ಸ್ಟಾರ್ ನಟ ಕಿಚ್ಚ ಸುದೀಪ್ ಬಿಜೆಪಿಯಲ್ಲಿನ ಕೆಲ ಆಪ್ತರ ಪರ ಈ ಬಾರಿಯ ಚುನಾವಣೆಯಲ್ಲಿ ಪ್ರಚಾರ ಮಾಡುವುದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯೋಜಿಸಿರುವ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್ ಮತ್ತು ಆರೋಗ್ಯ ಸಚಿವ ಕೆ. ಸುಧಾಕರ್ ಕೂಡ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ.
ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು
ಸುದೀಪ್ : ನನ್ನ ರಾಜಕೀಯ ನಡೆ ಅಥವಾ ನಿಲುವುಗಳು ಅಂಥೇನಿಲ್ಲ. ನಾನು ಪ್ರೀತಿಯಿಂದ ಮಾಮ ಎಂದು ಕರೆಯುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸುತ್ತಿದ್ದೇನೆ.
ಸುದೀಪ್ : ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಉತ್ತಮ ಕೆಲಸಗಳು ನಡೆದಿವೆ. ಹೀಗಾಗಿ ಅವರನ್ನು ಬೆಂಬಲಿಸುತ್ತಿದ್ದೇನೆ.
ಬಸವರಾಜ ಬೊಮ್ಮಾಯಿ : ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ನನ್ನ ಸ್ಥಾನ ಮತ್ತು ನಾನಿರುವ ರಾಜಕೀಯ ಪಕ್ಷಕ್ಕೆ ಬೆಂಬಲ ಸೂಚಿಸಲು ಬಂದಿದ್ದಾರೆ.
ಬಸವರಾಜ ಬೊಮ್ಮಾಯಿ : ಸುದೀಪ್ ಜೊತೆಗೆ ಈ ವಿಚಾರದ ಬಗ್ಗೆ ಎರಡ್ಮೂರು ಬಾರಿ ಮಾತನಾಡಿದ್ದೇನೆ. ಪಕ್ಷ ಸೇರಿಕೊಳ್ಳದಿದ್ದರೂ ನನ್ನ ಮತ್ತು ನನ್ನ ಪಕ್ಷದ ಪರವಾಗಿ ಅವರು ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ.
ಸುದೀಪ್ : ಬಿಜೆಪಿಯ ಎಲ್ಲ ಅಭ್ಯರ್ಥಿಗಳ ಪ್ರಚಾರ ಮಾಡಲು ನನ್ನಿಂದ ಸಾಧ್ಯವಾಗಲ್ಲ. ಬಸವರಾಜ ಬೊಮ್ಮಾಯಿ ಅವರು ಸೂಚಿಸುವ ನಿರ್ದಿಷ್ಟ ಅಭ್ಯರ್ಥಿಗಳಿಗೆ ನನ್ನ ಬೆಂಬಲ ಸೂಚಿಸಿ ಪ್ರಚಾರ ಮಾಡುತ್ತೇನೆ.
ಸುದೀಪ್ : ಬೇರೆ ಪಕ್ಷಗಳಲ್ಲಿನ ಆಪ್ತರು ತಮ್ಮ ಪರ ಪ್ರಚಾರ ಮಾಡುವಂತೆ ನೆರವು ಕೇಳಿದರೆ ಖಂಡಿತವಾಗಿ ಅವರ ಪರವಾಗಿಯೂ ಪ್ರಚಾರ ಮಾಡುತ್ತೇನೆ.
ಸುದೀಪ್ : ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಹೇಳಿದರೂ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸುವ ದಿನ ಬಂದರೆ ಖಂಡಿತ ಎಲ್ಲರಿಗೂ ತಿಳಿಸುತ್ತೇನೆ.
ಸುದೀಪ್ : ಡಿ.ಕೆ ಶಿವಕುಮಾರ್ ಕೂಡ ನನ್ನನ್ನು ಅವರ ಪಕ್ಷಕ್ಕೆ ಕರೆದಿದದ್ದರು. ನಾನೊಬ್ಬ ನಟ ನನ್ನನ್ನು ಎಲ್ಲರೂ ತಮ್ಮ ಪಕ್ಷಗಳಿಗೆ ಆಹ್ವಾನಿಸುತ್ತಾರೆ. ಆದರೆ, ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ.
ಸುದೀಪ್ : ಒಬ್ಬ ಭಾರತೀಯನಾಗಿ ಮೋದಿ ಅವರ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡಿದ್ದೇನೆ.
ಸುದೀಪ್ : ಪ್ರಚಾರಕ್ಕೆ ಸಂಬಂಧಿಸಿದ ನೀಲನಕ್ಷೆ ಇನ್ನೂ ಸಿದ್ಧಗೊಂಡಿಲ್ಲ. ಬೊಮ್ಮಾಯಿ ಅವರು ಸೂಚಿಸಿದ ಕಡೆಗೆ ಹೋಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ.
ಬಸವರಾಜ ಬೊಮ್ಮಾಯಿ : ಸುದೀಪ್ ನಮ್ಮ ಪರ ಪ್ರಚಾರ ಮಾಡಲು ಬಂದಿರುವುದು ಖುಷಿಯ ವಿಚಾರ. ಅವರ ಆಗಮನದಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರ ಮನಸ್ಸಿನಲ್ಲೂ ಕೆಲವು ವಿಚಾರಗಳಿವೆ ಮುಂದಿನ ದಿನಗಳಲ್ಲಿ ಎಲ್ಲವೂ ಹಂತ ಹಂತವಾಗಿ ಬಹಿರಂಗ ಪಡಿಸುತ್ತಾರೆ. ನಮ್ಮ ಪರ ಪ್ರಚಾರ ಮಾಡುತ್ತಿರುವುದಕ್ಕೆ ಸುದೀಪ್ ಮತ್ತವರ ಕುಟುಂಬಸ್ಥರಿಗೆ ಧನ್ಯವಾದ.