ಅಗ್ನಿಸಾಕ್ಷಿ ಧಾರವಾಹಿಯ ನಟ ಸಂಪತ್ ಜಯರಾಮ್ ಶನಿವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನಟಿಯ ಅಣ್ಣನ ಪಾತ್ರದಲ್ಲಿ ಮಿಂಚಿದ್ದ ಸಂಪತ್ ಜಯರಾಮ್ (35) ನೆಲಮಂಗಲದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ನೆಲಮಂಗಲದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅವರ ಮೃತದೇಹವಿದ್ದು, ಹುಟ್ಟೂರಾದ ಎನ್ ಆರ್ ಪುರಕ್ಕೆ ರವಾನೆ ಮಾಡಲು ಸಿದ್ಧತೆ ಮಾಡಲಾಗಿದೆ.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಂಪತ್ ಜಯರಾಮ್ ನಿಧನಕ್ಕೆ ಚಂದನವನದ ತಾರೆಯರು ಸಂತಾಪ ಸೂಚಿಸಿದ್ದಾರೆ.
ಸಂಪತ್ ಅವರು ಕಿರುತೆರೆಯಷ್ಟೇ ಅಲ್ಲದೆ ಬೆಳ್ಳಿತೆರೆಯಲ್ಲೂ ಮಿಂಚಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ರಾಜೇಶ್ ಧ್ರುವ ನಿರ್ದೇಶಿಸಿದ್ದ ‘ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ’ ಸಿನಿಮಾದಲ್ಲಿ ನಟಿಸಿದ್ದರು. ಕಳೆದ ಒಂದು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಎನ್ನಲಾಗಿದೆ.
ಅಗ್ನಿಸಾಕ್ಷಿ ಧಾರವಾಹಿಯ ಸಹನಟ ರಾಜೇಶ್ ಧೃವ ಸಂತಾಪ ಸೂಚಿಸಿದ್ದು, “ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ, ಅದೆಷ್ಟೋ ಸಿನೆಮಾ ಮಾಡೋದಿದೆ, ಅದೆಷ್ಟೋ ಜಗಳ ಬಾಕಿ ಇದೆ, ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ, ಇನ್ನೂ ನಿನ್ನ ದೊಡ್ಡ್ ದೊಡ್ಡ್ ಸ್ಟೇಜ್ನಲ್ಲಿ ನೋಡೋದ್ ಇದೆ ಕಣೋ, ಮುಚ್ಕೊಂಡು ಬಾರೋ ವಾಪಾಸ್ ಪ್ಲೀಸ್”ಎಂದು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಟ್ವಿಟರ್ನಿಂದ ಬ್ಲೂಟಿಕ್ ಮಾಯ: ಮಸ್ಕ್ ನಡೆಗೆ ಬಚ್ಚನ್ ವ್ಯಂಗ್ಯ