- ಪೊಲೀಸ್ ಬ್ಯಾರಿಕೇಡ್ಗಳ ಮೇಲೆ ಸುದೀಪ್ ಚಿತ್ರ
- ನೀತಿ ಸಂಹಿತೆ ಮುಗಿಯುವವರೆ ನಿಗಾ ವಹಿಸುವಂತೆ ಮನವಿ
ಬಿಜೆಪಿ ಪರ ಪ್ರಚಾರಕ್ಕೆ ಮುಂದಾಗಿರುವ ನಟ ಕಿಚ್ಚ ಸುದೀಪ್ ಅವರ ಜಾಹೀರಾತು ಮತ್ತು ಸಿನಿಮಾಗಳಿಗೆ ತಡೆ ಹಿಡಿಯುವಂತೆ ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೇವಾಲ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲ್ಲೇ ಬಿಜೆಪಿ ಸುದೀಪ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಿಕೊಂಡಿತ್ತು. ಅದಾದ ಬಳಿಕ ಅನೇಕರು ಆಯೋಗಕ್ಕೆ ಪತ್ರ ಬರೆದು, ಸುದೀಪ್ ನಟನೆಯ ಜಾಹೀರಾತು ಮತ್ತು ಸಿನಿಮಾಗಳಿಗೆ ತಡೆ ನೀಡುವಂತೆ ಒತ್ತಾಯಿಸಿದ್ದರು. ಇದೀಗ, ಸುರ್ಜೇವಾಲ ಕೂಡ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಬಿಜೆಪಿ ಪರ ಪ್ರಚಾರಕ್ಕೆ ಸುದೀಪ್ ಮುಂದಾಗಿದ್ದಾರೆ. ಈ ನಡುವೆ ಸರ್ಕಾರಿ ಜಾಗಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಅವರ ನಟನೆಯ ಜಾಹೀರಾತುಗಳು ರಾರಾಜಿಸುತ್ತಿವೆ. ಇದನ್ನು ಉಲ್ಲೇಖಿಸಿ, ಸುರ್ಜೇವಾಲ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ನೀತಿ ಸಂಹಿತೆ ಮುಗಿಯುವವರೆಗೆ ಸುದೀಪ್ ಅವರ ಸಿನಿಮಾಗಳ ಬಿಡುಗಡೆಯನ್ನು ಮುಂದೂಡುವಂತೆ ಅಧಿಕಾರಿಗಳಿಗೆ ಸುರ್ಜೇವಾಲ ಒತ್ತಾಯಿಸಿದ್ದಾರೆ. “ಪೊಲೀಸ್ ಬ್ಯಾರಿಕೇಡ್ ಸೇರಿದಂತೆ ಸರ್ಕಾರದ ಒಡೆತನದ ಕೆಲವು ಸಲಕರಣೆಗಳ ಮೇಲೆ ಬಿಜೆಪಿಯ ಸ್ಟಾರ್ ಪ್ರಚಾರಕ ಸುದೀಪ್ ನಟನೆಯ ಜಾಹೀರಾತುಗಳ ಚಿತ್ರಗಳು ಕಾಣಿಸುತ್ತಿವೆ. ಇದು ಪ್ರಚಾರದ ವಿಷಯಕ್ಕೆ ಸಂಬಂಧಿಸಿದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ನಮ್ಮ ಕಾರ್ಯಕರ್ತರು ಹಂಚಿಕೊಂಡ ವರದಿಗಳು ಮತ್ತು ಛಾಯಾಚಿತ್ರಗಳ ಪ್ರಕಾರ, ಏಪ್ರಿಲ್ 14ನೇ ತಾರೀಕಿನಂದು ಬೆಂಗಳೂರಿನ ಮೇಖ್ರಿ ವೃತ್ತದಲ್ಲಿರುವ ಪೊಲೀಸ್ ಬ್ಯಾರಿಕೇಡ್ನ ಮೇಲೆ ಸುದೀಪ್ ಭಾವಚಿತ್ರ ಇರುವ ಜಾಹೀರಾತಿದೆ” ಎಂದು ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ದೇಣಿಗೆ ಹಣದಲ್ಲೇ ಠೇವಣಿ ಇಡಿ : ಕಾರ್ಯಕರ್ತರ ಒತ್ತಾಯ, ಭಾವುಕರಾದ ಪರಮೇಶ್ವರ್
“ಸುದೀಪ್ ಅವರ ಸೆಲೆಬ್ರಿಟಿ ಸ್ಥಾನಮಾನದ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇದೊಂದು ಸಮಸ್ಯೆಯಲ್ಲದಿದ್ದರೂ, ಸುದೀಪ್ ಸ್ಪಷ್ಟವಾಗಿ ಬಿಜೆಪಿಯ ಮುಖವಾಗಿದ್ದಾರೆ. ಆದ್ದರಿಂದ ಅವರ ಚಲನಚಿತ್ರಗಳ ಬಿಡುಗಡೆ ಮುಂದೂಡಬೇಕು. ಜಾಹೀರಾತು ತಡೆ ಹಿಡಿಯಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.
“ನೀತಿ ಸಂಹಿತೆಯ ನಿಯಮಗಳ ಅನ್ವಯ, ಸುದೀಪ್ ಅವರ ವಾಣಿಜ್ಯ ಪ್ರಚಾರದ ಲಾಭವನ್ನು ಚುನಾವಣೆ ಮುಗಿಯುವವರೆಗೆ ಮಾತ್ರ ಬಳಸದಂತೆ ತಡೆಯಬೇಕು. ಇಲ್ಲವಾದಲ್ಲಿ ಇದು ಬಿಜೆಪಿಗೆ ಲಾಭ ನೀಡುತ್ತದೆ” ಎಂದಿದ್ದಾರೆ..
“ಕರ್ನಾಟಕ ಸರ್ಕಾರಕ್ಕೆ ಸೇರಿದ ಯಾವುದೇ ಉಪಕರಣಗಳು, ತಡೆಗೋಡೆ, ಹೋರ್ಡಿಂಗ್ನಲ್ಲಿ ಸುದೀಪ್ ಅವರ ಪ್ರಚಾರದ ವಿಷಯ, ಜಾಹೀರಾತು ಇತ್ಯಾದಿಗಳನ್ನು ತೆಗೆದುಹಾಕಲು ರಾಜ್ಯ ಅಧಿಕಾರಿಗಳಿಗೆ ತುರ್ತು ಮತ್ತು ತಕ್ಷಣದ ನಿರ್ದೇಶನಗಳನ್ನು ರವಾನಿಸಬೇಕು” ಎಂದು ಸುರ್ಜೇವಾಲ ಮನವಿ ಮಾಡಿದ್ದಾರೆ.