ಪ್ರಸ್ತುತ ಶಿಕ್ಷಣ ಪರೀಕ್ಷಾ ಕೇಂದ್ರಿತ ಶಿಕ್ಷಣವಾಗಿದ್ದು, ಈ ವ್ಯವಸ್ಥೆ ತೊಲಗಬೇಕು ಎಂದು ಪರಿಸರವಾದಿ ಸಿ ಯತಿರಾಜು ತಿಳಿಸಿದರು.
ತುಮಕೂರು ನಗರದ ಕೆಎಸ್ಇಎಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ‘ನಮ್ ಗೂಡಿನಿಂದ ಗುರಿಯ ಬೆನ್ನತ್ತಿ’ ಎನ್ನುವ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
“ಕೋವಿಡ್ ಸಮಯದಲ್ಲಿ ಮಕ್ಕಳಿಗೆ ಕಲಿಕೆಯಲ್ಲಿ ಬಹು ದೊಡ್ಡ ಹಿನ್ನಡೆಯಾಗಿದೆ. ಆನ್ಲೈನ್ ವ್ಯಾಮೋಹ, ಭಾಷೆಯ ಕಲಿಕೆಯಲ್ಲಿನ ದೋಷಗಳನ್ನು ಗಮನಿಸಿ ಸರಿಪಡಿಸುವವರೇ ಇಲ್ಲದಂತಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಈ ಕಾಲವನ್ನು ಸತ್ಯೋತ್ತರ ಯುಗವೆಂದು ಕರೆಯುತ್ತಾರೆ. ಸತ್ಯ ಬೇಕಾಗಿಲ್ಲ ಎಂಬುದೇ ಇದರ ಅರ್ಥ. ಸತ್ಯ, ಅಹಿಂಸೆಯನ್ನು ತನ್ನ ಉಸಿರನ್ನಾಗಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಜನಿಸಿದ ಈ ದೇಶದಲ್ಲಿ ಸತ್ಯಕ್ಕೆ ವಿರುದ್ಧವಾಗಿ ತಂತ್ರಜ್ಞಾನಗಳು ಬಳಕೆಯಾಗುತ್ತಿವೆ” ಎಂದು ಹೇಳಿದರು.
“ಅತ್ಯಧಿಕ ಸಂಬಳ ದೊರೆಯುವ ಉದ್ಯೋಗಗಳನ್ನು ನಾಳೆಯ ಹೊತ್ತಿಗೆ ಕೇಳುವವರೇ ಇಲ್ಲದಂತಾಗುತ್ತಿದೆ. ಅತ್ಯಂತ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಗುರಿಯ ಬೆನ್ನತ್ತಿ ಹೋಗುತ್ತಿದ್ದೇವೆ. ಆದರೆ, ಒಂದು ನೂತನ ತಂತ್ರಜ್ಞಾನ ಮತ್ತೊಂದು ಪ್ರಚಲಿತ ತಂತ್ರಜ್ಞಾನವನ್ನು ಹೊಡೆದುರುಳಿಸಿ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಳ್ಳುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಯುವನಿಧಿ ಯೋಜನೆಯ 2,091 ಅರ್ಜಿ ಸ್ವೀಕಾರ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಕಾಳಿದಾಸ ಪ್ರೌಢ ಶಾಲೆಯ ಉಪಪ್ರಾಂಶುಪಾಲ ಕೆ.ಚಂದ್ರಶೇಖರ್ ಮಾತನಾಡಿ, ತಮ್ಮ ಬಿಎಡ್ ಸಮಯದಲ್ಲಿನ ನೆನಪುಗಳನ್ನು ಮೆಲುಕು ಹಾಕಿದರು. ಅಲೆಗ್ಸ್ಯಾಂಡರ್ ಮತ್ತು ಗುರು ಶಿಷ್ಯರ ನಡುವಿನ ಸಂಬಂಧವನ್ನು ವಿವರಿಸಿದರು.
ಆರ್ಯನ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ್ ಟಿ ಆರ್, ಕೆಎಸ್ಇಎಫ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಹರೀಶ್ ಆರ್, ಉಪನ್ಯಾಸಕರುಗಳಾದ ಕುಮಾರ ಸ್ವಾಮಿ ಟಿ ಪಿ, ರಾಮಕೃಷ್ಣಪ್ಪ ಪಿ, ಆರ್ ವೈಜಯಂತಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.