ಜನರ ಬದುಕಿನ ನಿಜಾಯ್ತಿಯನ್ನು ತಿರುಚಿದ ಕಥೆಯಿಂದ ಬದಲಿಸಲು ಸಾಧ್ಯವಿಲ್ಲ
ಕಥೆ ಮತ್ತು ಕಟ್ಟುಕಥೆಯ ನಡುವಿನ ವ್ಯತ್ಯಾಸ ನಮ್ಮ ಜನಕ್ಕೆ ಚೆನ್ನಾಗಿ ಗೊತ್ತಿದೆ
ತಿರುಚಿದ ಕಥಾಹಂದರದ ಕಾರಣಕ್ಕೆ ವಿವಾದ ಸೃಷ್ಟಿಸಿರುವ, ವಿವಾದದ ಕಾರಣಕ್ಕೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ʼದಿ ಕೇರಳ ಸ್ಟೋರಿʼ ಚಿತ್ರದ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಕಥೆ ಮತ್ತು ಕಟ್ಟುಕಥೆಯ ನಡುವಿನ ವ್ಯತ್ಯಾಸ ಜನಕ್ಕೆ ಗೊತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ʼದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗೆ ಸಂದರ್ಶನ ನೀಡಿರುವ ಪಿಣರಾಯಿ ವಿಜಯನ್, ” ʼದಿ ಕೇರಳ ಸ್ಟೋರಿʼ ಚಿತ್ರ ದೇಶದೆಲ್ಲೆಡೆ ವಿವಾದ ಸೃಷ್ಟಿಸಿದೆ. ಪಶ್ಚಿಮ ಬಂಗಾಳ ಸರ್ಕಾರ ಈ ಚಿತ್ರವನ್ನು ನಿಷೇಧಿಸಿದೆ. ಕೇರಳ, ʼಲವ್ ಜಿಹಾದ್ʼ ಕಾರಣಕ್ಕೆ ಕುಖ್ಯಾತಿ ಹೊಂದಿರುವ ರಾಜ್ಯ ಎಂಬಂತೆ ಬಿಂಬಿಸಲಾಗಿದೆ. ಇಂತಹ ಚಿತ್ರದ ಮೇಲೆ ಕೇರಳ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಎಲ್ಲರೂ ಕೇಳುತ್ತಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು ಎಂಬ ಪ್ರಶ್ನೆಗೆ ಉತ್ತಿರಿಸಿದ್ದಾರೆ.
“ಸಿನಿಮಾಗೆ ಸಂಬಂಧಿಸಿದ ವಿಚಾರಗಳನ್ನು ಗಮನಿಸುವುದಕ್ಕಾಗಿ ನಮ್ಮಲ್ಲಿ ಸೆನ್ಸಾರ್ ಮಂಡಳಿ ಇದೆ. ಅಪಪ್ರಚಾರದ ಉದ್ದೇಶಕ್ಕಾಗಿ ಸಿದ್ಧವಾದ ಚಿತ್ರಗಳಿಗೆ ಜನ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ನಾವು ನೋಡುತ್ತಾ ಬಂದಿದ್ದೇವೆ. ಕೋಮುವಾದದ ಹಿನ್ನೆಲೆಯುಳ್ಳ ಈ ಚಿತ್ರವನ್ನು ಕೇರಳದ ಎಲ್ಲ ವರ್ಗದ ಜನರು ವಿರೋಧಿಸಿದ್ದಾರೆ. ಕಥೆ ಮತ್ತು ಕಟ್ಟುಕಥೆಯ ನಡುವಿನ ವ್ಯತ್ಯಾಸವನ್ನು ನಮ್ಮ ಜನ ಹೇಳಬಲ್ಲರು. ಹೀಗಾಗಿ ನಮ್ಮ ರಾಜ್ಯದಲ್ಲಿ ಆ ಚಿತ್ರವನ್ನು ನೋಡಲು ಯಾರು ಕೂಡ ಮುಂದಾಗಲಿಲ್ಲ” ಎಂದಿದ್ದಾರೆ.
“ನಾವು ಖಂಡಿತವಾಗಿಯೂ ಕೇರಳದ ಅಸಲಿ ಕಥೆಯನ್ನು ಜಗತ್ತಿನೆದುರು ಬಿಚ್ಚಿಡುತ್ತೇವೆ. ಇಲ್ಲಿನ ಜನಸಮುದಾಯ ನಡೆಸುತ್ತಿರುವ ಶಾಂತಿಯುತ ಬದುಕೇ ಕೇರಳದ ಅಸಲಿ ಕಥೆ. ಧರ್ಮಗಳ ಅಡೆತಡೆಗಳನ್ನು ದಾಟಿ ಕೂಡಿ ಬಾಳುವ ಕೇರಳಿಗರ ಭ್ರಾತೃತ್ವ ಮತ್ತು ಉದಾತ್ತ ಮೌಲ್ಯಗಳು ಸಾಮಾಜಿಕವಾಗಿ ಎಲ್ಲೆಡೆ ಕಾಣಸಿಗುತ್ತದೆ” ಎನ್ನುವ ಮೂಲಕ ʼದಿ ಕೇರಳ ಸ್ಟೋರಿʼ ಕುರಿತ ಚರ್ಚೆಯೇ ಅನಗತ್ಯ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾವುಕತೆಯಲ್ಲಿ ಬಂಧಿಸುವ ವಡಿವೇಲು ಕಂಠಸಿರಿಯ ʼರಾಜಾ ಕಣ್ಣುʼ
“ಅತಿಹೆಚ್ಚು ಅಕ್ಷರಸ್ತರನ್ನು ಹೊಂದಿರುವ ರಾಜ್ಯ ಎಂಬುದು ಕೇರಳದ ಅಸಲಿ ಕಥೆ. ಆರೋಗ್ಯ ವ್ಯವಸ್ತೆಯ ವಿಚಾರದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ನಮ್ಮ ರಾಜ್ಯ ಸಮನಾಗಿ ಎಂಬುದು ಇಲ್ಲಿನ ಅಸಲಿ ಕಥೆ. ಕೇರಳ ಅತ್ಯುತ್ತಮ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಹೊಂದಿರುವ ರಾಜ್ಯ ಎಂದು ನೀತಿ ಆಯೋಗ ಸೇರಿದಂತೆ ಹವಲು ಸಂಸ್ಥೆಗಳ ಅಧ್ಯಯನಗಳೇ ಸಾರಿ ಹೇಳುತ್ತವೆ. ಹೀಗಿರುವಾಗ ಯಾವುದೇ ಷಡ್ಯಂತ್ರಗಳು ಇಲ್ಲಿನ ಜನರ ಬದುಕಿನ ನಿಜಾಯ್ತಿಯನ್ನು ಬದಲಿಸಲು ಸಾಧ್ಯವಿಲ್ಲ” ಎಂದಿರುವ ಪಿಣರಾಯಿ ವಿಜಯನ್ ತಿರುಚಿದ ಕಥೆಗಳು, ಸಿನಿಮಾಗಳ ಮೂಲಕ ಜಾಗೃತ ಸಮುದಾಯದ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ತೀವ್ರವಾಗಿ ಹೇಳಿದ್ದಾರೆ.