ದಲಿತರನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಕೇಳಿದ್ದ ವ್ಯಕ್ತಿಯೂ ದಲಿತರೇ ಆಗಿದ್ದಾರೆ. ದಲಿತರು ವಾಸಿಸುವ ಪ್ರದೇಶವು ಪ್ರಬಲ ಜಾತಿಗರ ಮನೆಗಳಿಂದ ಸುತ್ತುವರಿದ್ದು, ತಮ್ಮ ಸಾಕು ಪ್ರಾಣಿಗಳು ಪ್ರಬಲ ಜಾತಿಗರ ನಿವಾಸದೆಡೆಗೆ ಹೋದರೆ ಜಗಳಾಗುತ್ತವೆ ಎಂಬ ಉದ್ದೇಶದಿಂದ ಸ್ಥಳಾಂತರದ ಬಗ್ಗೆ ಕೇಳಿದ್ದಾರೆಂದು ತಿಳಿದುಬಂದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಕುಪ್ಪಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಚಂದನ್ ಗೌಡಗೆ ಗ್ರಾಮಸ್ಥರೊಬ್ಬರು ದಲಿತರನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಹೇಳಿದ್ದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಮಾಜ ಕಲ್ಯಾಣ ಇಲಾಖೆಯಲ್ಲಿಯೂ ದೂರು ದಾಖಲಾಗಿತ್ತು.
ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಇಲಾಖೆಯ ಅಧಿಕಾರಿಗಳು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಸ್ಥಳಾಂತರದ ಬಗ್ಗೆ ಕೇಳಿದ ವ್ಯಕ್ತಿಯೂ ಪರಿಶಿಷ್ಟ ಜಾತಿಯ ಅದಿ ಕರ್ನಾಟಕ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಗ್ರಾಮದಲ್ಲಿ 12 ದಲಿತ ಕುಟುಂಬಗಳು ವಾಸಿಸುತ್ತಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಯಾವುದೇ ತೊಂದರೆ ಇಲ್ಲ” ಎಂದು ಹೇಳಿದ್ದಾರೆ.
“ಸ್ಥಳಾಂತರದ ಕುರಿತು ಮಾತನಾಡಿದವರು ಆದಿ ಕರ್ನಾಟಕ ಜನಾಂಗಕ್ಕೆ ಸೇರಿರುವುದರಿಂದ ಈ ಪ್ರಕರಣವು ದಲಿತ ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ” ಎಂದೂ ಇಲಾಖೆ ಹೇಳಿದ್ದಾರೆ.
ಗ್ರಾಮಕ್ಕೆ ಕರ್ನಾಟಕ ಭೀಮ ಸೇನೆಯ ಮುಖಂಡರೂ ಭೇಟಿ ನೀಡಿದ್ದು, ತಮ್ಮನ್ನು ಸ್ಥಳಾಂತರಿಸುವಂತೆ ಕೇಳಿದ್ದ ವ್ಯಕ್ತಿಯೊಂದಿಗೆ ಚರ್ಚೆ ನಡೆಸಿದ್ದಾರೆ. “ಗ್ರಾಮದಲ್ಲಿ ಸಹೋದರಂತೆ ವಾಸಿಸುತ್ತಿದ್ದಾರೆ. ಆದರೆ, ಪಕ್ಷೇತರ ಅಭ್ಯರ್ಥಿ ಚಂದನ್ ಗೌಡ ತಮ್ಮ ಪ್ರಚಾರಕ್ಕಾಗಿ ‘ಪ್ರಬಲ ಜಾತಿಯ ವ್ಯಕ್ತಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ’ ಎಂಬಂತೆ ತಿರುಚಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.