ಕಲಬುರಗಿ ಜಿಲ್ಲೆಯ ದಕ್ಷಿಣ ಕ್ಷೇತ್ರದ ಭೀಮಳ್ಳಿ ಗ್ರಾಮದ ದಲಿತ ಓಣಿಯಲ್ಲಿ ನೀರಿನ ಸೌಲಭ್ಯ ಸಿಕ್ಕಿಲ್ಲ. ಹಿಂದಿನ ಕಾಲಘಟ್ಟದಂತೆ ಪ್ರಸ್ತುತ ದಿನಗಳಲ್ಲಿಯೂ ಕೂಡ ಬಾವಿ ನೀರು ಸೇದುವ ಅನಿವಾರ್ಯತೆ ಎದುರಾಗಿದೆ.
ದಲಿತ(ಮಾದಿಗ ಸಮುದಾಯದ) ಕುಟುಂಬಗಳು ವಾಸವಾಗಿರುವ ಓಣಿಯಲ್ಲಿ ಸುಮಾರು ವರ್ಷಗಳಿಂದ ಕುಡಿಯಲು, ಬಳಸಲು ನೀರಿಲ್ಲ. ಸರ್ಕಾರದಿಂದ ನೀರಿನ ಟ್ಯಾಂಕ್, ಜಲಜೀವನ ಮಿಷನ್ ಅಡಿಯಲ್ಲಿ ಮನೆಗೊಂದು ನಳ್ಳಿ ಮಾಡಿದ್ದಾರೆ. ಅವುಗಳು ತೋರಿಕೆ ರೂಪದಲ್ಲಿವೆಯೇ ವಿನಃ ಒಂದು ದಿನವೂ ಅದರಲ್ಲಿ ನೀರು ಬಂದಿಲ್ಲ. ಟ್ಯಾಂಕ್ಗಳಿಗೆ ಪೈಪ್ಲೈನ್ ವ್ಯವಸ್ಥೆ ಕೂಡ ಆಗಿಲ್ಲ. ಸುಮನೆ ಕಟ್ಟಿಬಿಟ್ಟಿದ್ದಾರೆ ಅಷ್ಟೆ!
“ಬಳಸುವುದಕ್ಕೆ ಕುಡಿಯುವುದಕ್ಕೆ ನಾವು ಪ್ರತಿನಿತ್ಯ ಬಾವಿಯಿಂದ ನೀರು ಸೇದಿ ಹೊತ್ತು ತರುವಂತಹ ಅನಿವಾರ್ಯತೆ ಎದುರಾಗಿದೆ. ತೆರೆದ ಬಾವಿಯಲ್ಲಿ ಕಸಕಡ್ಡಿ, ಮಳೆ ನೀರು ಸೇರಿಕೊಳ್ಳುತ್ತಿದೆ. ಇದರಿಂದ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ. ಅದೇ ಬಾವಿ ನೀರು ಸೇವಿಸಿದರೆ ರೋಗ ರುಜಿನಗಳು ಹರಡಬಹುದೆನ್ನುವ ಆತಂಕ ಮನೆಮಾಡಿದೆ. ಆದರೆ ದಲಿತರ ಓಣಿ ಅಂದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ” ಎಂದು ಭೀಮಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವಿಚಾರದ ಕುರಿತು ಈ ದಿನ. ಕಾಮ್ನೊಂದಿಗೆ ಮಾತನಾಡಿದ ಗ್ರಾಮದ ಗೃಹಿಣಿ ಶ್ರೀದೇವಿ, “ಎಸ್ಸಿ ಜನರ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯವಾಗಿದೆ. ನಾವು ಸತ್ತಿದ್ದೇವಾ ಬದುಕಿದ್ದೇವಾ ಎಂದೂ ಕೂಡ ನೋಡುವುದಿಲ್ಲ. ನೀರಿಗಾಗಿ ಬೀದಿ-ಬೀದಿ ಅಲೆದು ನೀರು ತರುವ ಪರಿಸ್ಥಿತಿ ಇದೆ. ಅವರು ನೀರು ಕೊಡಲಿಲ್ಲ ಅಂದರೆ ಬಾವಿಯಿಂದ ನೀರು ಸೇದಿ ತರುವಷ್ಟರಲ್ಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಕೆಲಸ ಬಿಟ್ಟು ಕೂತರೆ ನಮ್ಮ ಹೊಟ್ಟೆ ಬಟ್ಟೆ ಹೇಗೆ ನಡೆಯಬೇಕು” ಎಂದು ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.
ಸುಗಲಬಾಯಿ ಈ ದಿನ. ಕಾಮ್ನೊಂದಿಗೆ ಮಾತನಾಡಿ,”ನಮ್ಮ ಮಕ್ಕಳು, ಸೊಸೆಯಂದಿರು ದುಡಿಯಲು ಬಾಂಬೆ, ಪೂನಾಗೆ ಹೋಗಿದ್ದಾರೆ. ನಾವು ವಯಸ್ಸಾದವರು. ಬಾವಿಯಿಂದ ಹೇಗೆ ನೀರು ಸೇದಿ ತರಬೇಕು. ಅವರಿವರ ಮಕ್ಕಳಿಗೆ ಕೈ ಕಾಲು ಬಿದ್ದು ಒಂದು ಕೊಡ ನೀರು ತಂದು ಕೊಡಿರೆಂದು ಬೇಡಿಕೊಳ್ಳಬೇಕು. ನಮ್ಮ ಓಣಿಗೆ ನೀರಿನ ಸೌಲಭ್ಯ ಕಲ್ಪಿಸಿಕೊಡಿ” ಎಂದು ಮನವಿ ಮಾಡಿದರು.
“ನೀರಿನ ಟ್ಯಾಂಕ್ ಮತ್ತು ಜಲಜೀವನ್ ಅಡಿಯಲ್ಲಿ ಮನೆಗೊಂದು ನಳ ಮಾಡಿದ್ದಾರೆ. ಆದರೆ ಅದರಲ್ಲಿ ನೀರು ಬರುವುದಿಲ್ಲ. ಪೈಪ್ಲೈನ್ ವ್ಯವಸ್ಥೆ ಕೂಡ ಸರಿಯಾಗಿ ಆಗಿಲ್ಲ. ನಾಮಕಾವಸ್ಥೆಗೆ ನೀರಿನ ಟ್ಯಾಂಕ್ ಕಟ್ಟಿ ಬಿಟ್ಟಿದ್ದಾರೆ. ನಾವು ಬಾವಿ ಮುಂದೆ ಒಬ್ಬರ ಮೇಲೊಬ್ಬರು ಬಿದ್ದು, ನೀರು ಹೊತ್ತು ತರುವ ಪರಿಸ್ಥಿತಿ ಇದೆ. ಎರಡೂರು ದಿನಗಳಿಂದ ಶೇಖರಣೆ ಮಾಡಿಟ್ಟ ನೀರನ್ನೇ ಬಳಸುತ್ತಿದ್ದೇವೆ. ನಿತ್ಯ ನೀರು ಸೇದಿ ತರಲು ಆಗುವುದಿಲ್ಲ. ನೀರು ಹೊತ್ತು ತರುವಷ್ಟರಲ್ಲಿ ಕೂಲಿ ಕೆಲಸದ ಸಮಯ ಮೀರಿ ಹೋಗಿರುತ್ತೆ. ಇದೇ ರೀತಿಯಾದರೆ ನಮ್ಮ ಸಾಲ ಸವದ ಹೇಗೆ ಕಟ್ಟಿಕೊಳ್ಳಬೇಕು” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದು ಗ್ರಾಮದ ದೂಳಮ್ಮ.
ಈ ದಿನ. ಕಾಮ್ನೊಂದಿಗೆ ಮಾತನಾಡಿದ ನಾಗಮ್ಮ, “ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ನಾನು ವಯಸ್ಸಾದವಳು. ನೀರು ಹೊತ್ತು ತರಲು ಆಗುವುದಿಲ್ಲ. ಯಾರಾದರೂ ನೀರು ತಂದುಕೊಟ್ಟರೆ ಮಾತ್ರ ನನಗೆ ನೀರು ಸಿಗುತ್ತದೆ. ನೀರು ಪ್ರತಿನಿತ್ಯ ಅತೀ ಮುಖ್ಯವಾಗಿ ಬೇಕು. ಅದರಿಂದ ನಮಗೆ ನೀರಿನ ಸವಲತ್ತು ಮಾಡಿಕೊಡಿ” ಎಂದು ಮನವಿ ಮಾಡಿಕೊಂಡರು.
ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯೀಲ್ ಈ ದಿನ. ಕಾಮ್ದೊಂದಿಗೆ ಮಾತನಾಡಿ, “ಐದು ಕಿಲೋ ಮೀಟರ್ ದೂರದ ಕೇರಿಬೋಸಗ ಗ್ರಾಮದಿಂದ ನಮ್ಮ ಊರಿಗೆ ನೀರು ಸರಬರಾಜು ಆಗುತ್ತದೆ. ಗ್ರಾಮದಲ್ಲಿ ಪ್ರವಾಹ ಜಾಸ್ತಿ ಬಂದು ಪೈಪ್ಲೈನ್ ಕಟ್ ಆಗುತ್ತಿದೆ. ಎಷ್ಟೇ ದುರಸ್ಥಿ ಮಾಡಿದ್ರೂ, ಅದೇ ರೀತಿ ಆಗುತ್ತಿದೆ. ಹಾಗಾಗಿ ದಲಿತ ಓಣಿಗೆ ಪ್ರತ್ಯೇಕವಾಗಿ ಬೋರ್ವೆಲ್ ಹಾಕಿಸಿ ಎಂಬುದು ನಮ್ಮ ಬೇಡಿಕೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಹುದುಗಿದ್ದ ಮಣ್ಣಿನ ಗುಡ್ಡೆಯಲ್ಲಿ ನೆಲಮಾಳಿಗೆ ಪತ್ತೆ
ಈ ವಿಚಾರದಕುರಿತು ಈ ದಿನ. ಕಾಮ್ ಶಾಸಕ ಅಲ್ಲಪ್ರಭು ಪಾಟೀಲ್ ಅವರೊಂದಿಗೆ ಮಾತನಾಡಿದಾಗ, “ಗ್ರಾಮದ ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ. ಕೆಡಿಪಿ ಮೀಟಿಂಗ್ನಲ್ಲಿ ಈ ವಿಚಾರದ ಕುರಿತು ಚರ್ಚೆ ಮಾಡಿರುವೆ. ಹೊಸ ಬೋರ್ವೆಲ್ ಸ್ಯಾಂಕ್ಷನ್ ಆಗಿದೆ. ಇದನ್ನು ಆದಷ್ಟು ಬೇಗ ಹಾಕಿಸುವೆ” ಎಂದು ತಿಳಿಸಿದರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.