ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಕುಮಾರ್ ಕೊಲೆಯಾದ ದುರ್ದೈವಿ. ಮಾದೇಶ್ ಬಂಧಿತ ಆರೋಪಿ. ಇಬ್ಬರೂ ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದಾರೆ.
ರಾಜ್ಕುಮಾರ್ ಮತ್ತು ಮಾದೇಶ್ ಇಬ್ಬರೂ ಸ್ನೇಹಿತರು. ನ.5ರಂದು ಪಾರ್ಟಿ ಮಾಡಲು ಇಬ್ಬರು ಮದ್ಯದಂಗಡಿಗೆ ತೆರಳಿ ಮದ್ಯ ಖರೀದಿ ಮಾಡಿದ್ದಾರೆ. ಬಳಿಕ, ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದಾರೆ. ಮದ್ಯ ಸೇವನೆ ಮಾಡಿದ ಮೇಲೆ ಇಬ್ಬರು ಮಾತಾಡಲು ಆರಂಭಿಸಿದ್ದಾರೆ. ಈ ವೇಳೆ, ಮಾದೇಶ್ನ ಕುಟುಂಬ ಮತ್ತು ಮಕ್ಕಳ ಬಗ್ಗೆ ರಾಜ್ಕುಮಾರ್ ನಿಂದಿಸಿದ್ದಾನೆ. ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ರಾಜ್ಕುಮಾರ್ ಮೇಲೆ ಕೋಪಗೊಂಡ ಮಾದೇಶ್ ತನ್ನ ಕಾರಿನಲ್ಲಿದ್ದ ಚಾಕುವನ್ನು ತಂದು ರಾಜ್ಕುಮಾರ್ ಎದೆಯ ಭಾಗಕ್ಕೆ ಇರಿದಿದ್ದಾನೆ. ಇದರಿಂದ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ರಾಜ್ಕುಮಾರ್ನನ್ನು ಕಂಡು ಭಯಗೊಂಡು ತಾನೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾನೆ. ರಾಜ್ಕುಮಾರ್ ಸಂಬಂಧಿಕರಿಗೆ ಕರೆ ಮಾಡಿ ಅಪರಿಚಿತರು ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ರಿಯಾಯಿತಿ ದರದಲ್ಲಿ ನ.16 ರಿಂದ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಪರಿಚಯ
ಚಿಕಿತ್ಸೆ ಫಲಿಸದೇ ರಾಜ್ಕುಮಾರ್ ಮೃತನಾದ ಬಳಿಕ ವಿಷಯ ತಿಳಿದ ಮಾದೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಮಾದೇಶ್ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಕೊಲೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.