- ಮೇ 23ರಿಂದ ನೋಟ್ ಬದಲಾವಣೆಗಾಗಿ ಬ್ಯಾಂಕ್ಗಳತ್ತ ಮುಖ ಮಾಡಿದ ಜನ
- ಹೆಚ್ಚಿನ ಹಣ ಬದಲಾವಣೆಗಾಗಿ ಜನರು ಮಧ್ಯವರ್ತಿಗಳ ಮೊರೆ ಹೋದರೆ ಸಂಕಷ್ಟ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ₹2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಬ್ಯಾಂಕ್ಗಳಲ್ಲಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದನ್ನೇ ಕೆಲವು ವಂಚಕರು ಬಂಡವಾಳ ಮಾಡಿಕೊಂಡು ಹವಾಲಾ ದಂಧೆ ಮಾಡಬಹುದು ಎಂದು ಬೆಂಗಳೂರು ಪೊಲೀಸರು ಹಾಗೂ ಇಡಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
₹2,000 ಮುಖಬೆಲೆಯ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಆರ್ಬಿಐ ಸೂಚನೆ ಹೊರಡಿಸಿದೆ. ನೋಟು ಬದಲಾವಣೆಗಾಗಿ ಜನರು ಮೇ 23ರಿಂದ ಬ್ಯಾಂಕ್ಗಳತ್ತ ಮುಖ ಮಾಡಿದ್ದಾರೆ.
“ನೋಟು ಬದಲಾವಣೆಯ ಸಮಯವನ್ನು ಕೆಲವು ವಂಚಕರು ಬಳಸಿಕೊಂಡು ಹವಾಲಾ ದಂಧೆ ನಡೆಸುವ ಸಾಧ್ಯತೆ ಇದೆ. ಕೆಲವರು ಮಧ್ಯವರ್ತಿಗಳ ಹೆಸರಿನಲ್ಲಿ ಹೆಚ್ಚಿನ ಹಣ ಬದಲಾಯಿಸಿ ಕೊಡುವುದಾಗಿ ಹೇಳಿ ಮೋಸ ಮಾಡುವ ಸಾಧ್ಯತೆ ಇದೆ. ಹೆಚ್ಚಿನ ಕಮಿಷನ್ ಪಡೆದು ಹಣ ಬದಲಾಯಿಸುವ ಸಾಧ್ಯತೆ ಇದೆ” ಎಂದು ಪೊಲೀಸರು ಶಂಕಿಸಿದ್ದಾರೆ.
“ಕೆಲವು ಬ್ಯಾಂಕ್ಗಳಲ್ಲಿ ಮಾತ್ರ ಹಣ ಬದಲಾವಣೆ ಮಾಡಲು ಅವಕಾಶವಿದೆ. ಜನರು ಹೆಚ್ಚಿನ ಹಣ ಬದಲಾವಣೆಗಾಗಿ ಮಧ್ಯವರ್ತಿಗಳ ಮೊರೆ ಹೋದರೆ ಸಂಕಷ್ಟ ಎದುರಾಗಲಿದೆ” ಎಂದು ಇಡಿ ಅಧಿಕಾರಿಗಳು ಹವಾಲಾ ದಂಧೆ ಮೇಲೆ ಕಣ್ಣಿಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ: ಹವಾಮಾನ ಇಲಾಖೆ
“₹2,000 ಮುಖಬೆಲೆಯ ನೋಟುಗಳಲ್ಲಿರುವ ಕಪ್ಪು ಹಣ ಹವಾಲಾ ಆಗುವ ಸಾಧ್ಯತೆಯಿದೆ. ಹವಾಲಾ ಮಾಡಲು ಬಳಸುತ್ತಿದ್ದ ಹಣ ಇದೀಗ ಹೊರಗೆ ಬರುತ್ತದೆ. ಈಗ ಹೊರಗೆ ಬರುವ ಹಣಕ್ಕೆ ಯಾವುದೇ ದಾಖಲಾತಿ ಇರುವುದಿಲ್ಲ. ಹಾಗಾಗಿ ಇಂತಹ ಹಣ ಜಪ್ತಿಯಾಗಬೇಕು. ₹2,000 ಇದೀಗ ಸಣ್ಣ ಪ್ರಮಾಣದಲ್ಲಿ ಐದುನೂರು ನೋಟಾಗಿ ಬದಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ” ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
₹2000 ನೋಟ್ಗಳನ್ನು ಬ್ಯಾಂಕ್ಗೆ ಹಿಂತಿರುಗಿಸಿ
ಚಲಾವಣೆಯಲ್ಲಿರುವ ₹2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ರಿಸರ್ವ್ ಬ್ಯಾಂಕ್ ಮೇ 19ರಂದು ಆದೇಶ ಹೊರಡಿಸಿದ್ದು, ಮೇ 23 ರಿಂದ ಸೆಪ್ಟೆಂಬರ್ 30ರೊಳಗೆ ಈ ನೋಟುಗಳನ್ನು ಕಡಿಮೆ ಮುಖಬೆಲೆಯ ಇತರೆ ಕರೆನ್ಸಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಅದರಂತೆ ಮೇ 23ರಿಂದ ಎಲ್ಲ ಬ್ಯಾಂಕ್ ಶಾಖೆಗಳಲ್ಲಿ ₹2,000 ನೋಟುಗಳ ವಿನಿಮಯ ಆರಂಭವಾಗಿದೆ.