- ಬಿಎಸ್ವೈ ಟೀಕೆಗಳೇ ನನಗೆ ಶ್ರೀರಕ್ಷೆ
- ಈ ಬಡಪಾಯಿ ಶೆಟ್ಟರ್ ಮೇಲೇಕೆ ಸಿಟ್ಟು
ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದಾಗಲೇ ಬಿಜೆಪಿಯ ತತ್ವ ಸಿದ್ಧಾಂತಗಳು ಮಣ್ಣು ಪಾಲಾಗಿವೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಜಗದೀಶ್ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. “ತತ್ವ ಸಿದ್ಧಾಂತ ಕಳೆದುಕೊಂಡಿರುವ ಬಿಜೆಪಿಯವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ” ಎಂದು ಹೇಳಿದ್ದಾರೆ.
ಪಕ್ಷಾಂತರವಾಗಿರುವ ಕುರಿತ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ಯಡಿಯೂರಪ್ಪ ಈ ಹಿಂದೆ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ಆಗ ಅವರ ತತ್ವಸಿದ್ಧಾಂತ ಎಲ್ಲಿಗೆ ಹೋಗಿತ್ತು” ಎಂದು ಪ್ರಶ್ನಿಸಿದ್ದಾರೆ.
“ನಾನು ಪಕ್ಷಕ್ಕೆ ದ್ರೋಹ ಬಗೆದಿಲ್ಲ. ನಾನ್ಯಾಕೆ ಬಿಜೆಪಿ ಬಿಟ್ಟೆ ಎನ್ನುವುದನ್ನು ಈಗಾಗಲೇ ತಿಳಿಸಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ ಹೊರಗಡೆ ಬಂದಿರುವೆ” ಎಂದು ಹೇಳಿದ್ದಾರೆ.
“ಯಡಿಯೂರಪ್ಪ ಅವರೇ ನನಗೆ ಟಿಕೆಟ್ ತಪ್ಪಿದರೆ ಪಕ್ಷಕ್ಕೆ ನಷ್ಟ ಆಗುತ್ತದೆ ಎಂದಿದ್ದರು. ಆದ್ದರಿಂದ ಟಿಕೆಟ್ ಕೊಡಿಸಲು ಬಹಳ ಪ್ರಯತ್ನ ಮಾಡಿದ್ದರು. ಆದರೆ, ಅವರಿಂದ ಸಹಾಯ ಆಗಲಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼಬಿಬಿಸಿʼ ಹೆಸರಿನಲ್ಲಿ ಬಿಜೆಪಿ ಪರ ನಕಲಿ ಸಮೀಕ್ಷೆ
“ಯಡಿಯೂರಪ್ಪ ಅವರು ನನ್ನ ಬಗ್ಗೆ ಎಷ್ಟೇ ಮಾತನಾಡಲಿ ಅವರ ಟೀಕೆ ನಮಗೆ ಆಶೀರ್ವಾದ ಇದ್ದ ಹಾಗೆ. ಅವರ ಟೀಕೆಗಳೆ ನನಗೆ ಗೆಲುವಿಗೆ ಶ್ರೀರಕ್ಷೆ ಆಗಲಿದೆ” ಎಂದಿದ್ದಾರೆ.
ಬಿಜೆಪಿ ನಾಯಕರೆಲ್ಲರೂ ನನ್ನನ್ನು ಸೋಲಿಸುವ ಗುರಿ ಇಟ್ಟುಕೊಂಡಿದ್ದಾರೆ. ಈ ಬಡಪಾಯಿ ಶೆಟ್ಟರ್ ಮೇಲೆ ಅವರಿಗೇಕೆ ಇಷ್ಟೊಂದು ಕೋಪವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
“ನಾನಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿಲ್ಲ, ನನ್ನಂತೆಯೇ ಆಯನೂರು ಮಂಜುನಾಥ, ಲಕ್ಷ್ಮಣ ಸವದಿ, ಯಲ್ಲಾಪುರದಲ್ಲಿ ಮಾಜಿ ಶಾಸಕ ವಿ ಎಸ್ ಪಾಟೀಲ, ಎನ್ ಆರ್ ಸಂತೋಷ್ ಬಿಜೆಪಿ ತೊರೆದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳನ್ನು ಸೇರ್ಪಡೆ ಆಗಿದ್ದಾರೆ” ಎಂದಿದ್ದಾರೆ.
“ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ಮತ್ತೊಬ್ಬ ಲಿಂಗಾಯತ ನಾಯಕರ ವಿರುದ್ಧ ಟೀಕೆ ಮಾಡಿಸಲಾಗುತ್ತಿದೆ. ಈ ಮೂಲಕ ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವ ಕೆಲಸ ಮಾಡಲಾಗುತ್ತಿದೆ” ಎನ್ನುವ ಮೂಲಕ ಬಿ ಎಲ್ ಸಂತೋಷ್ಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.