ಪ್ರತಿಯೊಬ್ಬ ಯುವ ಮತದಾರರು ಚುಣಾವಣಾ ರಾಯಭಾರಿಗಳಾಗಿದ್ದು, ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ ಮತಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಲೋಕಸಭಾ ಚುನಾವಣಾ ಹಿನ್ನೆಲೆ, ಭಾರತ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ಎಂ.ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ಸಭಾಂಗದಣದಲ್ಲಿ ಏ.18ರಂದು ಹಮ್ಮಿಕೊಂಡಿದ್ದ “ನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿ” ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
“ಮತದಾರರು ಯಾವುದೇ ಆಮಿಷಗಳು, ಪ್ರೇರೇಪಣೆಗಳಿಗೆ ಒಳಗಾಗದೆ, ನಿಮ್ಮ-ನಿಮ್ಮ ಸ್ವಯಿಚ್ಛೆಯಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ ಚಲಾಯಿಸಬೇಕು. ಕೆವೈಸಿ ತಂತ್ರಾಂಶದ ಮೂಲಕ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ತಿಳಿದುಕೊಂಡು ಮತದಾನ ಮಾಡಬೇಕು” ಎಂದು ತಿಳಿಸಿದರು.
“ನಿಮಗೆ ಯಾವುದೇ ಅಭ್ಯರ್ಥಿಗೆ ಮತದಾನ ಮಾಡಲು ಇಷ್ಟವಿಲ್ಲದಿದ್ದಲ್ಲಿ ನೋಟಾಗೆ ಮತ ಚಲಾಯಿಸುವ ಅವಕಾಶವಿದೆ. ನಮ್ಮ ಒಂದು ಮತದಿಂದ ಏನೂ ಬದಲಾವಣೆ ಆಗುವುದಿಲ್ಲ ಎಂಬ ಮನೋಭಾವವನ್ನೆ ತೆಗದುಹಾಕಿ ಎಲ್ಲರೂ ತಪ್ಪದೇ, ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು” ಎಂದು ಪ್ರೇರೇಪಿಸಿದರು.
“ಚುನಾವಣೆಯಲ್ಲಿ ಎಲ್ಲ ಸಮುದಾಯದವರೂ ಮತಗಟ್ಟೆಗಳಿಗೆ ಬಂದು ಮತದಾನ ಮಾಡಬೇಕೆಂಬುದು ಚುನಾವಣಾ ಆಯೋಗದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸೂಕ್ತ ಕ್ರಮಗಳನ್ನು ಕೈಗೊಂಡು ಎಲ್ಲ ಸಮುದಾಯದವರನ್ನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕೆಲಸ ಮಾಡಿ ಮತಚಲಾಯಿಸುವ ಅವಕಾಶ ಕಲ್ಪಿಸಲಾಗುತ್ತಿದೆ” ಎಂದು ಹೇಳಿದರು.
ಚುನಾವಣಾ ರಾಯಭಾರಿಯಾದ ನೀತು ವನಜಾಕ್ಷಿ ಮಾತನಾಡಿ, “ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಆತ್ಮವಿದ್ದಂತೆ, ಮತಗಳು ಉಸಿರಿದ್ದಂತೆ, ಅದಕ್ಕೆ ಜೀವ ಬರಬೇಕಾದರೆ ನೀವೆಲ್ಲರೂ ತಪ್ಪದೆ ಮತದಾನ ಮಾಡಬೇಕು” ಎಂದು ತಿಳಿಸಿದರು.
“ಪ್ರತಿಯೊಂದು ಮತವೂ ಸಾಕಷ್ಟು ಮುಖ್ಯವಾಗಿದೆ. ನಮ್ಮೆಲ್ಲರಿಗೂ ಸರಿಯಾದ ನಾಯಕರ ಅವಶ್ಯಕತೆಯಿದ್ದು, ಏಪ್ರಿಲ್ 26 ರಂದು ನಡೆಯುವ ಮತದಾನ ದಿನದಂದು ಎಲ್ಲರೂ ತಪ್ಪದೆ ಮತಗಟ್ಟೆಗೆ ತೆರಳಿ ಹೆಮ್ಮೆಯಿಂದ ನಿಮ್ಮ ಮತ ಚಲಾಯಿಸಿ” ಎಂದು ಹೇಳಿದರು.
ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಿದ್ದ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯಕೀಯ, ಕಾನೂನು, ವಾಣಿಜ್ಯ, ಮ್ಯಾನೇಜ್ಮೆಂಟ್ ಸೇರಿದಂತೆ 13 ವಿಭಾಗಳು ಸೇರಿ ಸುಮಾರು 2000 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ತಪ್ಪದೆ ಮತದಾನ ಮಾಡುವುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಈ ಸುದ್ದಿ ಓದಿದ್ದೀರಾ? ಬೇಸಿಗೆ | ಬಿಯರ್ ಮೊರೆ ಹೋದ ಮದ್ಯಪ್ರಿಯರು: 11 ದಿನದಲ್ಲಿ 27 ಲಕ್ಷ ಲೀ. ಬಿಯರ್ ಮಾರಾಟ
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಸ್ನೇಹಲ್, ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿಯಾದ ಕೆ.ಕೆ ರೈನಾ, ಗೋಕುಲ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀನಿವಾಸ್ ಮೂರ್ತಿ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯಾದ ವೇಣುಗೋಪಾಲ್, ವಲಯ ಜಂಟಿ ಆಯುಕ್ತರಾದ ಯೋಗೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.