- ಬಿಜೆಪಿಯ 19 ಮಂದಿ ಗೂಂಡಾ ಕಾರ್ಯಕರ್ತರ ಬಂಧನ
- ಬಂಧಿತರ ಬ್ಯಾಗ್ಗಳಲ್ಲಿ ಚಾಕು, ಮಾರಕಾಸ್ತ್ರಗಳು ಪತ್ತೆ
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಡಾ. ಅನಿಲ್ ಕುಮಾರ್ ಮನೆಗೆ ನುಗ್ಗಿ ರಾಜಕೀಯ ದುರುದ್ದೇಶದಿಂದ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಾಗೇಪಲ್ಲಿ ಪೊಲೀಸ್ ಠಾಣೆ ಎದುರು ಸಿಪಿಐಎಂ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿ ಬಿಜೆಪಿ ಗೂಂಡಾ ಕಾರ್ಯಕರ್ತರನ್ನು ಪೋಲಿಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ಮಾಡಲು ಬಂದಿದ್ದವರ ಬ್ಯಾಗುಗಳಲ್ಲಿ ಚಾಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಿಲ್ ಕುಮಾರ್ ಅವರು ಚುನಾವಣೆ ಪ್ರಚಾರ ಮುಗಿಸಿಕೊಂಡು ರಾತ್ರಿ ಬರುವಾಗ ಮನೆಗೆ ನುಗ್ಗಿ ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು 19 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಸಿಪಿಐಎಂ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಎಂ ಪಿ ಮುನಿವೆಂಕಟಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ 8 ಗಂಟೆ ಸಮಯದಲ್ಲಿ ನಮ್ಮ ಪಕ್ಷದ ಡಾ. ಅನಿಲ್ ಕುಮಾರ್ ಮತಯಾಚನೆ ಮುಗಿಸಿಕೊಂಡು ಮನೆಗೆ ಹಿಂತಿರುಗಿದಾಗ ಕ್ರಿಮಿನಲ್ ಗ್ಯಾಂಗ್ ದಾಳಿ ನಡೆಸಿದೆ.
ಅ ಗುಂಪು ಸಿಪಿಐಎಂ ಅಭ್ಯರ್ಥಿಯನ್ನು ಕೊಲೆ ಮಾಡಲು ಬಂದಿದ್ದೇವೆ ಎಂದು ಹೇಳುವುದು. ಜೊತೆಗೆ ಅಪಹರಣ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದ ಅಭ್ಯರ್ಥಿಗೆ ದಿನೇದಿನೆ ಜನರ ಬೆಂಬಲ ಹೆಚ್ಚಾಗುತ್ತಿದೆ. ಇದನ್ನು ಸಹಿಕೊಳ್ಳಲಾಗದೆ ಅವರನ್ನು ಕೊಲೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಆರೋಪಿಗಳ ಬ್ಯಾಗ್ಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಹಾಗಾಗಿ ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಣಿಕಂಠ ರಾಠೋಡ ವಿರುದ್ಧ ನಾಳೆ ‘ಡಿಜಿ’ಗೆ ದೂರು; ಪ್ರಿಯಾಂಕ್ ಖರ್ಗೆ
ಈ ಗುಂಪಿನ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಬಂಧಿತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಸಿಪಿಐಎಂ ಪಕ್ಷದ ಅಭ್ಯರ್ಥಿಗೆ ಸೂಕ್ತ ರಕ್ಷಣೆ ನೀಡಬೇಕು. ಜೊಗೆ ಶಾಂತಿಯುತವಾಗಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕ್ಷೇತ್ರದ ಬಗ್ಗೆ ವಿಶೇಷ ಗಮನ ನೀಗಬೇಕು. ಯಾರೂ ದೌರ್ಜನ್ಯ ನಡೆಸಲು ಅವಕಾಶ ನೀಡಬಾರದು. ಅಲ್ಲದೆ ಕ್ಷೇತ್ರದಲ್ಲಿ ಈ ರೀತಿ ಅನುಮಾನಸ್ಪದವಾಗಿ ಓಡಾಡುತ್ತಿರುವವರನ್ನು ವಶಕ್ಕೆ ಪಡೆಯಬೇಕು ಎಂದರು.
ಸಿಪಿಐಎಂ ಅಭ್ಯರ್ಥಿ ಮನೆ ಮೇಲೆ ನಡೆಸಿರುವ ದಾಳಿ ಇಡೀ ಕ್ಷೇತ್ರದ ಮತದಾರರಲ್ಲಿ ಭಯ ಹುಟ್ಟುವಂತೆ ಮಾಡಿದೆ. ಜನರ ನಡುವೆ ಮುಕ್ತವಾಗಿ ಬೆರೆತು ಪ್ರಚಾರ ಮಾಡುವ ವೇಳೆ ಪ್ರಾಣಕ್ಕೆ ಅಪತ್ತು ಉಂಟಾಗುವ ಸಾಧ್ಯತೆ ಇದ್ದು, ಚುನಾವಣಾ ಆಯೋಗ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.