ಸಂಘಪರಿವಾರದ ಪರ್ಮನೆಂಟ್ ಕಾಲಾಳುಗಳಾಗಿದ್ದ ಸಿ.ಟಿ. ರವಿ ಮತ್ತು ಪ್ರತಾಪ್ ಸಿಂಹ ಎಂಬ ಇಬ್ಬರು ಶೂದ್ರರು, ಬಿಜೆಪಿ ಎಂಬ ಬೆಟ್ಟಕ್ಕೆ ಕಲ್ಲು ಹೊತ್ತು ಕಂಗಾಲಾಗಿ ಕೂತಿದ್ದಾರೆ. ಶೂದ್ರ ಸಮುದಾಯದವರನ್ನು ಕಲ್ಲು ಹೊರುವ ಕೆಲಸಕ್ಕೆ ಹಚ್ಚಿದ ತೇಜಸ್ವಿ ಸೂರ್ಯ ಮತ್ತು ಪ್ರಲ್ಹಾದ್ ಜೋಶಿಯಂತಹವರು ತಣ್ಣಗೆ ಟಿಕೆಟ್ ಪಡೆದು ನಗೆ ಬೀರುತ್ತಿದ್ದಾರೆ.
ಬಿಜೆಪಿ ಎಂಬ ಬೆಟ್ಟಕ್ಕೆ ಕಲ್ಲು ಹೊತ್ತ ಕಾಲಾಳುಗಳಿಗೆ ಕನಿಷ್ಠ ಕೂಲಿಯೂ ಸಿಗದಂತಾಗಿದೆ. ಮೌನವಾಗಿದ್ದ ವಟುಮೇಸ್ತ್ರಿಗಳಿಗೆ ಮತ್ತೆ ಮಣೆ-ಮನ್ನಣೆ ಸಿಕ್ಕಿದೆ.
ಬಿಜೆಪಿಯಲ್ಲಿ ಬೆಟ್ಟಕ್ಕೆ ಕಲ್ಲು ಹೊತ್ತವರು ಕಡಿಮೆಯೇನಿಲ್ಲ. ಅಂತಹ ಹಲವು ಕಾಲಾಳುಗಳ ಪೈಕಿ, ಸಂಘ ಪರಿವಾರದ ಕಣ್ಸನ್ನೆಗೇ ಕಾದು ಕುಳಿತಿರುತ್ತಿದ್ದ, ಅವರು ಕಾಲಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತು ತಿರುಗುತ್ತಿದ್ದ ಇಬ್ಬರು ಶೂದ್ರರ ಕತೆ ಇಂದು ಶೋಚನೀಯವಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಬಗ್ಗೆ ತೀರಾ ತುಚ್ಛವಾಗಿ ಮಾತನಾಡಿದ, ಉರಿಗೌಡ-ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗರನ್ನು ಅವಮಾನಿಸಿದ ಸಿ.ಟಿ. ರವಿ ಮತ್ತು ಪ್ರತಾಪ್ ಸಿಂಹ ಎಂಬ ಒಕ್ಕಲಿಗರು ಇಂದು ಇಂಗು ತಿಂದ ಮಂಗನಂತಾಗಿದ್ದಾರೆ.
ಹಳ್ಳಕ್ಕೆ ಬಿದ್ದವರಿಗೆ ಆಳಿಗೊಂದು ಕಲ್ಲು ಹಾಕುವುದು ಸರಿಯಲ್ಲ, ನಿಜ. ಆದರೆ ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ತುಂಬಿದವರನ್ನೇ ಶಕ್ತಿಹೀನರನ್ನಾಗಿ ಮಾಡಿದ ಬಗ್ಗೆ ಮಾತನಾಡುವ ಸಂದರ್ಭ ಸೃಷ್ಟಿಯಾಗಿದೆ.
ತುರ್ತು ಪರಿಸ್ಥಿತಿಯ ಕಾಂಗ್ರೆಸ್ ವಿರೋಧಿ ಅಲೆಯಿಂದಾಗಿ ರಾಜ್ಯದಲ್ಲಿ, 1983ರಲ್ಲಿ ಎರಡೇ ಎರಡು ಸ್ಥಾನವನ್ನು ಗಳಿಸಿದ್ದ ಭಾರತೀಯ ಜನತಾ ಪಕ್ಷವನ್ನು ಅಧಿಕಾರ ಹಿಡಿಯುವ ಮಟ್ಟಕ್ಕೆ ಮುಟ್ಟಿಸಿದ್ದು ಎ.ಕೆ.ಸುಬ್ಬಯ್ಯ, ಬಿ.ಬಿ. ಶಿವಪ್ಪ ಮತ್ತು ಬಿ.ಎಸ್. ಯಡಿಯೂರಪ್ಪನವರು. ಸುಬ್ಬಯ್ಯ, ಶಿವಪ್ಪರ ನಿರ್ಗಮನದ ನಂತರ ಬಿಜೆಪಿಯನ್ನು ಹೆಗಲ ಮೇಲಿಟ್ಟುಕೊಂಡು ಹೊತ್ತು ತಿರುಗಿದ್ದು ಬಿಎಸ್ವೈ. ಅದರಲ್ಲೂ 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ, ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸಿದ್ದ ಬಿಎಸ್ವೈ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಭಾವುಟ ಹಾರಿಸಿದ್ದರು.
ಅಲ್ಲಿಯವರೆಗೆ ಇದ್ದೂ ಇಲ್ಲದಂತಿದ್ದ ನಾಗಪುರದವರು, ಯಡಿಯೂರಪ್ಪನವರು ಗಟ್ಟಿಗೊಳ್ಳುತ್ತಿದ್ದಂತೆ ನಿಧಾನಕ್ಕೆ ಹೆಡೆ ಬಿಚ್ಚತೊಡಗಿದರು. ತನ್ನ ಶೂದ್ರ ಕಾಲಾಳುಗಳ ತಲೆಗೆ ವಿಷ ತುಂಬಿ ತಮ್ಮದೇ ಸರ್ಕಾರದ ವಿರುದ್ಧ ಕಕ್ಕುವಂತೆ ನೋಡಿಕೊಂಡರು. ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರರ ವಿರುದ್ಧ ಸಿ.ಟಿ. ರವಿ ಕುಟುಕಿದರೆ, ಪ್ರತಾಪ್ ಸಿಂಹ ಘರ್ಜಿಸುತ್ತಿದ್ದರು. ಇವರಿಬ್ಬರ ರೆಡಿಮೇಡ್ ಹೇಳಿಕೆಗಳಿಗೆ ಸಿದ್ಧವಾಗಿ ನಿಂತಿರುತ್ತಿದ್ದ ಗೋದಿ ಬಿಸ್ಕೆಟ್ ತಿಂದ ಪತ್ರಕರ್ತರು, ಅದನ್ನು ಇಡೀ ದಿನದ ಸುದ್ದಿಯಾಗಿ ರಾಜ್ಯದಾದ್ಯಂತ ಹಂಚುತ್ತಿದ್ದರು.
ಹೀಗೆ, ಪ್ರತಿದಿನ ಒಂದಿಲ್ಲೊಂದು ಅವಾಂತರ ಸೃಷ್ಟಿಸಿದ ಸಂಘೀಗಳ ಸಂಚಿಗೆ ಯಡಿಯೂರಪ್ಪ ಬಲಿಯಾದರು. ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದು, ಕಣ್ಣೀರು ಹಾಕಿದರು. ರಾಜ್ಯ ರಾಜಕಾರಣದಿಂದಲೇ ನಿರ್ಗಮಿಸಿದರು.
ಇದನ್ನು ಓದಿದ್ದೀರಾ?: ಧಾರವಾಡ ಲೋಕಸಭಾ ಕ್ಷೇತ್ರ | ಜಗದೀಶ್ ಶೆಟ್ಟರ್ ಗೆ ನಿರಾಸೆ, ಪ್ರಲ್ಹಾದ್ ಜೋಶಿ ಮತ್ತೆ ಕಣಕ್ಕೆ
ಆನಂತರ ಬಸವರಾಜ ಬೊಮ್ಮಾಯಿ ಎಂಬ ಬೊಂಬೆಯನ್ನು ಮುಖ್ಯಮಂತ್ರಿ ಮಾಡಿದ ಬಿಜೆಪಿ ಹೈಕಮಾಂಡ್, ‘ಯಡಿಯೂರಪ್ಪನವರಿಗೆ ವಯಸ್ಸಾಗಿತ್ತು, ವಂಶ ಪಾರಂಪರ್ಯದ ವಿರುದ್ಧವಿರುವ ನಮ್ಮ ಪಕ್ಷ, ಅವರಿಗೆ ವಿಶ್ರಾಂತಿ ನೀಡಿ, ಅವರು ಹೇಳಿದ ವ್ಯಕ್ತಿಯನ್ನೇ ಸಿಎಂ ಮಾಡಿದೆ’ ಎಂದು ನಾಡಿನ ಜನತೆಗೆ ಸಂದೇಶ ರವಾನಿಸಿತ್ತು.
ಆ ಮೂಲಕ ರಾಜ್ಯದಲ್ಲಿ ಬಿಜೆಪಿಗೆ ನೆಲೆ-ಬೆಲೆ ತಂದುಕೊಟ್ಟಿದ್ದ ಯಡಿಯೂರಪ್ಪನವರ ಪರ್ವ ಮುಗಿದಿತ್ತು. ಹಾಗೆಯೇ ಸಂಘಪರಿವಾರ ಮುನ್ನೆಲೆಗೆ ಬಂದಿತ್ತು. ಸಂಘ ಪರಿವಾರದ ಸಂತೋಷ್ ಮತ್ತು ಧಾರವಾಡ ಪೇಶ್ವೆ ಬ್ರಾಹ್ಮಣರ ಕೈಗೆ ಸರ್ಕಾರ ಸಿಕ್ಕಿತ್ತು. ಹಿಜಾಬ್, ಹಲಾಲ್, ಪಠ್ಯ ಪುಸ್ತಕ ತಿರುಚುವಿಕೆ, ರಾಷ್ಟ್ರೋತ್ಥಾನಕ್ಕೆ ಬಹುಕೋಟಿಯ ಗೋಮಾಳ ಭೂಮಿ, ಶಿವಮೊಗ್ಗ ಗಲಭೆ, ಉರಿಗೌಡ-ನಂಜೇಗೌಡ, ನಂದಿನಿ ವಿಲೀನ, ಹಿಂದಿ ಹೇರಿಕೆಯಂತಹ ನಾಗಪುರದವರ ಹಿಡನ್ ಅಜೆಂಡ ಚಾಲ್ತಿಗೆ ಬಂದಿತ್ತು.
ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ನಾಡು ನರಳತೊಡಗಿತು. ಇದನ್ನೂ ಸಮರ್ಥಿಸಿಕೊಂಡ ಸಿ.ಟಿ. ರವಿ ಮತ್ತು ಪ್ರತಾಪ್ ಸಿಂಹ, ತಾವೇ ಮುಂದಿನ ಮಹಾನ್ ನಾಯಕರೆಂದು ಭ್ರಮಿಸಿ, ಅಲ್ಪ ಅಧಿಕಾರಕ್ಕೆ, ಹಣಕ್ಕೆ ತಮ್ಮತನವನ್ನೇ ಮಾರಿಕೊಂಡರು. ವಿವೇಚನೆಯನ್ನೇ ಮರೆತರು.
ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಿಷ್ಯನಿಂದಲೇ ಸೋಲು ಅನುಭವಿಸಿದ ಸಿ.ಟಿ.ರವಿ, ಮೊದಲ ಬಾರಿಗೆ ಸೋಲಿನ ರುಚಿ ಉಂಡಿದ್ದರು. ಯಡಿಯೂರಪ್ಪನವರ ಒಳೇಟು ಹಾಗೂ ಸಹಾಯಕ್ಕೆ ಬರದ ಸಂಘ ಪರಿವಾರದ ಬಗ್ಗೆ ಬೇಸರವಿದ್ದರೂ, ಬಹಿರಂಗಪಡಿಸದೆ ನೋವು ನುಂಗಿಕೊಂಡಿದ್ದರು.
ಸೋತರೇನಂತೆ, ಈ ಬಾರಿ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸಿ ಗೆಲ್ಲಬೇಕು ಎಂದು ಮತ್ತೆ ಸಂಘಪರಿವಾರದ ಮೊರೆ ಹೋಗಿದ್ದರು. ಈಗಾಗಲೇ ಎರಡು ಬಾರಿ ಗೆದ್ದು ಸಂಸದೆಯಾಗಿ, ಸಚಿವೆಯಾಗಿ ನೆಲೆಯೂರಿದ್ದ ಶೋಭಾ ಕರಂದ್ಲಾಜೆಯ ವಿರುದ್ಧ ‘ಗೋ ಬ್ಯಾಕ್’ ಅಭಿಯಾನ ಹುಟ್ಟುಹಾಕಿದರು. ಕಾರ್ಯಕರ್ತರನ್ನು ಎತ್ತಿಕಟ್ಟಿ ಶೋಭಾರಿಗೆ ಮುಖಭಂಗವಾಗುವಂತೆ ನೋಡಿಕೊಂಡರು. ಅದನ್ನು ಕೇಂದ್ರದ ನಾಯಕರಿಗೆ ಮುಟ್ಟಿಸಿದರು. ಶೋಭಾರಿಗೆ ಟಿಕೆಟ್ ಸಿಗದಂತೆ ನೋಡಿಕೊಂಡರು. ಇಷ್ಟೆಲ್ಲ ಸರ್ಕಸ್ ಮಾಡಿದ ಸಿ.ಟಿ.ರವಿಗೆ ಟಿಕೆಟ್ ಸಿಕ್ಕಿತೇ? ಟಿಕೆಟ್ ಕೋಟ ಶ್ರೀನಿವಾಸ ಪೂಜಾರಿಯವರ ಪಾಲಾಯಿತು.
ಈಗ ಸಿ.ಟಿ.ರವಿ, ‘ಯಾರ್ಯಾರು ಏನೇನು ಮಾಡಿದರು ಅಂತ ಹೇಳ್ತೀನಿ, ಚುನಾವಣೆಯೊಂದು ಮುಗಿದುಬಿಡಲಿ, ಎಲ್ಲರ ಬಂಡವಾಳವನ್ನು ಬಯಲು ಮಾಡ್ತೀನಿ’ ಎಂದು ತಮ್ಮ ಎದೆಯಾಳದ ನೋವನ್ನು ತೋಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಲೋಕಸಭೆ ಚುನಾವಣೆ | ದೇವಾಲಯ ನಗರ ‘ಪುರಿ’ ಹಿಂದುತ್ವವಾದಿ ಬಿಜೆಪಿಗೆ ಗೆಲ್ಲಲಾಗದ ಹುಳಿನಿಂಬೆ
ಇದೇ ರೀತಿ, ಭಟ್ಟರ ಭಂಟನಾಗಿ ಸಂಘ ಪರಿವಾರದ ಕಾಲಾಳು ಆಗಿದ್ದ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾನೇ ರಾಜ ಎಂಬಂತೆ ಮೆರೆಯುತ್ತಿದ್ದ ಪ್ರತಾಪ್ ಸಿಂಹಗೂ ಈಗ ಶಾಕ್ ಆಗಿದೆ. ಹೈಕಮಾಂಡ್ ರಾಜಮನೆತನದ ಯದುವೀರ ಒಡೆಯರ್ಗೆ ಟಿಕೆಟ್ ಕೊಟ್ಟು, ಪ್ರತಾಪರಿಗೆ ಪಲ್ಟಿ ಹೊಡೆಸಿದೆ.
ಒಕ್ಕಲಿಗನಾದರೂ, ಸಂಘ ಪರಿವಾರದ ಸೂತ್ರದ ಬೊಂಬೆಯಂತೆ ನಿರಂತರವಾಗಿ ಟಿಪ್ಪು ಸುಲ್ತಾನ್ ಬಗ್ಗೆ ವಿಷ ಕಕ್ಕಿದ ಪ್ರತಾಪ್ ಸಿಂಹ, ಈಗ ಮೈಸೂರು ಮಹಾರಾಜರ ಬಗ್ಗೆಯೂ ವ್ಯಂಗ್ಯವಾಡಿ, ತಮ್ಮ ನಿಲುವಿನ ಬಗ್ಗೆಯೇ ಗೊಂದಲಕ್ಕೆ ಬಿದ್ದಿದ್ದಾರೆ. ಟಿಪ್ಪು ಪರವೂ ಅಲ್ಲ, ಮೈಸೂರು ರಾಜರ ಪರವೂ ಅಲ್ಲ; ಹಾಗಾದರೆ ಪ್ರತಾಪ್ ಸಿಂಹ ಬ್ರಿಟೀಷರ ಪರವೇ ಎನ್ನುವಂತಾಗಿದೆ. ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಮಾಮೂಲಿಯಾಗಿರುವ ಬಸ್ ನಿಲ್ದಾಣದ ಗುಂಬಜ್ನಲ್ಲೂ ಮುಸಲ್ಮಾನರನ್ನು ಹುಡುಕಿದ ಪ್ರತಾಪ್ ಸಿಂಹ, ಸುಲಭವಾಗಿ ಸಿಕ್ಕ ಸಂಸದನ ಸ್ಥಾನದ ಮಹತ್ವವನ್ನೇ ಅರಿಯಲಿಲ್ಲ. ಮಹಿಷ ದಸರಾವನ್ನು ವಿರೋಧಿಸಲು ಹೋಗಿ ದಲಿತ ವಿರೋಧಿ ಹಣೆಪಟ್ಟಿ ಕಟ್ಟಿಕೊಂಡದ್ದು ಗೊತ್ತೇ ಆಗಲಿಲ್ಲ. ಸಿಕ್ಕ ಅಪೂರ್ವ ಅವಕಾಶವನ್ನು, ಹತ್ತು ವರ್ಷಗಳ ಅಧಿಕಾರವನ್ನು ಜನರ ಹಿತಕ್ಕಾಗಿ ಬಳಸಲಿಲ್ಲ. ಹಿರಿಯರನ್ನು ಗೌರವದಿಂದ ಕಾಣಲಿಲ್ಲ. ದುರಹಂಕಾರವನ್ನು ದೂರ ಇಡಲಿಲ್ಲ. ಹೋಗಲಿ, ಪ್ರಾಮಾಣಿಕರ ಎಂದರೆ, ಸಂಸತ್ ಬಾಂಬ್ ಹಗರಣದಲ್ಲಿ ತನಿಖೆಗೆ ಕೊಟ್ಟ ಫೋನ್ನಿಂದ ‘ಬಂಡವಾಳ’ ಬಯಲಾಗುವುದನ್ನೂ ತಡೆಯಲಾಗಲಿಲ್ಲ. ಈಗ, ಸಂಘ ಪರಿವಾರದವರೂ ಸಹಾಯಕ್ಕೆ ಬರಲಿಲ್ಲ; ಯಡಿಯೂರಪ್ಪನವರೂ ಬೆಂಬಲಿಸಲಿಲ್ಲ. ಪ್ರತಾಪ್ ಸಿಂಹ ಈಗ ಹೋಗುವುದೆಲ್ಲಿಗೇ?
ಇದು ಸಿ.ಟಿ.ರವಿ ಮತ್ತು ಪ್ರತಾಪ್ ಸಿಂಹರಿಗಷ್ಟೇ ಆದ ಆಘಾತವಲ್ಲ. ಈ ಸಾಲಿಗೆ ಈಶ್ವರಪ್ಪ, ರೇಣಕಾಚಾರ್ಯ, ಮಾಧುಸ್ವಾಮಿ, ಯತ್ನಾಳ್, ನಳಿನ್ ಕುಮಾರ್ ಕಟೀಲು, ಜಗದೀಶ್ ಶೆಟ್ಟರ್, ಸದಾನಂದಗೌಡ, ಬಿ.ಸಿ. ಪಾಟೀಲ್, ಕೋಲಾರದ ಮುನಿಸ್ವಾಮಿ, ಬಳ್ಳಾರಿಯ ದೇವೇಂದ್ರಪ್ಪ, ಮಂಡ್ಯದ ಸುಮಲತಾರೆಂಬ ಶೂದ್ರರೆಲ್ಲ ಸೇರುತ್ತಾರೆ.
ಅಂದರೆ, ಬಿಜೆಪಿಯವರೇ ಬಿಜೆಪಿಗರ ಬೆನ್ನಿಗೆ ಹಿರಿದಿದ್ದಾರೆ. ಪಕ್ಷದ ಮೇಲೆ ಪ್ರಾಬಲ್ಯ ಹೊಂದಲು, ಪ್ರತಿಷ್ಠೆ ತೋರಲು, ಸ್ವಾರ್ಥ ಸಾಧಿಸಲು ಅವರಿಗವರೇ ಶತ್ರುಗಳಾಗಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಬ್ರಾಹ್ಮಣರು ಬಚಾವಾಗಿ, ಶೂದ್ರರು ಮಾತ್ರ ನೇಣುಗಂಬಕ್ಕೇರಿದ್ದಾರೆ.
ಅದರಲ್ಲೂ ಸಂಘಪರಿವಾರದ ಪರ್ಮನೆಂಟ್ ಕಾಲಾಳುಗಳಾಗಿದ್ದ ಸಿ.ಟಿ. ರವಿ ಮತ್ತು ಪ್ರತಾಪ್ ಸಿಂಹ ಎಂಬ ಇಬ್ಬರು ಶೂದ್ರರು, ಬಿಜೆಪಿ ಎಂಬ ಬೆಟ್ಟಕ್ಕೆ ಕಲ್ಲು ಹೊತ್ತು ಕಂಗಾಲಾಗಿ ಕೂತಿದ್ದಾರೆ. ಶೂದ್ರ ಸಮುದಾಯದವರನ್ನು ಕಲ್ಲು ಹೊರುವ ಕೆಲಸಕ್ಕೆ ಹಚ್ಚಿದ ತೇಜಸ್ವಿ ಸೂರ್ಯ ಮತ್ತು ಪ್ರಲ್ಹಾದ್ ಜೋಶಿಯಂತಹವರು ತಣ್ಣಗೆ ಟಿಕೆಟ್ ಪಡೆದು ನಗೆ ಬೀರುತ್ತಿದ್ದಾರೆ.
ಬಿಜೆಪಿಯಲ್ಲಿರುವ ರವಿ-ಸಿಂಹಗಳೆಂಬ ಶೂದ್ರರು ಸಂಘ ಪರಿವಾರದ ಹಿಕ್ಮತ್ತುಗಳನ್ನು ಈಗಲೂ ಅರಿಯದಿದ್ದರೆ; ಅದನ್ನು ನಾಡಿನ ಜನತೆಯ ಮುಂದೆ ಬಿಚ್ಚಿಡದಿದ್ದರೆ, ಇವರೇ ಉರಿಗೌಡ-ನಂಜೇಗೌಡರಾಗಿ, ಇವರನ್ನೇ ಶೂದ್ರರ ಮೇಲೆ ಅಸ್ತ್ರದಂತೆ ಬಳಸಿದರೂ ಆಶ್ಚರ್ಯವಿಲ್ಲ.
ಲೇಖಕ, ಪತ್ರಕರ್ತ
ಹಾವಿನಪುರದ ಹಾರವಶಾಹಿಯ ಹಿಕ್ಮತ್ತು ಅಷ್ಟು ಸುಲಭವಾಗಿ ಕಾರ್ಯಕರ್ತರ ತಲೆಗೆ ಇಳಿಯುವುದಿಲ್ಲ.ಆದರೆ ರಾತ್ರಿ ಕಂಡ ಬಾವಿಗೆ ಹಗಲಲ್ಲಿ ಬಿದ್ದೇ ಬೀಳುತ್ತೀವಿ ಅಂತ ಇವರಿಬ್ಬರು ಹೊರಟರೇ ತಡೆಯೋರು ಯಾರು?