- ಬೃಹತ್ ಸಮಾವೇಶ ಆಯೋಜಿಸಿದ ಬಿಜೆಪಿ
- ‘ಸರ್ಕಾರದ ವಿರುದ್ದ ಜನಾಕ್ರೋಶ ಕುದಿಯುತ್ತಿದೆ’
ಹಳೇ ಮೈಸೂರು ಭಾಗದಲ್ಲಿ ಶತಾಯಗತಾಯ ಕಮಲ ಅರಳಿಸಲು ಕಸರತ್ತು ನಡೆಸಿರುವ ಬಿಜೆಪಿ, ಪ್ರಧಾನಿ ಮೋದಿ ಅವರನ್ನು ಕರೆತರಲು ಮುಂದಾಗಿದೆ. ಈ ಕುರಿತು ಜೆಡಿಎಸ್ ಪ್ರತಿಕ್ರಿಯೆ ನೀಡಿ, ಬಿಜೆಪಿ ನಾಯಕರ ಕಾಲೆಳೆದಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಈ ನಡುವೆ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ತಿಣುಕಾಡುತ್ತಿದೆ.
ಬಿಜೆಪಿಯ ಸುಳಿವೂ ಇಲ್ಲದೆ ಕಡೆ ಕಮಲ ಅರಳಿಸಲು ಯತ್ನಿಸುತ್ತಿರುವ ಬಿಜೆಪಿ, ಹಳೇ ಮೈಸೂರು ಭಾಗವನ್ನು ಗುರಿಯಾಗಿಸಿಕೊಂಡಿದೆ. ಏಪ್ರಿಲ್ 30ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಭರದಿಂದ ಸಿದ್ಧತೆ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, “ಕರ್ನಾಟಕಕ್ಕೆ ನೆರೆ ಬಂದಾಗ ನಿರ್ಲಕ್ಷಿಸಿ, ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊಡಲು ನಿರಾಕರಿಸಿ, ನಮ್ಮ ಪಾಲಿನ ತೆರಿಗೆ, ಜಿಎಸ್ಟಿ ಕೊಡದೆ ಸತಾಯಿಸಿ ರಾಜ್ಯ ನೆನಪಿಸಿಕೊಳ್ಳದ ಪ್ರಧಾನಿ ಮೋದಿಯವರಿಗೆ ಚುನಾವಣೆ ಬಂದಾಗ ಮಾತ್ರ ಎಲ್ಲಿಲ್ಲದ ಅತ್ಯುತ್ಸಾಹ” ಎಂದು ವ್ಯಂಗ್ಯವಾಡಿದೆ.
“ಸಮಾವೇಶ, ಪ್ರಚಾರ ಸಭೆಗಳನ್ನು ಚನ್ನಪಟ್ಟಣ ಸೇರಿ ಹಳೇ ಮೈಸೂರಿನ ಕೆಲವು ಭಾಗಗಳಲ್ಲಿ ಮಾಡಲಿದ್ದಾರಂತೆ. ಸ್ವಂತ ಶಕ್ತಿ, ಕೆಲಸಗಳ ಆಧಾರದಲ್ಲಿ ಗೆಲ್ಲಲು ಆಗದ ಗುಲಾಮಿ ಮನಸ್ಥಿತಿಯ ಅಭ್ಯರ್ಥಿಗಳಿಗಾಗಿ ಕೇಂದ್ರ ಬಿಜೆಪಿ ಸರ್ಕಾರ ಇಡಿಯಾಗಿ ಬಂದರೂ ಅಷ್ಟೆ, ಈ ಸಲದ ಚುನಾವಣೆಯಲ್ಲಿ ಕನ್ನಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಸವದತ್ತಿ ಬಿಜೆಪಿ ಅಭ್ಯರ್ಥಿಗೆ ಬಿಗ್ ರಿಲೀಫ್; ರತ್ನಾ ಮಾಮನಿ ನಾಮಪತ್ರ ಅಂಗೀಕಾರ
“ಮೋದಿಯವರು ಬಂದರು ಎಂಬ ಕಾರಣಕ್ಕೆ ಯಾವ ದೊಡ್ಡ ಬದಲಾವಣೆಯೂ ಸಾಧ್ಯವಿಲ್ಲ. ಅತ್ಯಂತ ಬೇಜವಾಬ್ದಾರಿ ಮತ್ತು ಹೇಸಿಗೆ ಆಡಳಿತ ನೀಡಿದ ರಾಜ್ಯ ಸರ್ಕಾರದ ವಿರುದ್ದ ಜನಾಕ್ರೋಶ ಕುದಿಯುತ್ತಿದೆ” ಎಂದಿದೆ.
“ಬಿಜೆಪಿ ನಾಯಕರ ಅಟ್ಟಹಾಸಕ್ಕೆ, ದುರಹಂಕಾರಕ್ಕೆ, ದುರಾಡಳಿತಕ್ಕೆ ಕಪಾಳಮೋಕ್ಷ ಮಾಡಲು ಕನ್ನಡಿಗರು ಸಜ್ಜಾಗಿದ್ದಾರೆ. ಯಾರ ಪ್ರಭಾವವೂ ಏನೂ ಮಾಡಲಾಗದು” ಎಂದು ಜೆಡಿಎಸ್ ಹರಿಹಾಯ್ದಿದೆ.