ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳ ಬಿಡುಗಡೆ ರದ್ದುಗೊಳಿಸಿ, ಕೂಡಲೇ ಆರೋಪಿಗಳನ್ನು ಜೈಲಿಗೆ ಕಳುಹಿಸಲು ಆದೇಶಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಕರ್ನಾಟಕದಾದ್ಯಂತದ ಸ್ತ್ರೀವಾದಿ ಗುಂಪುಗಳು ಮತ್ತು ವ್ಯಕ್ತಿಗಳ ಜಾಲ ‘ನಾವೆದ್ದು ನಿಲ್ಲದಿದ್ದರೆ’ ಸ್ವಾಗತಿಸಿದೆ. ಸುಪ್ರೀಂ ಕೋರ್ಟ್ನ ತೀರ್ಪನ್ನು ಸ್ವಾಗತಿಸಿ ಆಚರಿಸಲು ಮತ್ತು ಬಿಲ್ಕಿಸ್ ಬಾನು ಅವರು ನ್ಯಾಯಕ್ಕಾಗಿ ಪಟ್ಟುಬಿಡದ ಹೋರಾಟದಲ್ಲಿ ತೋರಿದ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ವಂದಿಸಲು ಜನವರಿ 18ರಂದು ಸಂಜೆ 4 ರಿಂದ 6 ರವರೆಗೆ ಫ್ರೀಡಂ ಪಾರ್ಕ್ನಲ್ಲಿ ‘ಬಿಲ್ಕಿಸ್ ಬಾನು ಜೊತೆ ನಾವಿದ್ದೇವೆ’ ಎಂಬ ಕಾರ್ಯಕ್ರಮ ಆಯೋಜಿಸಿದೆ.
2002ರಲ್ಲಿ 5 ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಕುಟುಂಬಸ್ಥರನ್ನು ಬರ್ಬರವಾಗಿ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದ 11 ಮಂದಿ ಅಪರಾಧಿಗಳನ್ನು 2022ರ ಆಗಸ್ಟ್ 15ರಂದು ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ಗುಜರಾತ್ ಸರ್ಕಾರದ ನಡೆಯನ್ನು ಖಂಡಿಸಿ ದೇಶಾದ್ಯಂತ ಹಲವಾರು ಪ್ರಗತಿಪರ, ಸ್ತ್ರೀವಾದಿ ಸಂಘಟನೆಗಳು ಬೀದಿಗಳಿದು ಪ್ರತಿಭಟಿಸಿದ್ದರು. ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿ ‘ನಾವು ಎದ್ದು ನಿಲ್ಲದಿದ್ದರೆ ಕರ್ನಾಟಕ’ ಮತ್ತು ಕರ್ನಾಟಕ ಲೈಂಗಿಕ ದೌರ್ಜನ್ಯ ವಿರೋಧಿ ಆಂದೋಲನ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು. ರಾಜ್ಯಾದ್ಯಂತ ಸಂವಾದ ಅಭಿಯಾನವನ್ನು ನಡೆಸಿದ್ದವು. ಇದರ ಪರಿಣಾಮವಾಗಿ ಎಲ್ಲ ಜಾತಿ, ಮತ, ವರ್ಗದ 40,000 ಜನರು ಸಹಿ ಮಾಡಿ ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಬಹಿರಂಗ ಪತ್ರವನ್ನು ಕಳುಹಿಸಿದೆ.
ಬಿಲ್ಕೀಸ್ ಬಾನು ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ದೊರೆತಿದೆ. ಅಪರಾಧಿಗಳನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
“ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ಮತ್ತೆ ಜೈಲಿಗೆ ಕಳುಹಿಸುವಲ್ಲಿ ಬಿಲ್ಕಿಸ್ ಬಾನೋ ಅವರ ಹೋರಾಟ ಸ್ಪೂರ್ತಿದಾಯಕವಾಗಿದೆ. ಅವರ ಹೋರಾಟವು ಗುಜರಾತ್ ಸರ್ಕಾರವು ಉತ್ತೇಜಿಸುವ ದ್ವೇಷ ಮತ್ತು ವಿಭಜನೆಯ ರಾಜಕೀಯದ ವಿರುದ್ಧ ಸಾಮಾನ್ಯ ಜನರು ಮತ್ತು ಮಹಿಳೆಯರ ಒಗ್ಗಟ್ಟನ್ನು ದೃಢೀಕರಿಸುತ್ತದೆ” ಎಂದು ಸಂಘಟನೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣರಾಜ್ಯೋತ್ಸವಕ್ಕೆ ತಲೆ ಎತ್ತಲಿದೆ 215 ಅಡಿ ಎತ್ತರದ ಧ್ವಜಸ್ತಂಭ
“ಸುಪ್ರೀಂ ತೀರ್ಪು ಸಾಂವಿಧಾನಿಕ ತತ್ವಗಳನ್ನು ಬಲಪಡಿಸುವಲ್ಲಿ ಮತ್ತು ಅಧಿಕಾರದಲ್ಲಿರುವವರ ಹೊಣೆಗಾರಿಕೆಯನ್ನು ಖಾತ್ರಿಪಡಿಸುವಲ್ಲಿ ನ್ಯಾಯಾಂಗದ ಪಾತ್ರವನ್ನು ಎತ್ತಿಹಿಡಿಯುತ್ತದೆ. ಹಾಗೇಯೇ, ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದ ಸೌಜನ್ಯ ಮತ್ತು ಇತರ ಮಹಿಳೆಯರ ಪ್ರಕರಣಗಳಲ್ಲಿ ಇದೇ ರೀತಿಯ ಕ್ರಮವನ್ನು ನಾವು ಬಯಸುತ್ತೇವೆ” ಎಂದು ಹೇಳಿದೆ.