ಮಹಿಳೆಯೊಬ್ಬರಿಗೆ ದರ್ಶನ ಮನೆಯ ಸಾಕು ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ.15 ರಂದು ನಟ ದರ್ಶನ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು.
ಮಹಿಳೆ ಮೇಲೆ ದರ್ಶನ್ ಮನೆಯ ಸಾಕು ನಾಯಿ ದಾಳಿ ನಡೆಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ದರ್ಶನ ವಿರುದ್ಧವೂ ದೂರು ದಾಖಲಿಸಿದ್ದರು. ಮಹಿಳೆ ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 289ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಪೊಲೀಸರು ಸ್ಥಳ ಮಹಜರು ಕೂಡ ನಡೆಸಿದ್ದರು.
ಪ್ರಕರಣದ ಎ2 ಆರೋಪಿ ಆಗಿರುವ ದರ್ಶನ್ ಅವರಿಗೆ ಆರ್.ಆರ್.ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ನಟ ದರ್ಶನ್ ನ.15ರಂದು ತನಿಖಾಧಿಕಾರಿ ಇನ್ಸ್ಪೆಕ್ಟರ್ ಶಿವಕುಮಾರ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಕೇವಲ 15 ನಿಮಿಷದಲ್ಲಿ ಹೇಳಿಕೆ ನೀಡಿ ದರ್ಶನ್ ಅವರು ಠಾಣೆಯಿಂದ ಹೊರಬಂದರು. ಹೇಳಿಕೆ ಪ್ರತಿಗೆ ಸಹಿ ಹಾಕಿಸಿಕೊಂಡ ಇನ್ಸ್ಪೆಕ್ಟರ್ ವಿಚಾರಣೆ ಮುಗಿಸಿದರು.
ಆರ್.ಆರ್.ನಗರ ಠಾಣೆಯ ಬಳಿ ದರ್ಶನ್ ಅವರ ಹಲವಾರು ಅಭಿಮಾನಿಗಳು ನೆರೆದಿದ್ದರು. ದರ್ಶನ್ ಅವರು ಕಾರು ಇಳಿಯುತ್ತಿದ್ದಂತೆಯೇ ಅಭಿಮಾನಿಗಳು ಜೈಕಾರ ಕೂಗಿದರು.
ಏನಿದು ಪ್ರಕರಣ?
ಅಮಿತ ಜಿಂದಾಲ್ ಎನ್ನುವ ಮಹಿಳೆ ಕಾರ್ಯಕ್ರಮವೊಂದಕ್ಕೆ ರಾಜರಾಜೇಶ್ವರಿ ನಗರಕ್ಕೆ ಬಂದಿದ್ದರು. ಈ ವೇಳೆ ಅವರು ನಟ ದರ್ಶನ್ ಅವರ ಮನೆಯ ಬಳಿ ಕಾರು ಪಾರ್ಕಿಂಗ್ ಮಾಡಿದ್ದರು.
ಕಾರ್ಯಕ್ರಮ ಮುಗಿದ ನಂತರ ಕಾರು ತೆಗೆದುಕೊಳ್ಳಲು ಹೋದಾಗ ಅಲ್ಲಿ ದರ್ಶನ್ ಮನೆಯ ನಾಯಿಗಳಿದ್ದವು. ಎರಡು ನಾಯಿಗಳನ್ನು ಕಟ್ಟಿ ಹಾಕಲಾಗಿತ್ತು, ಒಂದು ನಾಯಿಯನ್ನು ಹಾಗೆಯೆ ಬಿಟ್ಟಿದ್ದರು ಎನ್ನಲಾಗಿದೆ. ಆ ನಾಯಿ ಅಮಿತ ಅವರ ಮೇಲೆ ಮೇಲೆ ದಾಳಿ ಮಾಡಿದೆ. ಅದನ್ನು ನೋಡಿದರೂ ದರ್ಶನ್ ಮನೆಯ ಸಿಬ್ಬಂದಿ ಸುಮ್ಮನಿದ್ದರು ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಅವರು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ದರ್ಶನ್ ಮನೆಯ ಸಿಬ್ಬಂದಿ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನ. 20 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಶಂಕರ್ನಾಗ್ ನಾಟಕೋತ್ಸವ’
ನಟ ದರ್ಶನ್ ಮನೆಯ ನಾಯಿ ಕಚ್ಚಿದ ಬಳಿಕ ಐಪಿಸಿ ಸೆಕ್ಷನ್ 289ರ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು.
ಇತ್ತೀಚೆಗೆ ನಟ ದರ್ಶನ್ ಅವರು ಹುಲಿ ಉಗುರು ಧರಿಸಿದ್ದ ಹಳೆಯ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಅರಣ್ಯಾಧಿಕಾರಿಗಳು ದರ್ಶನ್ ಅವರ ನಿವಾಸಕ್ಕೆ ತೆರಳಿ ತಪಾಸಣೆ ನಡೆಸಿದ್ದರು. ಈ ಘಟನೆ ಬಳಿಕ ಇದೀಗ ನಾಯಿ ಕಚ್ಚಿದ ಘಟನೆ ನಡೆದಿದೆ.