ಬ್ಯಾಂಕುಗಳನ್ನು ಇತಿಹಾಸದ ಪುಟ ಸೇರಿಸಿದ ನೋವು ಮಾಸಿಲ್ಲ ಎಂದ ಕವಿರಾಜ್
ರಾಜ್ಯದಲ್ಲಿ ʼಅಮುಲ್ʼ ಬ್ರ್ಯಾಂಡ್ ಉತ್ಪನ್ನಗಳ ಮಾರಾಟಕ್ಕೆ ಭಾರೀ ಜನ ವಿರೋಧ
ರಾಜ್ಯ ಸರ್ಕಾರ, ಗುಜರಾತ್ ಮೂಲದ ʼಅಮುಲ್ʼ ಬ್ರ್ಯಾಂಡ್ನ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲು ಉತ್ತೇಜನ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ʼಅಮುಲ್ʼ ಮಾರುಕಟ್ಟೆ ವಿಸ್ತರಣೆಗೆ ಅವಕಾಶ ಮಾಡಿಕೊಡುವ ಮೂಲಕ ಸ್ಥಳೀಯ ಸಹಕಾರಿ ಬ್ರ್ಯಾಂಡ್ ʼನಂದಿನಿʼಯನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ರಾಜ್ಯದಲ್ಲಿ ಈಗಾಗಲೇ ಮಾರಾಟವಾಗುತ್ತಿರುವ ಪರರಾಜ್ಯದ ಹಾಲಿನ ಉತ್ಪನ್ನಗಳಿಗೆ ವಿರೋಧ ಯಾಕಿಲ್ಲ? ಜನ ʼಅಮುಲ್ʼ ಮೇಲೆಯೇ ಮುಗಿ ಬೀಳುತ್ತಿರುವುದೇಕೆ ಎಂಬ ಬಿಜೆಪಿಗರ ಪ್ರಶ್ನೆಗೆ ಕನ್ನಡದ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಉತ್ತರಿಸಿದ್ದಾರೆ.
ʼಅಮುಲ್ʼ ವಿವಾದದ ಕುರಿತು ಕೇಳಿ ಬರುತ್ತಿರುವ ಪರ, ವಿರೋಧ ಚರ್ಚೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಕ್ರಿಯಿಸಿರುವ ಕವಿರಾಜ್, ” ʼದೊಡ್ಲಾʼ, ʼಆರೋಕ್ಯʼ, ʼಮಿಲ್ಕಿ ಮಿಸ್ಟ್ʼ, ʼಹ್ಯಾಟ್ಸನ್ʼ ಮುಂತಾದ ಪರರಾಜ್ಯದ ಹಾಲುಗಳಿಗೆ ಇಲ್ಲದ ವಿರೋಧ ಕೇವಲ ಅಮುಲ್ಗೆ ಯಾಕೆ ಎಂದರೆ ಈ ಯಾವ ಹಾಲುಗಳ ಹಿಂದೆಯೂ ಕೇಂದ್ರದ ಪವರ್ ಫುಲ್ ವ್ಯಕ್ತಿಗಳು ಅಥವಾ ಪರರಾಜ್ಯದ ಹಿತಾಸಕ್ತಿಗಳ ಒತ್ತಾಸೆಯಿಲ್ಲ. ಈ ಯಾವುದರ ಜೊತೆಯೂ ʼನಂದಿನಿʼಯನ್ನು ವಿಲೀನಗೊಳಿಸಿ ಎಂದು ಒತ್ತಡ ಬಂದಿಲ್ಲ . ವಿಲೀನ ಪ್ರಯತ್ನ ಸಫಲವಾಗದಿದ್ದಾಗ ʼಜಿಯೋʼಗಾಗಿ ʼಬಿಎಸ್ಎನ್ಎಲ್ʼ ಅನ್ನು ದುರ್ಬಲಗೊಳಿಸಿದಂತೆ ನಮ್ಮ ಆಡಳಿತವನ್ನೇ ಬಳಸಿ ʼನಂದಿನಿʼಯ ಕೃತಕ ಅಭಾವ ಸೃಷ್ಟಿ ಮಾಡುವುದು, ಗುಣಮಟ್ಟದ ಬಗ್ಗೆ ನೆಗೆಟಿವ್ ಪ್ರಚಾರ ಮಾಡುವುದು, ನಷ್ಟಕ್ಕೆ ದೂಡಿ ನಿಷ್ಕ್ರಿಯಗೊಳಿಸುವುದು ಇಂತಹಾ ಯಾವುದೇ ಹುನ್ನಾರ ಮಾಡುವವರಿಲ್ಲ. ಮೇಲಿನ ಯಾವುದೇ ಖಾಸಗಿ ಸಂಸ್ಥೆಗಳಿಂದ ನಂದಿನಿಯ ಅಸ್ತಿತ್ವಕ್ಕೆ ಕುತ್ತು ಬರುವಂತಿಲ್ಲ. ಈ ಪರರಾಜ್ಯದ ಸಂಸ್ಥೆಗಳು ಕರ್ನಾಟಕದಲ್ಲಿ ಸುಗಮವಾಗಿ ಹಾಲು ಮಾರಾಟ ನಡೆಸುತ್ತಿರುವುದೇ ನಾವು ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಲು ತಯಾರಿದ್ದೇವೆ ಎಂಬುದಕ್ಕೆ ನಿದರ್ಶನ” ಎಂದಿದ್ದಾರೆ.
“ಈಗ ವಿರೋಧಿಸುತ್ತಿರುವುದು ಸ್ಪರ್ಧೆಗೆ ಹೆದರಿ ಅಲ್ಲ. ಪ್ರಭುತ್ವದ ಪವರ್ ಫುಲ್ ವ್ಯಕ್ತಿಗಳನ್ನು ಮೆಚ್ಚಿಸಲು, ಅವರ ಆಜ್ಞಾಪಾಲಕರಾಗಿ ನಮ್ಮ ಹೆಗ್ಗುರುತುಗಳನ್ನೇ ಬಲಿ ಕೊಡಲು ಹಿಂದೆ ಮುಂದೆ ನೋಡದ ನಮ್ಮದೇ ಜನ, ಆಡಳಿತದ ವಿರುದ್ಧ. ʼವಿಜಯಾ ಬ್ಯಾಂಕ್ʼ, ʼಕಾರ್ಪೋರೇಷನ್ ಬ್ಯಾಂಕ್ʼ, ʼಸಿಂಡಿಕೇಟ್ ಬ್ಯಾಂಕ್ʼಗಳನ್ನು ಇತಿಹಾಸದ ಪುಟ ಸೇರಿಸಿದ ದುರಂತದ ನೋವು ಇನ್ನು ಮಾಸಿಲ್ಲ. ಈ ಹೋರಾಟ ಒಂದೊಂದಾಗೇ ನಮ್ಮ ಅಸ್ಮಿತೆಗಳನ್ನು ಕಸಿದು ಅನಾಥರಾಗಿಸುವವರ ವಿರುದ್ಧ” ಎಂದು ರಾಜ್ಯದಲ್ಲಿ ಅಮುಲ್ ಬ್ರ್ಯಾಂಡ್ನ ಉತ್ಪನ್ನಗಳ ಮಾರಾಟಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.
ಈ ಹಿಂದೆ ಕೇಂದ್ರಗೃಹ ಸಚಿವ ಅಮಿತ್ ಶಾ ಅಮುಲ್ ಮತ್ತು ನಂದಿನಿ ಬ್ರ್ಯಾಂಡ್ಗಳನ್ನು ವಿಲೀನಗೊಳಿಸುವ ಬಗ್ಗೆ ಸುಳಿವು ನೀಡಿದ್ದರು. ಅವರ ಈ ಹೇಳಿಕೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲೆವಡೆ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದೆ. ಈ ಮೂಲಕ ಸ್ಥಳೀಯ ಸಹಕಾರಿ ಬ್ರ್ಯಾಂಡ್ ʼಅಮುಲ್ʼ ಅನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.