- ಇಂದಿರಾ ಕ್ಯಾಂಟೀನ್ಗಳಲ್ಲಿ ರಾತ್ರಿ ವೇಳೆ ಊಟಕ್ಕೆ ಜನ ಕಡಿಮೆ
- ಮಾರ್ಷಲ್ಗಳು ನೀಡುವ ಆಧಾರದ ಮೇಲೆ ಮೊತ್ತ ಪಾವತಿ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಹಾತ್ವಾಕಾಂಕ್ಷೆ ಯೋಜನೆ ‘ಇಂದಿರಾ ಕ್ಯಾಂಟೀನ್’ 2013ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿತ್ತು. ಬಡ ಜನರಿಗೆ ಕಡಿಮೆ ದರದಲ್ಲಿ ಊಟ ನೀಡುವ ಈ ಕ್ಯಾಂಟೀನ್ ಬಿಜೆಪಿ ಆಡಳಿತದಲ್ಲಿ ಮಲತಾಯಿ ಧೋರಣೆಗೆ ಒಳಪಟ್ಟಿತ್ತು. ಇದೀಗ ಕ್ಯಾಂಟೀನ್ ಅನ್ನು ಪುನಾರಂಭಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ಯಾರ್ಪುರ ಮಾತನಾಡಿ, “ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭ ಮಾಡುವ ಬಗ್ಗೆ ಸೂಚನೆ ನೀಡಿದೆ. ಈ ಹಿಂದೆ, 10 ಮೊಬೈಲ್ ಕ್ಯಾಂಟೀನ್ಗಳು ಬಂದ್ ಆಗಿದ್ದು, ಉಳಿದ ಇಂದಿರಾ ಕ್ಯಾಂಟೀನ್ಗಳಲ್ಲಿ ರಾತ್ರಿ ವೇಳೆ ಊಟಕ್ಕೆ ಜನ ಕಡಿಮೆ ಇದ್ದಾರೆ. ಈಗ, ಬಿಬಿಎಂಪಿಯ ವ್ಯಾಪ್ತಿಯ 243 ವಾರ್ಡ್ಗಳಲ್ಲಿ ಕ್ಯಾಂಟೀನ್ ಆರಂಭಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ₹2,000 ನೋಟು ವಾಪಸ್; ಹವಾಲಾ ದಂಧೆ ಹೆಚ್ಚುವ ಬಗ್ಗೆ ಪೊಲೀಸರ ಶಂಕೆ
“ಈಗಾಗಲೇ ಇಂದಿರಾ ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕ್ಯಾಂಟೀನ್ ಅಡುಗೆ ಕೋಣೆಯಲ್ಲಿರುವ ವಸ್ತುಗಳನ್ನು ಬದಲಾಯಿಸಬೇಕು. ಕ್ಯಾಂಟೀನ್ ಉಪಾಹಾರ ಬೆಲೆಯನ್ನು ₹5 ರಿಂದ ₹10 ರವರೆಗೆ ಏರಿಕೆ ಮಾಡಲಾಗುವುದು. ಗುತ್ತಿಗೆದಾರರಿಗೆ ಇನ್ನೂ ಹಳೆಯ ಬಾಕಿ ಪಾವತಿಯಾಗಿಲ್ಲ. ಒಂದು ತಿಂಗಳ ಒಳಗಾಗಿ ಗುತ್ತಿಗೆದಾರರಿಗೆ ಪೆಮೇಂಟ್ ಮಾಡಲಾಗುವುದು. ಮಾರ್ಷಲ್ಗಳು ನೀಡುವ ಆಧಾರದ ಮೇಲೆ ಮೊತ್ತ ಪಾವತಿ ಮಾಡಿದ್ದೇವೆ” ಎಂದರು.