- ನೀರಿನ ಸೌಲಭ್ಯ ಒದಗಿಸುವುದರ ಜತೆಗೆ ರಸ್ತೆ ಮತ್ತು ಮೂಲಭೂತ ಸೌಕರ್ಯ ಒದಗಿಸಿ
- ತಿಂಗಳಿಗೆ ₹50,000 ವರೆಗೂ ಟ್ಯಾಂಕರ್ ನೀರಿಗಾಗಿ ಖರ್ಚಾಗುತ್ತಿರುವ ಹಣ
ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಕಳೆದ ಐದು ತಿಂಗಳಿನಿಂದ ದಿನನಿತ್ಯದ ಬಳಕೆಗೆ ಸರಿಯಾಗಿ ನೀರು ಪೂರೈಕೆಯಾಗದ ಹಿನ್ನೆಲೆ, ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ವೈಟ್ಫೀಲ್ಡ್ ಹತ್ತಿರವಿರುವ ರಾಮಗೊಂಡನಹಳ್ಳಿ, ಸಿದ್ದಾಪುರ ಮತ್ತು ತೂಬರಹಳ್ಳಿ ಗ್ರಾಮಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ಸಂಪರ್ಕವನ್ನು ಹೊಂದಿಲ್ಲ. ಹಾಗಾಗಿ, ನಿವಾಸಿಗಳು ಟ್ಯಾಂಕರ್ಗಳನ್ನು ಅವಲಂಬಿಸಿದ್ದು, ತಿಂಗಳಿಗೆ ₹10,000 ದಿಂದ ₹50,000 ವರೆಗೂ ಟ್ಯಾಂಕರ್ ನೀರಿಗಾಗಿ ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಮೊದಲು ತಿಂಗಳಿಗೆ ₹500 ರಿಂದ ₹600 ನೀಡುತ್ತಿದ್ದ ಅವರು ನೀರಿನ ಅವಶ್ಯಕತೆ ಹೆಚ್ಚಾದ ಹಿನ್ನೆಲೆ, ಟ್ಯಾಂಕರ್ ನೀರಿನ ಬೆಲೆಯೂ ಹೆಚ್ಚಾಗಿದೆ.
ಮಾಧ್ಯಮ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್ 7(1) R/w 9(3)(a) ಅಡಿಯಲ್ಲಿ ಉಪ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಗ್ರಾಮಕ್ಕೆ ನಿತ್ಯ ಕುಡಿಯುವ ನೀರು ಏಕೆ ಸರಬರಾಜು ಆಗುತ್ತಿಲ್ಲ ಎಂದು ವರದಿ ನೀಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ವರದಿ ನೀಡುವಂತೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಇಟಿ ಅಭ್ಯರ್ಥಿಗಳಿಗೆ ಆರ್ ಡಿ ಸಂಖ್ಯೆ ಸರಿಪಡಿಸಿಕೊಳ್ಳಿ ಎಂದ ಕೆಇಎ
“ಭಾರತದ ಸಂವಿಧಾನದ 21ನೇ ವಿಧಿಯಡಿಯಲ್ಲಿ ಜೀವಿಸುವ ಹಕ್ಕಿನ ಭಾಗವಾಗಿ ಉತ್ತಮ ಕುಡಿಯುವ ನೀರನ್ನು ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಜನರು ಶುದ್ಧ ಕುಡಿಯುವ ನೀರನ್ನು ಪಡೆಯುವ ಹಕ್ಕು ಮೂಲಭೂತ ಹಕ್ಕಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ರಾಜ್ಯದ ಕರ್ತವ್ಯವಾಗಿದೆ. ಹಾಗಾಗಿ, ರಾಮಗೊಂಡನಹಳ್ಳಿಗೆ ತಕ್ಷಣ ನೀರು ಸರಬರಾಜು ಮಾಡಬೇಕು” ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.
ನೀರಿನ ಸೌಲಭ್ಯ ಒದಗಿಸುವುದರ ಜತೆಗೆ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಸಕ್ತಿ ವಹಿಸಬೇಕು ಎಂದು ಬಿಬಿಎಂಪಿಯ ಇಬ್ಬರು ಕಂದಾಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚಿಸಿದ್ದಾರೆ.