- 2020ರಲ್ಲಿ ಕೊರೊನಾ ಉಲ್ಬಣಗೊಂಡ ಕಾರಣ ಈ ಕಾರ್ಯ ಮಾಡಲಾಗಲಿಲ್ಲ
- ಸಾಂವಿಧಾನಿಕ ಮೌಲ್ಯಗಳ ಸವೆತದ ಬಗ್ಗೆ ಇದು ಜನರನ್ನು ಜಾಗೃತಗೊಳಿಸುತ್ತದೆ
ಸ್ವತಂತ್ರ ಭಾರತದಲ್ಲಿ ಪ್ರಜೆಗಳಿಗಾಗಿ ಸಂವಿಧಾನದಲ್ಲಿ ಕಲ್ಪಿಸಲಾದ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ನಾಗರಿಕರಿಗೆ ನೆನಪಿಸುವ ಪ್ರಯತ್ನವನ್ನು 38 ವರ್ಷದ ವಿನಯ್ ಕುಮಾರ್ ಮಾಡುತ್ತಿದ್ದಾರೆ. 23 ಮುದ್ರಿತ ಅಂಚೆ ಕಾರ್ಡ್ಗಳೊಂದಿಗೆ ರಿಕ್ಲೇಮ್ ಕಾನ್ಸಟಿಟ್ಯೂಷನ್ (#ReclaimConstitution – ಸಂವಿಧಾನ ಸ್ಮರಿಸೋಣ) ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ವಿನಯ್ ಕುಮಾರ್ ಅವರು ಬೆಂಗಳೂರಿನ ಏರೋಸ್ಪೇಸ್ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅವರು, 1940ರ ದಶಕದಲ್ಲಿ ನಡೆದ ಭಾರತದ ಸಂವಿಧಾನ ರಚನಾ ಸಭೆಗಳಲ್ಲಿನ ಚರ್ಚೆಗಳ ಆಯ್ದ ಭಾಗಗಳನ್ನು ಜನರಿಗೆ ತಿಳಿಸಲು ಪೋಸ್ಟ್ಕಾರ್ಡ್ಗಳನ್ನು ಬೆಂಗಳೂರಿನಲ್ಲಿ ವಿತರಿಸುತ್ತಿದ್ದಾರೆ.
ಈ ಹಿಂದೆ, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರೋಧಿ ಪ್ರತಿಭಟನೆಯ ನಂತರ ಕುಮಾರ್ ಅವರು ಈ ವಿನೂತನ ಅಭಿಯಾನ ಪ್ರಾರಂಭಿಸಲು ಬಯಸಿದ್ದರು. ಆದರೆ, 2020ರಲ್ಲಿ ಕೊರೊನಾ ಉಲ್ಬಣಗೊಂಡ ಕಾರಣದಿಂದ ಈ ಕಾರ್ಯವನ್ನು ಮಾಡಲಾಗಲಿಲ್ಲ. ಅಂತಿಮವಾಗಿ, 2023ರಲ್ಲಿ ಅಭಿಯಾನವನ್ನು ಕಾರ್ಯಗತಗೊಳಿಸಿದ್ದಾರೆ.
ವಿನಯ್ ಅವರು ಯಶವಂತಪುರದ ಸಂವಿಧಾನ ವೃತ್ತದ ಬಳಿ ಪೋಸ್ಟ್ಕಾರ್ಡ್ಗಳನ್ನು ವಿತರಿಸಿದ್ದಾರೆ. ಜತೆಗೆ ಸಂವಿಧಾನದ ಮುನ್ನುಡಿ ಓದುವ ಕಾರ್ಯಕ್ರಮವನ್ನು ನಡೆಸಿದ್ದಾರೆ. ಅಲ್ಲದೆ, ಚರ್ಚ್ ಸ್ಟ್ರೀಟ್ನಲ್ಲಿ ಅವರು ಪೋಸ್ಟ್ಕಾರ್ಡ್ಗಳನ್ನು ವಿತರಿಸಿದ್ದಾರೆ.
ಈ ವಿಶಿಷ್ಟ ಅಭಿಯಾನದಲ್ಲಿ ಅವರು, ಮದ್ರಾಸ್ ಹೈಕೋರ್ಟ್ ಮಧುರೈ ಪೀಠದಲ್ಲಿ ಇತ್ತೀಚೆಗೆ ನೇಮಕಗೊಂಡ ಹೆಚ್ಚುವರಿ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿಕ್ಟೋರಿಯಾ ಗೌರಿ ಅವರಿಗೆ ಪೋಸ್ಟ್ಕಾರ್ಡ್ಗಳನ್ನು ಕಳುಹಿಸಿದ್ದಾರೆ.
ನ್ಯಾಯಮೂರ್ತಿ ಗೌರಿ ಅವರಿಗೆ ಕಳುಹಿಸಲಾದ ಪೋಸ್ಟ್ಕಾರ್ಡ್ಗಳು 6 ಡಿಸೆಂಬರ್ 1948 ರಂದು ಆರ್ಟಿಕಲ್ 25 (ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮದ ಪ್ರಚಾರ) ಕುರಿತು ಸಂವಿಧಾನ ಸಭೆಯ ಚರ್ಚೆಯಲ್ಲಿ ಟಿಟಿ ಕೃಷ್ಣಮಾಚಾರಿ ಮಾಡಿದ ಭಾಷಣದ ಆಯ್ದ ಭಾಗವನ್ನು ಒಳಗೊಂಡಿದೆ.
“ಇಂದು ನಾವು ನೋಡುತ್ತಿರುವ ಸಾಂವಿಧಾನಿಕ ಮೌಲ್ಯಗಳ ಸವೆತದ ಬಗ್ಗೆ ಇದು ಜನರನ್ನು ಜಾಗೃತಗೊಳಿಸುತ್ತದೆ ಎಂಬ ಭರವಸೆ ಇದೆ. ಇಂದಿನ ಪರಿಸ್ಥಿತಿಯು ನಾವು ಪ್ರತಿಯೊಬ್ಬ ಭಾರತೀಯರನ್ನು ಹಿಂದಿನದನ್ನು ಮರುಪರಿಶೀಲಿಸಲು, ಸಂವಿಧಾನವನ್ನು ಮರುಪಡೆಯಲು ಕೇಳುತ್ತದೆ. ನಾವು ಮೌನವಾಗಿರಲು ಆರಿಸಿದರೆ ನಾವು ಯಾವ ನಿಜವಾದ ಶ್ರೇಷ್ಠ ಗಣರಾಜ್ಯವನ್ನು ಕಳೆದುಕೊಳ್ಳುತ್ತೇವೆ ಎಂಬುದನ್ನು ಅರಿತುಕೊಳ್ಳಬೇಕು” ಎಂದು ಕುಮಾರ್ ಹೇಳಿದರು.