಸಿದ್ದಾರೆ. ಹಿಂದಿನ ಇಮೇಲ್ಗಳನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿತ್ತು.
‘ಅಂಬಾನಿಯವರಿಗೆ ಎಷ್ಟೇ ಸುರಕ್ಷತೆ ಇದ್ದರೂ ನಮ್ಮ ಒಬ್ಬ ಸ್ನೈಪರ್(ಗುರಿ ಇಟ್ಟು ಶೂಟ್ ಮಾಡುವ ಶೂಟರ್) ಸಾಕು. ನಮ್ಮ ಇ-ಮೇಲ್ ಅನ್ನು ಪೊಲೀಸರಿಗೆ ಪತ್ತೆ ಹಚ್ಚುವುದಕ್ಕೂ ಸಾಧ್ಯವಿಲ್ಲ. 400 ಕೋಟಿ ನೀಡಬೇಕು. ಪೊಲೀಸರು ನನ್ನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಸಾಧ್ಯವಿಲ್ಲ’ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನು ಓದಿದ್ದೀರಾ? ಇಸ್ರೇಲ್ಗೆ ಯುದ್ಧ ಸಾಮಗ್ರಿ ನೆರವಿನ ಅಮೆರಿಕ ಹಡಗು ತಡೆದು ನಿಲ್ಲಿಸಿ ಪ್ರತಿಭಟನೆ
ಕಳೆದ ಶುಕ್ರವಾರ ರಾತ್ರಿ ಕಳುಹಿಸಿದ ಮೊದಲ ಇ- ಮೇಲ್ನಲ್ಲಿ ಬೆಲ್ಜಿಯಂ ಕಾರ್ಪೊರೇಟ್ ವಿಳಾಸವನ್ನು ಬಳಸಿಕೊಂಡು ಶಾದಾಬ್ ಖಾನ್ ಎಂದು ಹೇಳಿಕೊಂಡ ವ್ಯಕ್ತಿ 20 ಕೋಟಿ ನೀಡದಿದ್ದರೆ ನಿನ್ನನ್ನು ಸಾಯಿಸುತ್ತೇವೆ, ಭಾರತದಲ್ಲಿ ಅತ್ಯುತ್ತಮ ಶೂಟರ್ಗಳು ನಮ್ಮಲ್ಲಿದ್ದಾರೆ ಎಂದು ಇಮೇಲ್ ಬೆದರಿಕೆ ಹಾಕಿದ್ದರು.
ಅದೇ ಇ- ಮೇಲ್ ಐಡಿಯಿಂದ ಶನಿವಾರ ಸಂಜೆ ಎರಡನೇ ಬೆದರಿಕೆ ಕಳುಹಿಸಲಾಗಿದ್ದು, ನೀವು ನಮ್ಮ ಇ-ಮೇಲ್ಗೆ ಪ್ರತಿಕ್ರಿಯಿಸಲಿಲ್ಲ, ಆದಕಾರಣ ಈಗ ನೀವು ನಮಗೆ 200 ಕೋಟಿ ರೂ. ನೀಡಬೇಕು. ನೀವು ಹಣವನ್ನು ನೀಡದಿದ್ದರೆ, ನಿಮ್ಮ ಮರಣದಂಡನೆಗೆ ಸಹಿ ಹಾಕಲಾಗುತ್ತದೆ ಎಂದು ಹೇಳಿಕೆಯಲ್ಲಿ ಬರೆಯಲಾಗಿತ್ತು.
ಇದನ್ನು ಓದಿದ್ದೀರಾ? ಎಷ್ಟೇ ಸುರಕ್ಷತೆ ಇರಲಿ, ನಮ್ಮ ಒಬ್ಬ ಶೂಟರ್ ಸಾಕು: ಉದ್ಯಮಿ ಮುಖೇಶ್ ಅಂಬಾನಿಗೆ ಮತ್ತೆ ಜೀವ ಬೆದರಿಕೆ
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಈಗಾಗಲೇ ಕೇಂದ್ರ ಸರ್ಕಾರದಿಂದ ಝೆಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಬೆದರಿಕೆ ಇ- ಮೇಲ್ ಹಿನ್ನೆಲೆ ಮುಖೇಶ್ ಅಂಬಾನಿಗೆ ಮತ್ತಷ್ಟು ಭದ್ರತೆ ನೀಡಲಾಗಿತ್ತು.