ಹೆಣ್ಣುಮಕ್ಕಳ ವಿರುದ್ಧದ ಅಪರಾಧಗಳ ವಿಚಾರ ಬಂದಾಗ ಎಲ್ಲ ಸರ್ಕಾರಗಳೂ ‘ಶೂನ್ಯ ಸಹಿಷ್ಣುತೆ’ಯ ಹುಸಿ ಪ್ರತಾಪವನ್ನು ಪ್ರದರ್ಶಿಸುತ್ತವೆ. ಆದರೆ ಕ್ರಮ ಜರುಗಿಸುವ ಹೊತ್ತು ಬಂದಾಗ ಮಹಿಳಾದ್ರೋಹದ ಮೌನ ಧರಿಸುತ್ತವೆ.
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿ, ಆತ ದೇಶದಿಂದ ಪರಾರಿಯಾಗಿ ತಿಂಗಳಾಗುತ್ತಿದೆ. ಎಸ್ ಐಟಿ ರಚನೆಯಾದ ದಿನದಿಂದಲೇ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದರು. ಆದರೆ, ಆರೋಪಿ ವಿಚಾರಣೆಗೆ ಹಾಜರಾಗದಿರುವ ಕಾರಣ ತನಿಖೆ ಆಮೆಗತಿಯಲ್ಲಿ ಸಾಗುವಂತಾಗಿದೆ.
ಆರೋಪಿ ಪ್ರಜ್ವಲ್ ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿದ ಮರುದಿನ, ಏ. 27ನೇ ತಾರೀಖಿಗೆ ಜರ್ಮನಿಗೆ ತೆರಳಿದ್ದಾನೆ ಎಂದು ಹೇಳಲಾಗಿದೆ. ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶಬೇಕು ಎಂದು ವಕೀಲರ ಮೂಲಕ ಕೇಳಿದ್ದ. ಆದರೆ, ಆ ನಂತರ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಶಾಸಕ ಎಚ್ ಡಿ ರೇವಣ್ಣ ಅವರನ್ನು ಬಂಧಿಸಿ ವಾರದ ನಂತರ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಆರೋಪಿ ಪ್ರಜ್ವಲ್ ಇನ್ನೂ ಎಸ್ಐಟಿ ಮುಂದೆ ಹಾಜರಾಗಿಲ್ಲ.
ವಿದೇಶದಲ್ಲಿರುವ ಆರೋಪಿಯೊಬ್ಬನನ್ನು ದೇಶಕ್ಕೆ ಕರೆತರಲು ರಾಜ್ಯ ಸರ್ಕಾರ ಅಥವಾ ರಾಜ್ಯ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಮೊರೆ ಹೋಗಲೇ ಬೇಕು. ಅವರ ಸಹಕಾರ ಬೇಕೇಬೇಕು. ಅದು ಒಕ್ಕೂಟ ಸರ್ಕಾರದ ಕರ್ತವ್ಯ. ಆದರೆ ದೇಶವೇ ಕಂಡು ಕೇಳರಿಯದಷ್ಟು ಸಂಖ್ಯೆಯ ಮಹಿಳೆಯರಿಗೆ ಅಸಹಜ ಲೈಂಗಿಕ ಕಿರುಕುಳ, ಅತ್ಯಾಚಾರದ ಆರೋಪ ಎದುರಿಸುತ್ತಿರುವ ಸಂಸದನನ್ನು ಕರೆ ತರುವ ನಿಟ್ಟಿನಲ್ಲಿ ಮೋದಿ ಸರ್ಕಾರದ ನಿರ್ಲಕ್ಷ್ಯ ಏಕೆ ?
ಸಿ ಎಂ ಸಿದ್ದರಾಮಯ್ಯ ಅವರು ಆತನ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ರದ್ದುಪಡಿಸುವಂತೆ ಎರಡು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ದೇಶಕ್ಕೆ ಕಳಂಕ ತಂದ ಸಂಸದನನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಮೋದಿ ಸರ್ಕಾರದ ಕಣ್ಣಾಮುಚ್ಚಾಲೆ ಆಡುತ್ತಿರುವುದು ಬಹಿರಂಗ ಸತ್ಯ. ಹೀಗೆ ಮಾಡಿ ಮೈತ್ರಿ ಪಕ್ಷದ ಮಾನ ಕಾಪಾಡುವುದು ಸಾಧ್ಯವೇ?

ಇಂಟರ್ ಪೋಲ್ ಜೊತೆ ವ್ಯವಹರಿಸಬಹುದಾದ ನಮ್ಮ ದೇಶದ ತನಿಖಾ ಏಜೆನ್ಸಿ ಸಿಬಿಐ. ಇಂಟರ್ ಪೋಲ್ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಬಹುಮುಖ್ಯ ಅಪರಾಧ ಸಂಬಂಧಿ ಮಾಹಿತಿಯನ್ನು ಸದಸ್ಯ ರಾಷ್ಟ್ರಗಳ ಜೊತೆ ಹಂಚಿಕೊಳ್ಳುವ ಸಲುವಾಗಿ ಇಂಟರ್ ಪೋಲ್ ನೋಟಿಸ್ ಗಳನ್ನು ಹೊರಡಿಸಲಾಗುತ್ತದೆ. ವಿಶ್ವದ ಯಾವುದೇ ದೇಶದಲ್ಲಿ ತಲೆಮರೆಸಿಕೊಂಡ ಪಾತಕಿಗಳ ಪತ್ತೆಗೆ ಅಂತಾರಾಷ್ಟ್ರೀಯ ಸಹಕಾರ ಪಡೆಯುವ ವ್ಯವಸ್ಥೆಯಿದು. ನೀಲಿ, ಕೆಂಪು, ಹಳದಿ, ಕಪ್ಪು, ಹಸಿರು, ಕಿತ್ತಳೆ ಹಾಗೂ ನೇರಳೆ ನೋಟಿಸ್ಗಳನ್ನು ಇಂಟರ್ ಪೋಲ್ ಹೊರಡಿಸುತ್ತದೆ.
ಪ್ರಜ್ವಲ್ ಪ್ರಕರಣದಲ್ಲಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ವ್ಯಕ್ತಿ ತಲೆಮರೆಸಿಕೊಂಡಿರುವ ಸ್ಥಳ, ಗುರುತು ಹಾಗೂ ಇತರೆ ಚಟುವಟಿಕೆಗಳ ಪತ್ತೆಗೆ ಸೀಮಿತ ಬ್ಲೂ ಕಾರ್ನರ್ ನೋಟಿಸ್. ವ್ಯಕ್ತಿಯ ಬಂಧಿಸಬೇಕಿದ್ದರೆ ರೆಡ್ ಕಾರ್ನರ್ ನೋಟಿಸನ್ನು ಹೊರಡಿಸಬೇಕು. ಹಾಗೆ ಹೊರಡಿಸಿ ಎಂದು ಭಾರತ ಇಂಟರ್ ಪೋಲನ್ನು ಕೋರಬೇಕು. ಈವರೆಗೆ ಬ್ಲೂ ಕಾರ್ನರ್ ನೋಟಿಸ್ನಿಂದ ಯಾವುದೇ ಉಪಯೋಗ ಆಗಿಲ್ಲ. ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕಿದ್ದರೆ ನ್ಯಾಯಾಲಯದ ಆದೇಶ ಬೇಕು ಎನ್ನುತ್ತದೆ ಭಾರತದ ವಿದೇಶಾಂಗ ಮಂತ್ರಾಲಯ.
ಎಸ್.ಐ.ಟಿ. ಕೋರಿಕೆ ಮೇರೆಗೆ ನ್ಯಾಯಾಲಯ ಇದೇ ತಿಂಗಳ 19ರಂದು ‘ಕೋರ್ಟ್ ವಾರಂಟ್‘ ನೀಡಿದೆ. ರೆಡ್ ಕಾರ್ನರ್ ನೋಟಿಸ್ ಹೊರಟಿರುವ ಕುರಿತು ಇನ್ನೂ ಅಧಿಕೃತ ಮಾಹಿತಿ ಇಲ್ಲ. ಕೋರ್ಟ್ ವಾರಂಟ್ ಆಧಾರದ ಮೇಲೆ ಆರೋಪಿಯ ಪಾಸ್ಪೋರ್ಟ್ ರದ್ದು ಮಾಡಬಹುದು. ಆದರೂ ಮೋದಿ ಸರ್ಕಾರ ಪ್ರಜ್ವಲ್ ನ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟನ್ನು ರದ್ದು ಮಾಡದೆ ಕುಳಿತಿರುವುದು ಖಂಡನೀಯ. ತನಗೆ ರಾಜಕೀಯವಾಗಿ ಅತ್ಯಗತ್ಯ ಎನಿಸಿದ ಅತ್ಯಾಚಾರಿಗಳನ್ನು ಬಿಜೆಪಿ ರಕ್ಷಿಸಿಕೊಂಡು ಬಂದಿರುವುದು ಇದೇನೂ ಹೊಸತಲ್ಲ. ಹೇರಳ ಉದಾಹರಣೆಗಳಿವೆ.
ಹೆಣ್ಣುಮಕ್ಕಳ ವಿರುದ್ಧದ ಅಪರಾಧಗಳ ವಿಚಾರ ಬಂದಾಗ ಎಲ್ಲ ಸರ್ಕಾರಗಳೂ ‘ಶೂನ್ಯ ಸಹಿಷ್ಣುತೆ‘ಯ ಹುಸಿ ಪ್ರತಾಪವನ್ನು ಪ್ರದರ್ಶಿಸುತ್ತವೆ. ಆದರೆ ಕ್ರಮ ಜರುಗಿಸುವ ಹೊತ್ತು ಬಂದಾಗ ಮಹಿಳಾದ್ರೋಹದ ಮೌನ ಧರಿಸುತ್ತವೆ.
ಮೋದಿ ಆಡಳಿತದಲ್ಲಿ ಆರ್ಥಿಕ ಅಪರಾಧಗಳು ವಂಚನೆ ಎಸಗಿ ವಿದೇಶಗಳಲ್ಲಿ ಈಗಲೂ ತಲೆ ಮರೆಸಿಕೊಂಡ ಹಲವು ತಿಮಿಂಗಿಲಗಳಿವೆ. ಇವು ಆಯಾ ದೇಶಗಳ ನ್ಯಾಯಾಲಯಗಳ ಮೊರೆ ಹೋಗಿ ಕಾಲಹರಣದ ಕುಟಿಲ ತಂತ್ರ ಬಳಸಿವೆ. ಪ್ರಜ್ವಲ್ ಕೂಡ ಇದೇ ದಾರಿ ಬಳಸಿದರೂ ಆಶ್ಚರ್ಯವಿಲ್ಲ.
ರಾಜತಾಂತ್ರಿಕ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣುಚಿಕೊಂಡರೆ ಇತ್ತ ರಾಜ್ಯ ಸರ್ಕಾರ ನೈತಿಕ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿದ ನಂತರವೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ ಯಾರೊಬ್ಬರೂ ಹಾಸನದತ್ತ ಸುಳಿದಿಲ್ಲ. ಸರ್ಕಾರದ ಪ್ರತಿನಿಧಿಗಳು ಸಂತ್ರಸ್ತರಿಗೆ ಅಥವಾ ಸಂಸದನ ಕಾಮವಾಂಛೆಯ ಬಲಿಪಶು ಮಹಿಳೆಯರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಹಾಸನಕ್ಕೆ ತೆರಳಿ ಜಿಲ್ಲಾಧಿಕಾರಿ, ಎಸ್ಪಿ ಜೊತೆಗೆ ನಾಗರಿಕರ ಸಭೆ ಕರೆದು ಸಂತ್ರಸ್ತರ ರಕ್ಷಣೆಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡದಿರುವುದು ಅಕ್ಷಮ್ಯ.
