ಬುಧವಾರ ರಾಜ್ಯಾದ್ಯಂತ ಶಾಸಕ ಆಯ್ಕೆಗೆ ಮತದಾನ ನಡೆಯುತ್ತಿದೆ. ಎಲ್ಲೆಡೆ ಮತದಾರರು ಮತದಾನಕ್ಕೆ ತೆರಳುತ್ತಿದ್ದಾರೆ. ಆದರೆ, ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಏಳಿಗೆಹುಂಡಿ ಗ್ರಾಮದ ಮತದಾರರು ‘ತಾವು ಮತದಾನ ಬಹಿಷ್ಕರಿಸಿದ್ದೇವೆ’ ಎಂದು ಹೇಳಿದ್ದು, ಮತಗಟ್ಟೆಯತ್ತ ಸುಳಿದಿಲ್ಲ.
ಇಂದು (ಮೇ 10) ಬೆಳಗ್ಗೆ ಏಳು ಗಂಟೆಯಿಂದಲೇ ಮತದಾರ ಪ್ರಕ್ರಿಯೆ ಆರಂಭವಾಗಿದ್ದು, 11 ಗಂಟೆಯಾದರೂ ಗ್ರಾಮದ ಯಾವೊಬ್ಬ ಮತದಾರನೂ ಮತ ಚಲಾಯಿಸಲು ಬಂದಿಲ್ಲ. ಇದನ್ನರಿತ ಚುನಾವಣಾಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ. ಆದರೂ, ಗ್ರಾಮದ ಜನರು ಮತದಾನ ಮಾಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ.
“ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಶಾಸಕರು ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ರಸ್ತೆ ಮಾಡಿಸಿಲ್ಲ. ನಾವು ಯಾಕಾಗಿ ಮತ ಹಾಕಬೇಕು” ಎಂದು ಗ್ರಾಮದ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಚುನಾವಣಾ ಘೋಷಣೆಯಾದ ಬಳಿಕವೂ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಆಗಲೀ, ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಆಗಲೀ ಗ್ರಾಮದತ್ತ ಸುಳಿದಿಲ್ಲವೆಂದು ತಿಳಿದುಬಂದಿದೆ.
ಹೆಸರು ಮಾತ್ರ “ಏಳಿಗೆಹುಂಡಿ”!