- ಹುಲಿ ಉಗುರನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಗಳು
- ಕರ್ತವ್ಯಲೋಪ ಎಸಗಿದ್ದರಿಂದ ಅಮಾನತುಗೊಂಡ ಮೂವರು ಪೊಲೀಸ್ ಸಿಬ್ಬಂದಿ
ಮಾರತ್ತಹಳ್ಳಿಯಲ್ಲಿ ಹುಲಿ ಸುಲಿದು, ಉಗುರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಅಪರಾಧಿಗಳನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗದೆ, ಅವರನ್ನು ಬಿಟ್ಟು ಕಳುಹಿಸಲು ಲಕ್ಷ ಲಕ್ಷ ಹಣ ಕೇಳಿ ಸಿಕ್ಕಿಹಾಕಿಕೊಂಡು ಮೂವರು ಪೊಲೀಸರು ಅಮಾನತುಗೊಂಡಿದ್ದಾರೆ.
ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ರಾಮಾಂಜನೇಯ, ಜಾಕೀರ್ ಹುಸೇನ್ ಹಾಗೂ ಶಬ್ಬೀರ್ ಖಾನ್ ಇವರು ಹುಲಿ ಉಗುರನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಗಳು.
ಮಾರತ್ತಹಳ್ಳಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಂಗೇಶ್, ಹೆಡ್ ಕಾನ್ಸ್ಟೇಬಲ್ ಹರೀಶ್ ಕೆ.ಎಲ್ ಮತ್ತು ಕಾನ್ ಸ್ಟೇಬಲ್ ಮಹೇಶ್ ನಾಯಕ್ ಇವರು ಕರ್ತವ್ಯಲೋಪ ಎಸಗಿದ್ದರಿಂದ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.
“ಮೂವರು ಪೊಲೀಸರು ಅಪರಾಧಿಗಳನ್ನು ಬಂಧಿಸಿ, ಠಾಣೆಗೆ ಕರೆದುಕೊಂಡು ಹೋಗಿಲ್ಲ. ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿಲ್ಲ” ಎಂದು ಬಾಗಲೂರು ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದ್ದಾರೆ.
ಏನಿದು ಹಿನ್ನಲೆ?
ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿತ ಮೂವರು ಆರೋಪಿಗಳು ಹುಲಿ ಸುಲಿದು ಉಗುರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಈ ವೇಳೆ ಮಾರತ್ತಹಳ್ಳಿಯ ಮೂವರು ಪೊಲೀಸ್ ಸಿಬ್ಬಂದಿ ಅವರ ಮೇಲೆ ದಾಳಿ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬಂಧಿತ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗದೆ, ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಬಂಧಿತ ಆರೋಪಿಗಳ ಮೇಲೆ ಯಾವುದೇ ಎಫ್ಐಆರ್ ಕೂಡಾ ದಾಖಲಿಸಿಲ್ಲ.
ಸಬ್ಇನ್ಸ್ಪೆಕ್ಟರ್ ರಂಗೇಶ್ ನೇತೃತ್ವದ ತಂಡ ಆರೋಪಿಗಳ ಬಳಿ ಲಕ್ಷ ಲಕ್ಷ ಹಣ ನೀಡುವಂತೆ ಕೇಳಿದ್ದಾರೆ. ಆರೋಪಿ ರಾಮಾಂಜನೇಯ ಅವರ ಕುಟುಂಬದ ಸದಸ್ಯರಿಗೆ ಪೊಲೀಸರು ಕರೆ ಮಾಡಿ ₹45 ಲಕ್ಷ ಹಣ ನೀಡುವಂತೆ ಕೇಳಿದ್ದಾರೆ. ಹಣ ನೀಡದಿದ್ದರೆ ಜೈಲಿಗೆ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಆರೋಪಿ ರಾಮಾಂಜನೇಯ ಸಂಬಂಧಿಕ ಎಂ.ಬಿ.ಶಿವರಾಮಯ್ಯ ಅವರು ಮಂಗಳವಾರ ಬಾಗಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಮೊಬೈಲ್ ಟವರ್ ಮೂಲಕ ಸ್ಥಳ ಪತ್ತೆ ಮಾಡಿ, ರಾಮಾಂಜನೇಯ ಜತೆಗೆ ಇದ್ದವರನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಡಿಸಿಪಿ (ಈಶಾನ್ಯ) ಬಿ.ಎಂ ಲಕ್ಷ್ಮೀ ಪ್ರಸಾದ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಜರುಗಿಸಿ, ಅಮಾನತುಗೊಳಿಸಿದ್ದಾರೆ.