ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಡುವೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್ರ ಪುತ್ರ ಅಭಿನವ್ ಚಂದ್ರಚೂಡ್ ಸಿಎಎ ವಿರುದ್ಧ 2020ರಲ್ಲಿ ಮಾಡಿದ್ದ ಭಾಷಣದ ವೀಡಿಯೋ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಅಭಿನವ್ ಚಂದ್ರಚೂಡ್ ಸಿಎಎ ಕಾಯ್ದೆ ಅಸಂವಿಧಾನಿಕ ಎಂದು ಕರೆದಿದ್ದು, ಹೇಗೆ ಅಸಂವಿಧಾನಿಕ ಎಂದು ವಿವರಿಸಿದ್ದಾರೆ. “ತಮ್ಮ ದೇಶದಲ್ಲಿ ಧರ್ಮದ ಹೆಸರಲ್ಲಿ ಶೋಷಣೆಗೆ ಒಳಗಾಗುವವರಿಗೆ ಸುರಕ್ಷತೆ ಒದಗಿಸುವುದು ನಿಮ್ಮ ಗುರಿ ಎಂದಾದರೆ, ದೇವರನ್ನು ನಂಬದವರನ್ನು, ಯಾವುದೇ ಧರ್ಮವನ್ನು ಪಾಲಿಸದವರನ್ನು, ಮಂಗಳಮುಖಿಯರನ್ನು ಯಾಕೆ ಈ ಕಾಯ್ದೆಯಲ್ಲಿ ಸೇರಿಸಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ಈ ಸಿಎಎ ಅಸಂವಿಧಾನಿಕ, ನಮ್ಮ ದೇಶದ ಸಂವಿಧಾನದ 14ನೇ ವಿಧಿ ನಾಗರಿಕರಿಗೆ ಮಾತ್ರ ಅಲ್ಲ ದೇಶದಲ್ಲಿರುವ ಎಲ್ಲರಿಗೂ ಸಮಾನತೆಯ ಹಕ್ಕು ನೀಡುತ್ತದೆ” ಎಂದು ಹೇಳಿರುವ ಅಭಿನವ್, ನಿರ್ದಿಷ್ಟ ಧರ್ಮದವರನ್ನು ಈ ಕಾಯ್ದೆಯಲ್ಲಿ ಸೇರಿಸದಿರುವುದು ಸರಿಯಲ್ಲ ಎಂದಿದ್ದಾರೆ.
Do listen to Abhinav Chandrachud on not just CAA but also the constitutional gaps over the years on citizenship. pic.twitter.com/c39Imcu9uf
— Priyanka Chaturvedi🇮🇳 (@priyankac19) March 13, 2024
“ಯಹೂದಿಗಳನ್ನು ಈ ಕಾನೂನಿನಿಂದ ಯಾಕೆ ಹೊರಗಿಡಲಾಗಿದೆ ಎಂಬುವುದು ನನಗೆ ಅರ್ಥವಾಗಲ್ಲ. ನಾನು ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಪೋಸ್ಟ್ ಮಾಡಿದಾಗ ಕೆಲವರು ಯಹೂದಿಗಳಿಗೆ ಇಸ್ರೇಲ್ ದೇಶವಿದೆ ಎಂದಿದ್ದಾರೆ. ಆದರೆ ಯಹೂದಿ ಸಮುದಾಯಕ್ಕೆ ಸೇರಿದ ನನ್ನ ಸ್ನೇಹಿತ ಕಲ್ಕತ್ತಾದಲ್ಲಿದ್ದಾನೆ, ಯಹೂದಿಗಳಿಗೆ ಭಾರತ ಕೂಡಾ ಇದೆ. ಯಹೂದಿಗಳಿಗೆ ಇಸ್ರೇಲ್ ಇದೆ, ಅದರಿಂದಾಗಿ ಸಿಎಎಗೆ ಸೇರಿಸಿಲ್ಲ ಎನ್ನುವುದಾದರೆ ಬೌದ್ಧರು ಮತ್ತು ಕ್ರೈಸ್ತರಿಗೂ ದೇಶಗಳಿವೆ. ನಾವು ಸಿಎಎಯಲ್ಲಿ ಈ ಧರ್ಮಿಯರನ್ನ ಸೇರಿಸಿದ್ದೇವೆ ಅಲ್ಲವೇ” ಎಂದು ಸಿಎಎ ಲೋಪಗಳ ಬಗ್ಗೆ ಅಭಿನವ್ ಮಾತನಾಡಿದ್ದಾರೆ.
ಇನ್ನು “ನಾವು ಯಹೂದಿಗಳಿಗೆ ಇಸ್ರೇಲ್ ಇರುವ ಕಾರಣ ಈ ಕಾನೂನಿನಲ್ಲಿ ಅವರನ್ನು ಸೇರಿಸಿಲ್ಲ ಎಂದು ಹೇಳುವುದಾದರೆ ಬಹಾಯಿಗಳ ಕಥಯೇನು? ಅವರಿಗೆ ಯಾವುದೇ ದೇಶ ಇಲ್ಲ. ನೀವು ಯಾವುದೇ ದೇವರು ಇಲ್ಲ ಎನ್ನುವ ನಾಸ್ತಿಕರನ್ನು ಈ ಕಾನೂನಿನಿಂದ ಹೊರಗಿಟ್ಟಿದ್ದೀರಿ. ನೀವು ಪಾಕ್, ಅಫ್ಘಾನ್ ಅಲ್ಪಸಂಖ್ಯಾತರನ್ನ ಈ ಕಾಯ್ದೆಯಲ್ಲಿ ಅರ್ಹರು ಎನ್ನುವುದಾದರೆ ಪಾಕ್ನ ಅಲ್ಪಸಂಖ್ಯಾತರನ್ನ ಕೂಡಾ ಕಾಯ್ದೆಯಲ್ಲಿ ಸೇರಿಸಿಲ್ಲ. ಅಹಮದಿಯಾ ಮತ್ತು ಹಜಾರೆ ಸಮುದಾಯ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು, ಅವರನ್ನು ಈ ಕಾಯ್ದೆಯಲ್ಲಿ ಅರ್ಹರ ಪಟ್ಟಿಯಲ್ಲಿ ಸೇರಿಸಿಲ್ಲ” ಎಂದು ಅಭಿನವ್ ಕೇಂದ್ರದ ವಿರುದ್ಧ ಛಾಟಿ ಬೀಸಿದ್ದಾರೆ.
ಇದನ್ನು ಓದಿದ್ದೀರಾ?: ದೆಹಲಿಯ ರಾಮ್ಲೀಲ ಮೈದಾನದಲ್ಲಿ ಕೇಂದ್ರದ ವಿರುದ್ಧ ರೈತರ ಬೃಹತ್ ಪ್ರತಿಭಟನೆ
“ಸಾಮಾನ್ಯವಾಗಿ ಯಾರೇ ಭಾರತದ ಪೌರತ್ವವನ್ನು ಪಡೆಯಬೇಕಾದರೆ 11 ವರ್ಷ ಕಾಯಬೇಕಾಗುತ್ತದೆ. ಆದರೆ ಸಿಎಎ ಅಡಿಯಲ್ಲಿ ನಾಗರಿಕತೆ ಪಡೆಯಲು ಐದು ವರ್ಷಗಳು ಸಾಕು. ಅಂದರೆ ಇರಾನ್ನಲ್ಲಿ ಶೋಷಣೆಗೆ ಒಳಗಾಗಿರುವ ಪಾರ್ಸಿಗಳು ಭಾರತಕ್ಕೆ ಬಂದರೆ ಅವರು ಪೌರತ್ವ ಪಡೆಯಲು 11 ವರ್ಷಗಳು ಕಾಯಬೇಕಾಗುತ್ತದೆ. ಆದರೆ ಅಪ್ಘಾನಿಸ್ತಾನದಿಂದ ಪಾರ್ಸಿಗಳು ಬಂದರೆ ಸಿಎಎ ಅಡಿಯಲ್ಲಿ ಬರೀ ಐದು ವರ್ಷದಲ್ಲೇ ಭಾರತದ ಸಿಟಿಜನ್ಶಿಪ್ ಸಿಗುತ್ತದೆ. ಈ ಕಾಯ್ದೆ ಅಸಂವಿಧಾನಿಕ ಎಂದು ಹೇಳಲು ಇದು ಕೂಡಾ ಒಂದು ಕಾರಣ” ಎಂದು ಅಭಿನವ್ ತಿಳಿಸಿದರು.
ಸಿಎಎ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೂ ಮುನ್ನ ಬಂದ ಮುಸ್ಲಿಮೇತರ ಅಲ್ಪಸಂಖ್ಯಾತರರಿಗೆ ಪೌರತ್ವವನ್ನು ನೀಡುವ ಕಾಯ್ದೆಯಾಗಿದೆ. ಈ ದಿನಾಂಕದ ಬಗ್ಗೆ ಅಭಿನವ್ ಪ್ರಶ್ನೆ ಮಾಡಿದ್ದಾರೆ.
“ಸಿಎಎ ಅಸಂವಿಧಾನಿಕ ಎನ್ನಲು ನಮ್ಮಲ್ಲಿರುವ ಮತ್ತೊಂದು ಕಾರಣ ಇದರ ಕಟ್ ಆಫ್ ಡೇಟ್. ಈ ಕಾನೂನು 2014ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತದೆ. ಆದರೆ ನೀವು 2015ರ ಜನವರಿ 1ರಂದು ಅಂದರೆ ಒಂದು ದಿನ ತಡವಾಗಿ ಭಾರತಕ್ಕೆ ಬಂದರೆ ನೀವು ಸಿಎಎ ಕಾಯ್ದೆಯಡಿ ಬರಲ್ಲ. ಈ ಕಾಯ್ದೆಯಲ್ಲಿ ಈ ರೀತಿ ಕಟ್ ಆಫ್ ಡೇಟ್ ಇರುವುದು ಮಾನವೀಯತೆಯನ್ನು ಕಡೆಗಣಿಸಿದಂತೆ” ಎಂದು ಅಭಿನವ್ ಅಭಿಪ್ರಾಯಿಸಿದ್ದಾರೆ.
“ತಮ್ಮ ದೇಶದಲ್ಲಿ ಧರ್ಮದ ಹೆಸರಲ್ಲಿ ಶೋಷಣೆಗೆ ಒಳಗಾಗುವವರಿಗೆ ಸುರಕ್ಷತೆ ಒದಗಿಸುವುದು ನಮ್ಮ ಗುರಿ ಅಂತ ನೀವು ಹೇಳುತ್ತೀರಿ. ಹಾಗಿದ್ದರೆ 2015ರ ಜನವರಿ 1ರ ನಂತರ ಭಾರತಕ್ಕೆ ಬಂದವರಿಗೆ ಯಾಕೆ ಪೌರತ್ವ ನೀಡಲ್ಲ” ಎಂದು ಪ್ರಶ್ನಿಸಿ ಅಭಿನವ್, “ನೀವು ಅನಾಥರಾಗಿದ್ದರೆ, ನಿಮ್ಮ ತಂದೆ ತಾಯಿ ಯಾರು ಅಂತ ತಿಳಿದಿಲ್ಲದಿದ್ದರೆ, ನೀವು ನಿಮ್ಮ ತಂದೆ ತಾಯಿ ಭಾರತೀಯರು ಅಂತ ಸಾಬೀತುಪಡಿಸಬೇಕಾಗುತ್ತದೆ. ಇದು ಯಾವ ನ್ಯಾಯ?” ಎಂದು ಕೇಳಿದ್ದಾರೆ. ಜೊತೆಗೆ ಅಭಿನವ್ ಮಂಗಳಮುಖಿಯರಿಗೆ ಪೌರತ್ವ ನೀಡುವ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನು ಓದಿದ್ದೀರಾ?: ಜ್ಞಾನೇಶ್ ಕುಮಾರ್, ಸುಖ್ಬೀರ್ ಸಂಧು ಕೇಂದ್ರ ಚುನಾವಣಾ ಆಯುಕ್ತರಾಗಿ ನೇಮಕ
“ನಿಮ್ಮ ತಂದೆ ತಾಯಿ ಅಕ್ರಮವಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದು ಮಹಾರಾಷ್ಟ್ರದಲ್ಲಿ ನೆಲೆಸಿದರು, ನೀವು ಭಾರತದಲ್ಲೇ ಹುಟ್ಟಿದ್ದು ಅಂದುಕೊಳ್ಳಿ. ಭಾರತದಲ್ಲಿ ಹುಟ್ಟಿರುವುದು ನಿಮ್ಮ ತಪ್ಪಾಗುತ್ತದೆಯೇ? ಮಗುವಿಗೆ ಭಾರತ ತನ್ನ ದೇಶ ಎಂದು ಮಾತ್ರ ತಿಳಿದಿರುತ್ತದೆ. ಈಗ ಆ ಮಗುವಿಗೆ ತಿಳಿಯದ ದೇಶವಾದ ಬಾಂಗ್ಲಾಕ್ಕೆ ಕಳುಹಿಸಿದರೆ ಅಥವಾ ಇಲ್ಲೇ ಹುಟ್ಟಿದ ವ್ಯಕ್ತಿಗೆ ಜೈಲು ಶಿಕ್ಷೆ ನೀಡಿದರೆ ಅದು ಸರಿಯೇ?” ಎಂದು ಅಭಿನವ್ ಪ್ರಶ್ನಿಸಿದ್ದಾರೆ.
ಈ ನಡುವೆ ಭಾರತದಲ್ಲಿ ಚುನಾವಣಾ ಬಾಂಡ್ ವಿಚಾರವನ್ನು ಮರೆಮಾಚಲು ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಿದೆ ಎಂಬ ಆರೋಪಗಳು ಕೂಡಾ ಇದೆ. ಜೊತೆಗೆ 2019ರಲ್ಲಿ ಸಿಎಎ ಅಂಗೀಕಾರವಾಗಿದ್ದರೂ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾನೂನು ಜಾರಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.