- ಮತ ನೀಡಿ ವಿಶ್ವಾಸ ತುಂಬಿ ಎಂದ ಪ್ರಿಯಾಂಕ ವಾದ್ರಾ
- ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಭಾಷಣ
“ನನ್ನ ಅಜ್ಜಿಯ ಸಂಕಷ್ಟದ ಕಾಲದಲ್ಲಿ ಚಿಕ್ಕಮಗಳೂರು ಜನ ನನ್ನ ಅಜ್ಜಿಯ ಕೈ ಹಿಡಿದಿದ್ದರು. ಈಗ ಕಾಂಗ್ರೆಸ್ಗೆ ಸಂಕಷ್ಟದ ಸಮಯ ಎದುರಾಗುತ್ತಿದೆ. ಜಿಲ್ಲೆಯ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಟಿ ಡಿ ರಾಜೇಗೌಡ ಪರ ಮತ ಯಾಚಿಸಿದ್ದಾರೆ.
“ಸಮಾವೇಶದ ನಡುವೆ ಮಳೆ ಬರುತ್ತಿದೆ. ಇದು ಭಗವಂತನ ಆಶೀರ್ವಾದ. ಚಿಕ್ಕಮಗಳೂರನ್ನು ನಾನು ನನ್ನ ಜೀವಮಾನದವರೆಗೆ ಮರೆಯುವುದಿಲ್ಲ” ಎಂದಿದ್ದಾರೆ. ಮಳೆಯ ನಡುವೆಯೂ ಜನರು ಪ್ರಿಯಾಂಕಾ ವಾದ್ರಾ ಅವರ ಭಾಷಣ ಕೇಳಲು ನೆರೆದಿದ್ದರು.
“ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿ, ಲೋಕಸಭೆಯಿಂದ ಹೊರಹಾಕಿದ್ದಾರೆ. ಆದರೆ, ರಾಹುಲ್ ಮತ್ತೆ ಲೋಕಸಭೆಗೆ ಬರುತ್ತಾನೆ ಎನ್ನುವ ವಿಶ್ವಾಸವಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಪರೇಷನ್ ಕಮಲ ಮಾಡಿದಾಗಲೇ ಬಿಜೆಪಿಯ ತತ್ವ ಸಿದ್ದಾಂತ ಮಣ್ಣು ಪಾಲದವು : ಜಗದೀಶ್ ಶೆಟ್ಟರ್
“ಕರ್ನಾಟಕದ ಈ ಚುನಾವಣೆ ಸತ್ಯ ಮತ್ತು ಜಯದ ಹೋರಾಟ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಎಲ್ಲ ಕಡೆಯಿಂದಲೂ ನಮಗೆ ಮೋಸವಾಗುತ್ತಿದೆ. ನಿಮ್ಮ ಮತವನ್ನು ನೀಡಿ ವಿಶ್ವಾಸ ತುಂಬಿ” ಎಂದು ಮನವಿ ಮಾಡಿಕೊಂಡಿದ್ದಾರೆ.
“ಕರ್ನಾಟಕ ಸ್ವಾಭಿಮಾನದ ನಾಡು. ಆದರೆ, ರಾಜ್ಯದ ಪರಿಸ್ಥಿತಿಯನ್ನು ಬಿಜೆಪಿ ಬದಲಿಸುತ್ತಿದೆ. ನಾವು ನಿಮ್ಮಿಂದ ಲೂಟಿ ಮಾಡುವುದಿಲ್ಲ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ” ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.