ಯುವನಿಧಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ಜನವರಿ 12ರವರೆಗೆ 2,091 ಮಂದಿ ಅಭ್ಯರ್ಥಿಗಳು ನೋಂದಾಯಿಕೊಂಡಿದ್ದು, ಅರ್ಜಿ ಸ್ವೀಕೃತವಾಗಿವೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಧಾರವಾಡದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಯುವನಿಧಿ ಯೋಜನೆಯು ಕನಾಟಕ ರಾಜ್ಯ ಸರ್ಕಾರವು ಪದವಿ ಹಾಗೂ ಡಿಪ್ಲೊಮಾ ಕೋರ್ಸ್ಗಳನ್ನು 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾದ ಕರ್ನಾಟಕದ ನಿವಾಸಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಖಾತರಿ ಯೋಜನೆಯಾಗಿದೆ” ಎಂದರು.
“ಪದವೀಧರರಿಗೆ ₹3,000 ಮತ್ತು ಡಿಪ್ಲೊಮಾ ತೇರ್ಗಡೆಯಾದವರಿಗೆ ₹1,500 ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ನೀಡುವ ಯೋಜನೆಯಾಗಿದೆ. ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಒನ್, ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಯುವನಿಧಿ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 18005999918ಕ್ಕೆ ಸಂಪರ್ಕಿಸಬಹುದಾಗಿದೆ” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಬರಗಾಲ ಕುರಿತಂತೆ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಮಾತ್ರ ನೀರಿನ ಸಮಸ್ಯೆ ಕಂಡುಬಂದಿದ್ದು, ಅಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ. ಮೇವು ಸಾಕಷ್ಟು ಸಂಗ್ರಹವಿದೆ. ಕೊರತೆ ಕಂಡುಬಂದರೆ ಟೆಂಡರ್ ಮೂಲಕ ಮೇವು ಖರೀದಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿದ್ಯುತ್ ಬಳಕೆದಾರರು ಗ್ರಾಹಕ ಸುರಕ್ಷಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು: ಎಂ.ಎಂ ನದಾಫ್
“ಜಿಲ್ಲಾಧಿಕಾರಿ ವ್ಯಾಪ್ತಿಯಲ್ಲಿ ಬರ ನಿರ್ವಹಣೆಗಾಗಿ ಜಿಲ್ಲಾಡಳಿತದ ಬಳಿ ಸುಮಾರು ₹20 ಕೋಟಿ ಅನುದಾನವಿದೆ. ಪ್ರತಿ ತಾಲೂಕಿನ ತಹಶೀಲ್ದಾರ್ ಹತ್ತಿರ ₹5 ಕೋಟಿಯಿಂದ ₹6 ಕೋಟಿ ಅನುದಾನವಿದೆ. ಬರಗಾಲ ಹಣ ಸಂದಾಯ ಕುರಿತಂತೆ ಪ್ರತಿ ಎಕರಗೆ ₹1,000 ಅಥವಾ 2 ಎಕರೆಗೆ ಗರಿಷ್ಟ ₹2,000 ಹಣವನ್ನು ರೈತರ ಖಾತೆಗೆ ಇನ್ನೊಂದು ವಾರದಲ್ಲಿ ಡಿಬಿಟಿ ಮೂಲಕ ಸಂದಾಯ ಮಾಡಲಾಗುತ್ತದೆ. ಈ ಯೋಜನೆ ಪಡೆಯಲು ರೈತರು ಫ್ರೂಟ್ ಐಡಿ ಹೊಂದಿರಬೇಕು” ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.