- ಅಹಿಂದ ಲೀಡರ್ ಎದುರೇ ಸ್ಪರ್ಧೆಗೆ ನಿಂತ ಬಿಎಸ್ಪಿ-ಜೆಡಿಎಸ್ ದಲಿತ ಅಭ್ಯರ್ಥಿಗಳು
- ಸಿದ್ದರಾಮಯ್ಯ ಮತಬ್ಯಾಂಕ್ ಒಡೆಯಲು ಮಾಸ್ಟರ್ ಪ್ಲಾನ್ ರೂಪಿಸಿದ ಬಿಜೆಪಿ
ವರುಣ ವಿಧಾನಸಭಾ ಕ್ಷೇತ್ರ ಅಚ್ಚರಿ ರಾಜಕೀಯ ನಡೆಯೊಂದಕ್ಕೆ ಸಾಕ್ಷಿಯಾಗಿದೆ. ಮಾಜಿ ಸಿಎಂ ಕ್ಷೇತ್ರದಲ್ಲಿ ಬಹುಜನ ಸಮಾಜ ಪಾರ್ಟಿ ತನ್ನ ಉಮೇದುವಾರಿಕೆ ಸಲ್ಲಿಸಿ ಸಿದ್ದರಾಮಯ್ಯ ಎದುರು ದಲಿತ ದಾಳ ಉರುಳಿಸಿದೆ.
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಏಪ್ರಿಲ್ 20ರಂದು ಸಿದ್ದರಾಮಯ್ಯ ಎದುರು ಸ್ಪರ್ಧಿಸಲು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಡಾ ಎಂ ಕೃಷ್ಣಮೂರ್ತಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಡಾ ಎಂ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿರುವುದು ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಸಹಾಯ ಮಾಡಲು ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಇದು ಸ್ಥಳೀಯ ದಲಿತ ಸಮುದಾಯದ ಮೇಲೆ ರಾಜಕೀಯ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಕ್ಷೇತ್ರದ ಮತದಾರರ ಚಿತ್ರಣ ನೋಡುವುದಾದರೆ, ಇಲ್ಲಿ 43 ಸಾವಿರಕ್ಕೂ ಅಧಿಕ ದಲಿತ ಮತದಾರರಿದ್ದಾರೆ. ಉಳಿದಂತೆ 55,000 ಲಿಂಗಾಯತ, 35,000 ಕುರುಬರು, 23,000 ಪರಿಶಿಷ್ಟ ಪಂಗಡ, 12,000 ಒಕ್ಕಲಿಗರು ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದ 12,000 ಮತದಾರರಿದ್ದಾರೆ.
ಕಳೆದ ಮೂರು ಚುನಾವಣೆಗಳಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಬಹುಜನ ಸಮಾಜ ಪಕ್ಷ ಈ ಬಾರಿ ರಾಜ್ಯಾಧ್ಯಕ್ಷರನ್ನೇ ಕಣಕ್ಕಿಳಿಸಿರುವುದರಿಂದ ದಲಿತ ಮತಗಳು ಚದುರಿ ಹೋಗಲಿವೆ ಎನ್ನುವುದು ಸಿದ್ದರಾಮಯ್ಯ ಅಭಿಮಾನಿಗಳ ಆತಂಕ.
ಮತ್ತೊಂದೆಡೆ ಬಹುಜನ ಸಮಾಜ ಪಕ್ಷ ಮಾದರಿಯಲ್ಲೇ ಜೆಡಿಎಸ್ ಕೂಡ ಟಿ ನರಸೀಪುರದ ಮಾಜಿ ಶಾಸಕ ಭಾರತೀ ಶಂಕರ್ ಅವರನ್ನು ಇಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.
ಬಿಎಸ್ಪಿ -ಜೆಡಿಎಸ್ ನಿಂದ ಒಂದೇ ಸಮುದಾಯದ ಅಭ್ಯರ್ಥಿಗಳ ಅಖಾಡಕ್ಕಿಳಿದಿರುವುದು ಸಿದ್ದರಾಮಯ್ಯ ಪಾಲಿಕೆ ಕೊಂಚ ಹಿನ್ನಡೆ ತಂದರೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪಾಲಿಗೆ ಹಾದಿಯನ್ನು ಸುಗಮವಾಗಿಸಿಕೊಟ್ಟಂತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈದಿನ.ಕಾಮ್ನೊಂದಿಗೆ ಮಾತನಾಡಿದ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಡಾ ಎಂ ಕೃಷ್ಣಮೂರ್ತಿ, ನಾನು ಇಲ್ಲಿ ಸ್ಪರ್ಧೆ ಮಾಡುತ್ತಿರುವುದು ನಮ್ಮ ರಾಜ್ಯ ಸಮಿತಿ ನಿರ್ಧಾರದ ಮೇಲೆ. ನಾನು ಮಳವಳ್ಳಿಯಲ್ಲೂ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ಪ್ರಮುಖರು ಎಲ್ಲಿ ಹೇಳುತ್ತಾರೋ ಅಲ್ಲಿ ಕಣಕ್ಕಿಳಿಯುತ್ತೇವೆ. ನಮಗೆ ಯಾರೂ ಎದುರಾಳಿಗಳಲ್ಲ, ಗೆಲುವೊಂದೇ ನಮ್ಮ ಮಾನದಂಡ.
ಯಾರ ವೋಟನ್ನೂ ಒಡೆಯುವ ಅವಶ್ಯಕತೆ ಇಲ್ಲ, ನಮ್ಮ ಪಕ್ಷ ನಮ್ಮ ಸಿದ್ಧಾಂತ ಆಧಾರಿತ ಮತಗಳು ನಮ್ಮ ಕೈಹಿಡಿಯಲಿವೆ. ಹೀಗಾಗಿ ಈ ವಿಚಾರದಲ್ಲಿ ಬರುವ ಟೀಕೆಗಳತ್ತ ಗಮನ ಕೊಡುವುದಿಲ್ಲ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಸಂಸದ ಪ್ರತಾಪ್ ಸಿಂಹಗೆ `ಮಂಗಳಾರತಿ’ ಮಾಡಿದ ವರುಣ ಮತದಾರರು
ಇವೆಲ್ಲದರ ನಡುವೆ ಮೈಸೂರು ಭಾಗದ ಪ್ರಭಾವಿ ದಲಿತ ಮುಖಂಡ, ಕಾಂಗ್ರೆಸ್ ನಾಯಕ ಎಚ್ ಸಿ ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಜೋಡಿ ಕಟ್ಟಿಹಾಕಲು ಬಿಜೆಪಿ, ಬಹುಜನ ಸಮಾಜ ಪಾರ್ಟಿ – ಜಾತ್ಯತೀತ ಜನತಾದಳದ ಜೊತೆ ಒಳಒಪ್ಪಂದ ಮಾಡಿಕೊಂಡು ಈ ದಾಳ ಉರುಳಿಸಿದೆ ಎನ್ನಲಾಗುತ್ತಿದೆ.
ಈ ಹಿಂದೆ ಸಿದ್ದರಾಮಯ್ಯನವರೂ ವರುಣದಲ್ಲಿ ಬಿಜೆಪಿ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎನ್ನುವ ಮಾಹಿತಿ ನೀಡಿ ಸೂಕ್ತ ಸಮಯದಲ್ಲಿ ಇದನ್ನು ಬಹಿರಂಗ ಮಾಡುವುದಾಗಿ ಹೇಳಿದ್ದರು. ಈ ಮಾತಿಗೀಗ ಬಿಎಸ್ಪಿ – ಜೆಡಿಎಸ್ ಜೋಡಿ ನಾಮಪತ್ರ ಸಲ್ಲಿಸಿರುವುದು ಸಾಕ್ಷಿಯಾಗಿದೆ.