- ಎನ್ಸಿಆರ್ಬಿ ವರದಿ ಉಲ್ಲೇಖಿಸಿ ಗುಜರಾತ್ ಕಾಂಗ್ರೆಸ್ ವಕ್ತಾರ ಹಿರೇನ್ ಬ್ಯಾಂಕರ್ ಟೀಕೆ
- ಒಂದು ವರ್ಷದಲ್ಲಿ ಅಹಮದಾಬಾದ್, ವಡೋದರಾದಲ್ಲಿ 4,722 ಮಹಿಳೆಯರು ನಾಪತ್ತೆ
ಕೇರಳದ ಮಹಿಳೆಯರನ್ನು ಉಗ್ರವಾದಿಗಳು ಅಪಹರಿಸುವ ಕುರಿತ ‘ದಿ ಕೇರಳ ಸ್ಟೋರಿ’ ರಾಷ್ಟ್ರಾದ್ಯಂತ ಸುದ್ದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲೂ ಇದೇ ವಿಚಾರ ಎತ್ತಿ ವಿಪಕ್ಷಗಳನ್ನು ಟೀಕಿಸಿವೆ. ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕರು ಪ್ರಧಾನಿ ಮೋದಿಯವರ ಮುಂದೆ ಅವರದ್ದೇ ಸರ್ಕಾರವಿರುವ ಗುಜರಾತ್ನಲ್ಲಿ ಮಹಿಳೆಯರ ಅಪಹರಣದ ಪ್ರಮಾಣದತ್ತ ಬೊಟ್ಟು ಮಾಡಿ ತಿರುಗೇಟು ನೀಡಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ (ಎನ್ಸಿಆರ್ಬಿ) ಅಧಿಕೃತ ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳ ಪ್ರಕಾರ ಗುಜರಾತ್ನಲ್ಲಿ 40 ಸಾವಿರಕ್ಕೂ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ವಿಚಾರವನ್ನು ಮುಂದಿಟ್ಟು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಟ್ವಿಟರ್ನಲ್ಲಿ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಎನ್ಸಿಆರ್ಬಿ ದಾಖಲೆಗಳ ಪ್ರಕಾರ, 2016ರಲ್ಲಿ 7,105, 2017ಕ್ಕೆ 7,712, 2018ಕ್ಕೆ 9,246 ಮತ್ತು 2019ಕ್ಕೆ 9,268 ಮಹಿಳೆಯರು ಕಾಣೆಯಾಗಿದ್ದಾರೆ. 2020ರಲ್ಲಿ, 8,290 ಮಹಿಳೆಯರು ಕಾಣೆಯಾಗಿದ್ದಾರೆ. ಒಟ್ಟು 41,621 ಮಹಿಳೆಯರು ಕಣ್ಮರೆಯಾಗಿದ್ದಾರೆ ಎಂದು ಎನ್ಸಿಆರ್ಬಿಯು ಬಿಡುಗಡೆ ಮಾಡಿರುವ ಅಂಕಿ-ಅಂಶ ತಿಳಿಸಿದೆ.
2021ರಲ್ಲಿ ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಎನ್ಸಿಆರ್ಬಿ ವರದಿಯಂತೆ ಕೇವಲ ಒಂದು ವರ್ಷದಲ್ಲಿ ಅಹಮದಾಬಾದ್ ಮತ್ತು ವಡೋದರಾದಲ್ಲಿ (2019-20) 4,722 ಮಹಿಳೆಯರು ನಾಪತ್ತೆಯಾಗಿದ್ದಾರೆ.
“ಕೆಲವು ನಾಪತ್ತೆ ಪ್ರಕರಣಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರನ್ನು ಸಾಂದರ್ಭಿಕವಾಗಿ ಗುಜರಾತ್ ಹೊರತುಪಡಿಸಿ ಇತರ ರಾಜ್ಯಗಳಿಗೆ ಕಳುಹಿಸಿ ವೇಶ್ಯಾವಾಟಿಕೆಗೆ ಬಲವಂತಪಡಿಸಲಾಗುತ್ತದೆ” ಎಂದು ಮಾಜಿ ಐಪಿಎಸ್ ಅಧಿಕಾರಿ ಮತ್ತು ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುಧೀರ್ ಸಿನ್ಹಾ ತಿಳಿಸಿದ್ದಾರೆ.
“ಎನ್ಸಿಆರ್ಬಿ ವರದಿಯಲ್ಲಿ ತಿಳಿಸಿರುವ ಕಾಣೆಯಾಗಿರುವ ವ್ಯಕ್ತಿಗಳ ಪ್ರಕರಣಗಳ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ. ಇವು ಕೊಲೆಗಿಂತ ಗಂಭೀರ ಪ್ರಕರಣಗಳು. ಮಗು ನಾಪತ್ತೆಯಾದಾಗ, ಪೋಷಕರು ತಮ್ಮ ಮಗುವಿಗಾಗಿ ವರ್ಷಗಳ ಕಾಲ ಕಾಯುತ್ತಾರೆ. ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣದಂತೆಯೇ ಕಟ್ಟುನಿಟ್ಟಾಗಿ ತನಿಖೆ ಮಾಡಬೇಕು” ಎಂದು ಅವರು ತಿಳಿಸಿದರು.
“ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಪೊಲೀಸರು ಆಗಾಗ್ಗೆ ನಿರ್ಲಕ್ಷಿಸುತ್ತಾರೆ. ಏಕೆಂದರೆ ಅವುಗಳನ್ನು ಬ್ರಿಟಿಷ್ ಕಾಲದ ರೀತಿಯಲ್ಲಿ ತನಿಖೆ ಮಾಡಲಾಗುತ್ತದೆ” ಎಂದು ಸುಧೀರ್ ಸಿನ್ಹಾ ಹೇಳಿದರು.
“ಹೆಣ್ಣುಮಕ್ಕಳು ಕಾಣೆಯಾಗಲು ಮಾನವ ಕಳ್ಳಸಾಗಣೆಯೇ ಕಾರಣ. ನನ್ನ ಅಧಿಕಾರಾವಧಿಯಲ್ಲಿ, ಕಾಣೆಯಾದ ಮಹಿಳೆಯರಲ್ಲಿ ಹೆಚ್ಚಿನವರು ಅಕ್ರಮ ಮಾನವ ಕಳ್ಳಸಾಗಣೆ ಗುಂಪುಗಳಿಂದ ಅವರನ್ನು ಬೇರೆ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡಿದವರಾಗಿದ್ದರು” ಎಂದು ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ ರಾಜನ್ ಪ್ರಿಯದರ್ಶಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಇಡಬ್ಲ್ಯುಎಸ್ ಮೀಸಲಾತಿ | ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ
“ಎನ್ಸಿಆರ್ಬಿ ವರದಿಯಲ್ಲಿ ಕಾಣೆಯಾದ ಮಹಿಳೆಯರ ಬಗ್ಗೆ ತಿಳಿಸಲಾಗಿದೆ. ನಾನು ಖೇಡಾ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕ (ಎಸ್ಪಿ) ಆಗಿದ್ದಾಗ ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಬಡ ಹುಡುಗಿಯನ್ನು ಅಪಹರಿಸಿ ತನ್ನ ಊರಿನಲ್ಲಿ ಮಾರಾಟ ಮಾಡಿದ್ದ. ನಾವು ಅವಳನ್ನು ರಕ್ಷಿಸಿದೆವು. ಆದರೆ ಬಹುತೇಕ ಇಂತಹ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ” ಎಂದು ಅವರು ಹೇಳಿದರು.
ಗುಜರಾತ್ ಕಾಂಗ್ರೆಸ್ನ ವಕ್ತಾರರಾದ ಹಿರೇನ್ ಬ್ಯಾಂಕರ್, “ಬಿಜೆಪಿ ನಾಯಕರು ಕೇರಳದಲ್ಲಿ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶದ ಪ್ರಧಾನಿ ಮತ್ತು ಗೃಹ ಸಚಿವರ ತವರು ರಾಜ್ಯವಾದ ಗುಜರಾತ್ನಲ್ಲಿ 40,000ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ” ಎಂದು ಲೇವಡಿ ಮಾಡಿದರು.