- ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ ಮೇಲೆ ಹಲ್ಲೆ
- ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ ನರೇಶ
ಕ್ಷುಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶುಕ್ರವಾರ ಆರೋಪಿ ಮಾರಿಮುತ್ತು ಮತ್ತು ನರೇಶ ಎಂಬ ಸ್ನೇಹಿತರು ಮದ್ಯ ಸೇವಿಸಲು ಬಾರ್ಗೆ ಹೋಗಿದ್ದರು. ಇಬ್ಬರು ಕುಡಿದ ಮತ್ತಿನಲ್ಲಿದ್ದರು.
ಈ ವೇಳೆ, ನರೇಶ್ ನಿನ್ನ ಭವಿಷ್ಯ ಹೇಳುತ್ತೀನಿ ಎಂದು ‘ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ’ ಎಂದು ಆರೋಪಿಯನ್ನು ರೇಗಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಮಾರಿಮುತ್ತು ಆತನೊಂದಿಗೆ ಜಗಳ ಮಾಡಿದ್ದಾನೆ. ಇಬ್ಬರೂ ಜಗಳವಾಡುತ್ತಲೇ ಬಾರ್ನಿಂದ ಹೊರಬಂದಿದ್ದಾರೆ. ಇಬ್ಬರ ನಡುವೆ ಹೊಡೆದಾಟವಾಗಿದೆ.
ಈ ಸಮಯದಲ್ಲಿ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ಆರೋಪಿ ಮಾರಿಮುತ್ತು ಬಲವಾಗಿ ನರೇಶ್ ತಲೆಗೆ ಹೊಡೆದಿದ್ದಾನೆ. ರಕ್ತಸ್ರಾವವಾಗಿ ನರೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.