- ಸಂವಿಧಾನ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ಕೆಟ್ಟ ಸರ್ಕಾರ ತೆಗೆಯಬೇಕು
- ಎಂ ವೈ ಪಾಟೀಲರು ಸೋತರೆ ನನಗೂ ಮತ್ತು ನನ್ನ ಪಕ್ಷಕ್ಕೂ ಅವಮಾನ
ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ಕೆಟ್ಟ ಸರ್ಕಾರವನ್ನು ತೆಗೆದು ಹಾಕಬೇಕು. ಸುಖ, ಸಮೃದ್ಧಿ ಹಾಗೂ ನೆಮ್ಮದಿ ನಮ್ಮ ರಾಜ್ಯದಲ್ಲಿ ಬರಬೇಕಾದರೆ ಬಿಜೆಪಿ ವಿರುದ್ಧ ಹೋರಾಡಲೇ ಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಅಫಜಲಪುರ ಸಾರ್ವಜನಿಕ ಸಭೆಯಲ್ಲಿ ಶುಕ್ರವಾರ ಮಾತನಾಡಿ, “ಈ ಭ್ರಷ್ಟ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಹೀಗಾಗಿ ಈ ಕ್ಷೇತ್ರದಲ್ಲಿ ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಎಂ ವೈ ಪಾಟೀಲ್ರನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
“ಕಳೆದ ಚುನಾವಣೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಕೆಲ ಜನ ಅಪ್ರಪಚಾರ ಮಾಡಿ, ನನ್ನನ್ನು ಸೋಲಿಸಿದರು. ಆ ಬಗ್ಗೆ ನನಗೇ ಯಾವುದೇ ನೋವಿಲ್ಲ. ಎಂ ವೈ ಪಾಟೀಲರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು. ಒಂದು ವೇಳೆ ಅವರನ್ನು ಸೋಲಿಸಿದ್ದಲ್ಲಿ ನನಗೂ ಮತ್ತು ನನ್ನ ಪಕ್ಷಕ್ಕೂ ಅವಮಾನ. ನನ್ನ ಹೆಸರಿನ ಮೇಲೆ ರಾಜಕೀಯ ಮಾಡಕ್ಕೆ ಹೋಗಬೇಡಿ. ನೂರಕ್ಕೂ ನೂರು ಎಂ ವೈ ಪಾಟೀಲರನ್ನು ಗೆಲ್ಲಿಸಿ” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
“ಈ ಬಿಜೆಪಿ ಸರ್ಕಾರ ಜನ ಕಷ್ಟದಲ್ಲಿದ್ದಾಗ ಬಂದಿಲ್ಲ, ಕೋವಿಡ್ ಮಹಾಮಾರಿ ಬಂದಾಗ ಇವರು ನೆರವಿಗೆ ಬಂದಿಲ್ಲ. ಅದೇ ರೀತಿ ಪ್ರವಾಹ ಬಂದಾಗಲೂ ಈ ಸರ್ಕಾರ ನೆರವಿಗೆ ಬರಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತವೆಂದು ಹೇಳಿದ್ರು, ಯುವಕರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತವೆಂದು ಹೇಳಿದ್ರು, 15 ಲಕ್ಷ ನಿಮ್ಮ ಖಾತೆಗೆ ಹಣ ಹಾಕುತ್ತವೆಂದು ಹೇಳಿ ಜನತೆಗೆ ಸುಳ್ಳು ಹೇಳಿ ಮೋಸ ಮಾಡಿದ್ದಾರೆ” ಎಂದು ಲೇವಡಿ ಮಾಡಿದರು.
“ಮೋದಿ ಸರ್ಕಾರ ಹೇಳೋದು ಒಂದು, ಮಾಡೋದು ಇನ್ನೊಂದು. ಆದರೆ ನಾವು ಈ ಬಾರಿ ಗ್ಯಾರಂಟಿ ಭರವಸೆಗಳನ್ನು ಕೊಡುತ್ತಾ ಇದ್ದೇವೆ. ಕಾಂಗ್ರೆಸ್ ಪ್ರಮುಖ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ ಇದರೊಂದಿಗೆ ಎಲ್ಲ ಐದು ಘೋಷಣೆಗಳನ್ನು ಜಾರಿಗೆ ತರುವುದು ನನ್ನ ಗ್ಯಾರಂಟಿ” ಎಂದರು.