ನ್ಯಾಯಾಲಯಗಳು ನೀಡುವ ತೀರ್ಪನ್ನು ನೇರವಾಗಿ ರದ್ದುಗೊಳಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿಕೆ ನೀಡಿದ್ದಾರೆ.
‘ಹಿಂದೂಸ್ಥಾನ್ ಟೈಮ್ಸ್’ ಹಮ್ಮಿಕೊಂಡಿದ್ದ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯಗಳು ನೀಡುವ ತೀರ್ಪಿನಲ್ಲಿನ ನ್ಯೂನತೆ ಸರಿಪಡಿಸುವುದಕ್ಕಾಗಿ ಹೊಸ ಕಾನೂನು ರೂಪಿಸಬಹುದು. ಈ ವಿಷಯದಲ್ಲಿ ನೇರವಾಗಿ ಅಧಿಕಾರ ಚಲಾಯಿಸಲು ಶಾಸಕಾಂಗಕ್ಕೆ ಅವಕಾಶ ಇಲ್ಲ’ ಎಂದು ಸಿಜೆಐ ತಿಳಿಸಿದ್ದಾರೆ.
‘ತಾವು ನೀಡಿದ ತೀರ್ಪಿನ ಬಗ್ಗೆ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ನ್ಯಾಯಮೂರ್ತಿಗಳು ಚಿಂತಿಸುವುದಿಲ್ಲ. ಇದು ಚುನಾಯಿತ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಇರುವ ಸ್ಪಷ್ಟವಾದ ವ್ಯತ್ಯಾಸವಾಗಿದೆ’ ಎಂದು ಚಂದ್ರಚೂಡ್ ತಿಳಿಸಿದರು.
ಇದನ್ನು ಓದಿದ್ದೀರಾ? ನ. 24ರೊಳಗೆ ಕಾಂತರಾಜು ಜಾತಿ ಗಣತಿ ವರದಿ ಸಲ್ಲಿಸುತ್ತೇನೆ: ಜಯಪ್ರಕಾಶ್ ಹೆಗ್ಡೆ
ನ್ಯಾಯಾಲಯಗಳು ತೀರ್ಪು ಪ್ರಕಟಿಸಿದ ಬಳಿಕ ಶಾಸಕಾಂಗ ಏನನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟವಾದ ಗೆರೆ ಎಂಬುದು ಇದೆ. ನ್ಯಾಯಾಲಯವು ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಗುರುತಿಸುವ ನ್ಯೂನತೆಯನ್ನು ಸರಿಪಡಿಸಲಷ್ಟೇ ಕಾನೂನು ರೂಪಿಸುವ ಅಧಿಕಾರ ಶಾಸಕಾಂಗಕ್ಕೆ ಇದೆ ಎಂದು ಹೇಳಿದರು.
‘ತೀರ್ಪು ತಪ್ಪಾಗಿದೆ ಎಂದು ಶಾಸಕಾಂಗ ಸಮರ್ಥಿಸಿಕೊಂಡು ಅದನ್ನು ನೇರವಾಗಿ ರದ್ದುಪಡಿಸುವ ಅಧಿಕಾರ ಇಲ್ಲ. ಯಾವುದೇ ಪ್ರಕರಣ ಕುರಿತು ನಿರ್ಣಯ ಕೈಗೊಳ್ಳುವಾಗ ಸಂವಿಧಾನದ ನೀತಿ ನಿಯಮಗಳನ್ನಷ್ಟೇ ನ್ಯಾಯಮೂರ್ತಿಗಳು ಅನುಸರಿಸುತ್ತಾರೆ. ಸಾರ್ವಜನಿಕ ನೀತಿ-ನಿಯಮಗಳನ್ನು ಪರಿಗಣಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.
ಇನ್ನೂ ನಮಗೆ ಒಂದೂವರೆ ತಿಂಗಳುಗಳ ಕಾಲ ಅವಕಾಶವಿದೆ. ಈ ವರ್ಷಾಂತ್ಯಕ್ಕೆ ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಕನಿಷ್ಠ 72 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲು ನಿರ್ಧರಿಸಿದ್ದೇವೆ ಎಂದು ಇದೇ ವೇಳೆ ತಿಳಿಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ , ಸಮಾನವಾದ ಅವಕಾಶಗಳು ಸಿಕ್ಕಿದರೆ ಹೆಚ್ಚಿನ ಮಹಿಳೆಯರು ಕೂಡ ನ್ಯಾಯಾಂಗ ಕ್ಷೇತ್ರಕ್ಕೂ ಪ್ರವೇಶಿಸುತ್ತಾರೆ ಎಂದು ಹೇಳಿದರು.