- ಇದೇ ಪ್ರಕರಣ ಬಿಜೆಪಿಯವರಿಗೆ ಆಗಿದ್ದರೆ ಸ್ವಯಂ ದೂರು ದಾಖಲಾಗುತ್ತಿತ್ತು
- ಬಿಜೆಪಿ ಅಭ್ಯರ್ಥಿ ಅಷ್ಟೊಂದು ಜಾಣನಲ್ಲ; ಬಿಜೆಪಿ, ಆರ್ ಎಸ್ ಎಸ್ ಇದರ ಕಿಂಗ್ ಪಿನ್
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ಕಾನೂನು ಘಟಕದೊಂದಿಗೆ ಚರ್ಚಿಸಿ ಮಣಿಕಂಠ ರಾಠೋಡ ವಿರುದ್ಧ ಕಾಂಗ್ರೆಸ್ ನಾಳೆ ಡಿಜಿ ಅವರಿಗೆ ದೂರು ನೀಡಲಿದೆ ಎಂದು ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಖರ್ಗೆ ಮತ್ತು ಕುಟುಂಬವನ್ನು ಸಾಫ್ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಟೇಪ್ ಬಹಿರಂಗವಾಗಿದ್ದು, ಈ ಕುರಿತು ಈಗಾಗಲೇ ಸಂಘಟನೆ ಕಡೆಯಿಂದ ಒಂದು ದೂರು ದಾಖಲಾಗಿದೆ” ಎಂದು ತಿಳಿಸಿದರು.
“ಬಿಜೆಪಿ ಸೋಲುವ ಭೀತಿ ಎದುರಿಸುತ್ತಿದ್ದು, ಮೋದಿ ಅವರಿಂದ ಹಾಗೂ ಬೊಮ್ಮಾಯಿ ಅವರ ದುರಾಡಳಿತದಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ತಂತ್ರಗಳನ್ನು ಮಾಡುತ್ತದೆ” ಎಂದು ಆರೋಪಿಸಿದರು.
“ಇದೇ ಪ್ರಕರಣ ಬಿಜೆಪಿಯವರಿಗೆ ಆಗಿದ್ದರೆ ಇಷ್ಟೊತ್ತಿಗೆ ಸ್ವಯಂ ದೂರು ದಾಖಲಾಗುತ್ತಿತ್ತು. ಆದರೆ, ಇಲ್ಲಿ ಕೊನೆ ಪಕ್ಷ ಅಪರಿಚಿತರ ಮೇಲಾದರೂ ದೂರು ದಾಖಲಾಗಬೇಕಿತ್ತು ಅದೂ ಆಗಿಲ್ಲ. ಖರ್ಗೆ ಹಾಗೂ ಕುಟುಂಬವನ್ನು ಯಾಕೆ ಸಾಯಿಸಬೇಕು? ಎನ್ನುವುದಕ್ಕೆ ಬಿಜೆಪಿಗರು ಉತ್ತರ ಹೇಳಬೇಕು. ಇಎಸ್ಐ ಆಸ್ಪತ್ರೆ, ಕೇಂದ್ರಿಯ ವಿದ್ಯಾಲಯ ತಂದಿದ್ದಕ್ಕೆ ಸಾಯಿಸಬೇಕಾ” ಎಂದು ಪ್ರೆಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸುಳ್ಳು ಆರೋಪ ಮಾಡಲು ಯಾರದ್ದೋ ಆಡಿಯೊ ಹಾಕಬೇಡಿ : ಮಣಿಕಂಠ ರಾಠೋಡ
“ಪಾಪ, ಬಿಜೆಪಿ ಅಭ್ಯರ್ಥಿ ಅಷ್ಟೊಂದು ಜಾಣನಲ್ಲ ಅವನು ಇನ್ನೂ ಅಕ್ಕಿ ಪಕ್ಕಿ ಲೆವೆಲ್ ನಲ್ಲಿಯೇ ಇದ್ದಾನೆ. ಇದರ ಹಿಂದಿನ ಕಿಂಗ್ ಪಿನ್ ಬಿಜೆಪಿ ಹಾಗೂ ಆರ್ ಎಸ್ ಎಸ್. ಅದರ ಉಸ್ತುವಾರಿಯನ್ನು ರವಿಕುಮಾರ್ಗೆ ವಹಿಸಲಾಗಿದೆ. ಪಾಪ ತಾನೇ ಅಭ್ಯರ್ಥಿ ಅಂದುಕೊಂಡ ರವಿಕುಮಾರ ಎಲ್ಲ ಕಡೆ ಓಡಾಡಿ ಸುಸ್ತಾಗಿದ್ದಾರೆ. ಅವರು ಜೇವರ್ಗಿ ಮತ್ತು ಚಿತ್ತಾಪುರದಲ್ಲಿ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಬಿಜೆಪಿಗರೇ ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲು ಅದಕ್ಕೆ ಉತ್ತರಿಸಲಿ” ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಶಾಸಕರು ಉಪಸ್ಥಿತರಿದ್ದರು.