ರಾಜ್ಯದಲ್ಲಿ ಅವೈಜ್ಞಾನಿಕ ಜಾತಿಗಣತಿ(caste census) ನಡೆಸಲಾಗಿದ್ದು, ಜನಸಂಖ್ಯೆ ಆಧಾರದ ಮೇಲೆ ವೀರಶೈವ, ಲಿಂಗಾಯತ ಸಮಾಜದ ಬಲವನ್ನು ಕುಗ್ಗಿಸಿ ಸಮಾಜ ಒಡೆಯುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿ ವೀರಶೈವ ಹಾಗೂ ಲಿಂಗಾಯತ ಸಮಾಜದ ಮುಖಂಡರು ಸೋಮವಾರ ರಾಯಚೂರು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ಬೈಪಾಸ್ ರಸ್ತೆಯ ರೇಣುಕಾಚಾರ್ಯ ವೃತ್ತದ ಸಮೀಪದ ಹರ್ಷಿತಾ ಗಾರ್ಡನ್ ಬಳಿ ಮುಖಂಡರು ತಲೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನಾ ಸಭೆ ನಡೆಸಿದರು. ನಂತರ ನೂತನ ಜಿಲ್ಲಾಡಳಿತ ಕಚೇರಿವರೆಗೂ ಬ್ಯಾನರ್ ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜಿಲ್ಲೆಯ ಮಠಾಧೀಶರು, ಶಾಸಕರು ಹಾಗೂ ಸಮಾಜ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
“2015ರ ಕಾಂತರಾಜು ವರದಿಯ ದತ್ತಾಂಶವನ್ನು ಬದಲಾಯಿಸಿ 2024ರಲ್ಲಿ ಜಯಪ್ರಕಾಶ್ ಹೆಗಡೆ ಸರ್ಕಾರಕ್ಕೆ ನೀಡಿದ ಸಮೀಕ್ಷಾ ವರದಿಯನ್ನು ಅಂಗೀಕರಿಸಬಾರದು” ಎಂದು ಒತ್ತಾಯಿಸಿದರು.
“ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಹೆಸರಲ್ಲಿ 2015ರಲ್ಲಿ ಪ್ರಾರಂಭವಾದ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯು 51 ಮಾನದಂಡಗಳು ಮೇಲೆ ಕಾಲಂವಾರು 54 ಪ್ರಶ್ನಾವಳಿಗಳನ್ನು ಒಳಗೊಂಡ ಸಮೀಕ್ಷೆಯ ನಮೂನೆಯನ್ನು ಬಳಸಿಕೊಂಡು ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯು ನೈಜತೆಯಿಂದ ಕೂಡಿರದೆ ಜಾತಿ ಹಾಗೂ ಪ್ರವರ್ಗಕ್ಕೆ ಅದರಲ್ಲಿಯೂ ವಿಶೇಷವಾಗಿ ಉಪಜಾತಿಗಳ ವಿಂಗಡಣೆ ಮತ್ತು ಕ್ರೋಢೀಕರಣಕ್ಕೆ ಸೀಮಿತವಾದಂತೆ ಮಾಡಲಾಗಿದೆ” ಎಂದು ಆರೋಪಿಸಿದರು.
“ಪ್ರತಿ 10 ವರ್ಷಗಳ ಅವಧಿಯಲ್ಲಿ ಹಿಂದುಳಿದ ಜಾತಿ, ಸಮುದಾಯಗಳನ್ನು ಇಂತಹ ಪಟ್ಟಿಯಿಂದ ಕೈಬಿಡುವ ಅಥವಾ ಹೊಸದಾಗಿ ಸೇರಿಸುವ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಪರಿಷ್ಕರಣೆಯನ್ನು ಕೈಗೊಳ್ಳಬಹುದಾಗಿದೆ ಎಂದು ಕೆಎಸ್ಸಿಬಿಸಿ ಅಧಿನಿಯಮ 1995ರ ಪ್ರಕರಣ 2ರಲ್ಲಿ ಸ್ಪಷ್ಟಪಡಿಸಲಾಗಿದೆ. 10 ವರ್ಷಗಳಿಗೂ ಹಿಂದಿನ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರದ ಜಾತಿ ಗಣತಿ ವರದಿಯನ್ನು ಈಗ ಪರಿಗಣನೆಗೆ ತೆಗೆದುಕೊಳ್ಳುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಚಿನ್ನಪ್ಪರೆಡ್ಡಿ ಆಯೋಗದಲ್ಲಿ ವೀರಶೈವ ಸಮಾಜದ 61 ಉಪಪಂಗಡಗಳನ್ನು ಗುರುತಿಸಿದ್ದು, ಅದರಲ್ಲಿ ಶೇಕಡ 17ರಷ್ಟು ಜನಸಂಖ್ಯೆ ಇವೆ. ಶೇಕಡವಾರು 11ಕ್ಕೆ ಇಳಿದಿರುವುದು ಸಮೀಕ್ಷೆಯಲ್ಲಿರುವ ದೋಷವನ್ನು ತೋರಿಸುತ್ತದೆ” ಎಂದು ಅಸಮಾಧಾನ ಹೊರಹಾಕಿದರು.
“ವೀರಶೈವ, ಲಿಂಗಾಯತ ಉಪಪಂಗಡಗಳಿರುವ ಸುಮಾರು ಉಪಪಂಗಡಗಳ ಹೆಸರುಗಳು ಕೆಟಗರಿ 3ಬಿ, 2ಎ, ಕೆಟಗರಿ 1, 1ಎ ಮತ್ತು 1ಬಿನಲ್ಲಿ ಇವೆ. ಕೆಟಗರಿಯಲ್ಲಿರುವ ಸಮಾನರೂಪದ ಪಂಗಡಗಳಲ್ಲಿಯೂ ಕೂಡ ಏರಿಕೆಯಾಗಿರುವುದು ಕಂಡುಬಂದಿರುವುದಿಲ್ಲ” ಎಂದು ದೂರಿದರು.
ನಗರ ಶಾಸಕ ಡಾ. ಶಿವರಾಜ ಪಾಟೀಲ್ ಮಾತನಾಡಿ, “ಜಾತಿ ಗಣತಿ ಕೈ ಬಿಡದಿದ್ದರೆ ರಕ್ತಕ್ರಾಂತಿ ನಡೆಸಲು ಹಿಂಜರಿಯುವುದಿಲ್ಲ. ಇದು ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೃತ್ಯವಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ನಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ರ್ಯಾಲಿ
ಕಾಂಗ್ರೆಸ್ ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, “ಸಮಾಜದಿಂದ ನಾವು ವಿನಃ, ನಮ್ಮಿಂದ ಸಮಾಜವಲ್ಲ. ಈಗಾಗಲೇ ಸರ್ಕಾರಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ. ಸಮಯ ಬಂದರೆ ನಾವು ರಾಜಿನಾಮೆ ಕೊಡಲು ಸಿದ್ಧ” ಎಂದು ಎಚ್ಚರಿಸಿದರು.
ಶರಣಗೌಡ ಬಯ್ಯಾಪೂರ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರ, ವೀರಶೈವ ರುದ್ರಸೇನ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣರಡ್ಡಿ, ಮಠಾದೀಶರು ಹಾಗೂ ವೀರಶೈವ, ಲಿಂಗಾಯತ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.