ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿರುವ ಶಿವರಾಜ್ ಕುಮಾರ್
ಇತ್ತೀಚೆಗೆ ಕೈ ಪಾಳಯ ಸೇರಿರುವ ಶಿವರಾಜ್ ಕುಮಾರ್ ಪತ್ನಿ ಗೀತಾ
ನಟ ಶಿವರಾಜ್ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿರುವ ತಮ್ಮ ಆಪ್ತರ ಪರವಾಗಿ ಚುನಾವಣಾ ಪ್ರಚಾರ ನಡೆಸುವುದಾಗಿ ಇತ್ತೀಚೆಗೆ ತಿಳಿಸಿದ್ದರು. ಈಗಾಗಲೇ ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವ ಅವರು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಬಾಳೇಬೈಲು ಸಮೀಪದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಪ್ರಮುಖ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದು, ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರ ಪರ ಮತ ಯಾಚಿಸಿದ್ದಾರೆ.
ತಮ್ಮ ಪತ್ನಿ ಗೀತಾ ಜೊತೆಗೆ ವೇದಿಕೆಗೆ ಬಂದ ಶಿವರಾಜ್ ಕುಮಾರ್ ಅವರನ್ನು ಮಧು ಬಂಗಾರಪ್ಪನವರು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದ್ದಾರೆ. ಶಿವರಾಜ್ ಕುಮಾರ್ ನೋಡುತ್ತಲೇ ಅಪ್ಪಿಕೊಂಡ ರಾಹುಲ್ ಕುಶಲೋಪರಿ ವಿಚಾರಿಸಿದ್ದಾರೆ.
ಇದಾದ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಶಿವಣ್ಣ, “ಇವತ್ತು ನಾನು ಕೂಡ ನಿಮ್ಮ ಹಾಗೆ ಒಬ್ಬ ಅಭಿಮಾನಿಯಾಗಿ ರಾಹುಲ್ ಗಾಂಧಿ ಅವರನ್ನು ನೋಡಬೇಕು ಎಂಬ ಆಸೆಯಿಂದ ಬಂದಿದ್ದೀನಿ. ಇತ್ತೀಚೆಗೆ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯನ್ನು ನೋಡಿ ನಾನು ಕೂಡ ಸ್ಫೂರ್ತಿಗೊಂಡೆ. ಆ ಯಾತ್ರೆ ಬಹಳ ಖುಷಿ ನೀಡಿತ್ತು. ನನಗೆ ʼಫಿಟ್ನೆಸ್ʼ ಎಂದರೆ ತುಂಬಾ ಇಷ್ಟ. ಅವರು ʼಫಿಟ್ನೆಸ್ʼ ಜೊತೆಗೆ ಒಂದೊಳ್ಳೆಯ ಉದ್ದೇಶವನ್ನಿಟ್ಟುಕೊಂಡು ಇಡೀ ಭಾರತದುದ್ದಕ್ಕೂ ನಡೆದುಕೊಂಡು ಹೋಗಿದ್ದು ಉತ್ತೇಜನಕಾರಿಯಾಗಿತ್ತು” ಎಂದಿದ್ದಾರೆ.
“ನಾನೊಬ್ಬ ನಟ ನನಗೆ ರಾಜಕೀಯ ಗೊತ್ತಿಲ್ಲ. ನಮ್ಮ ಮಾವ ಬಂಗಾರಪ್ಪನವರು ರಾಜಕೀಯದಲ್ಲಿದ್ದರು. ಅವರ ಮಗ ಮಧು ಕೂಡ ರಾಜಕಾರಣದಲ್ಲಿದ್ದಾರೆ. ಗೀತಾ ಅವರು ಈ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್ ಸೇರಿದ್ದಾರೆ. ನಾನು ಗೀತಾ ಅವರಿಗೆ ಬೆಂಬಲವಾಗಿರುತ್ತೇನೆ. ಯಾರು ಒಳ್ಳೆಯದನ್ನು ಮಾಡುತ್ತಾರೆ, ಯಾರನ್ನು ಆಯ್ಕೆ ಮಾಡಬೇಕು ಎಂಬುದು ಜನರಿಗೆ ಗೊತ್ತಿದೆ. ಈ ಎಲ್ಲ ಅಭ್ಯರ್ಥಿಗಳು ಜಯಭೇರಿ ಬಾರಿಸುವಂತೆ ಆಶೀರ್ವಾದ ಮಾಡಿ” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.