- ಈ ಬಾರಿ ಅಚ್ಚರಿಯ ಫಲಿತಾಂಶವನ್ನು ಬಿಜೆಪಿ ನೀಡಲಿದೆ
- ಏಪ್ರಿಲ್ 8ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ
ಪಕ್ಷಾಂತರಿಗಳು ಹಾಗೂ ಬಂಡಾಯದ ಅಭ್ಯರ್ಥಿಗಳಿಂದ ಬಿಜೆಪಿ ಗೆ ನಷ್ಟವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ಮೂರು ದಿನಗಳ ಬೆಳವಣಿಗೆ ಗಮನಿಸಿದರೆ ಕೆಲವು ಕ್ಷೇತ್ರದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದರು.
ಏ .8ಕ್ಕೆ ಪಟ್ಟಿ ಬಿಡುಗಡೆ
ವಾಸ್ತವಾಂಶ ಆಧರಿಸಿ ಅಭ್ಯರ್ಥಿ ಆಯ್ಕೆಯಾಗಿದೆ. ಇಂದು ರಾಜ್ಯ ಸಮಿತಿಯ ಸಭೆ ಕರೆಯಲಾಗಿದೆ. ಎರಡು ದಿನಗಳ ಸಭೆ ಬಳಿಕ ಈ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಲಾಗುವುದು. 8ರ ಸಭೆ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಬಂಡಾಯಕ್ಕೆ ತಲೆ ಕೆಡಿಸಿಕೊಳ್ಳಲ್ಲ
ಆಯನೂರು ಮಂಜುನಾಥ್ ಅವರ ಬಂಡಾಯ ಹಾಗೂ ಶಾಸಕರು ಪಕ್ಷಾಂತರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಈಗ ನಮ್ಮಲ್ಲಿ 125 ಶಾಸಕರಿದ್ದಾರೆ. ಅದರಲ್ಲಿ ಕೆಲವು ಕಡೆ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ಅಲ್ಲಿ ಸ್ಥಾನ ದೊರೆಯುವುದಿಲ್ಲ ಎಂದು ಕೆಲವರು ಬಿಟ್ಟು ಹೋಗಿದ್ದಾರೆ ಅಷ್ಟೆ. ಇದರಿಂದ ಬಿಜೆಪಿ ಹಾಗೂ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿಯಿಂದ ಮತ್ತೆ ಯಾರು ಹೋಗುವುದಿಲ್ಲ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ತಲೆ ಬಿಸಿ; ಅಭ್ಯರ್ಥಿಗಳ ಪಟ್ಟಿ ಶಿಫಾರಸಿಗೆ ಇನ್ನಿಲ್ಲದ ಕಸರತ್ತು
ಸಿದ್ದರಾಮಯ್ಯ ಸಿಎಂ ಆಗುವ ವಿಚಾರದಲ್ಲಿ ನೀಡಿದ್ದ ಹೇಳಿಕೆಗೆ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕರೇನೋ ಅವರ ಆಸೆ ಹೇಳಿಕೊಂಡಿದ್ದಾರೆ. ಆದರೆ ಜನರ ನಾಡಿಮಿಡಿತ ಏನಿದೆಯೋ ಯಾರಿಗೆ ಗೊತ್ತು? ಫಲಿತಾಂಶ ಬಂದ ಮೇಲೆ ಜನರ ಅಭಿಮತ ತಿಳಿಯಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಮುಂದುವರೆದು ಮಾತನಾಡಿದ ಅವರು, ಸಿದ್ದರಾಯಮಯ್ಯ ಹೇಳಿರುವುದು ಆ ಪಕ್ಷದೊಳಗಿನ ಆಂತರಿಕ ವಿದ್ಯಮಾನಗಳ ಪ್ರತಿಬಿಂಬ. ಏಕೆಂದರೆ ಹೋದಲ್ಲೆಲ್ಲ ಡಿಕೆಶಿ ನಾನೇ ಸಿಎಂ ನನಗೆ ಆಶೀರ್ವಾದ ಮಾಡಿ ಎನ್ನುತ್ತಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ನಾನೇ ಸಿಎಂ ಹೇಳುತ್ತಾರೆ.
ಆದರೆ ಜನರ ಮನಸ್ಸಿನಲ್ಲಿ ಇವರಿಬ್ಬರೂ ಇಲ್ಲ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.