- ‘ಕರ್ತವ್ಯ ನಿರ್ವಹಿಸದ ವೈದ್ಯಾಧಿಕಾರಿ-ಸಿಬ್ಬಂದಿಗಳ ಮೇಲೆ ಕ್ರಮ‘
- ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳ ಸಾವು; ಗ್ರಾಮಸ್ಥರ ಆರೋಪ
ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ವೈದ್ಯರು ಸೇರಿದಂತೆ ಸಿಬ್ಬಂದಿಗಳು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ, ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರದಿಂದ ಸಿಗುವ ಔಷಧಿಗಳು, ಜಾಗೃತಿ ಕಾರ್ಯಕ್ರಮ ಹಾಗೂ ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಗ್ರಾಮಸ್ಥರಿಗೆ ದೊರೆಯುವುದಿಲ್ಲ. ಬೇಕಾಬಿಟ್ಟಿ ರೋಗಿಗಳನ್ನು ನಡೆಸಿಕೊಳ್ಳುತ್ತಾರೆ. ಇವರ ನಿರ್ಲಕ್ಷ್ಯತನಕ್ಕೆ ರೋಗಿಗಳು ಹಸುನೀಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಗುರುವಾರ ಬೆಳಿಗ್ಗೆ ಅಪಘಾತದಿಂದ ಗಾಯಗೊಂಡು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಮೋನಿಕ ಹಾಗೂ ಪಲ್ಲವಿ ಎಂಬ ಗಾಯಾಳುಗಳನ್ನು ಕರೆತರೆದೊಯ್ದಿದ್ದೆವು. ಬೆಳಿಗ್ಗೆ 8 ರಿಂದ 9ರ ಸುಮಾರಿಗೆ ಆಸ್ಪತ್ರೆಯಲ್ಲಿ ಯಾರು ಇರಲಿಲ್ಲ. ಇಡೀ ಆಸ್ಪತ್ರೆ ಹುಡುಕಿದರೂ ಯಾರು ಪತ್ತೆಯಾಗಲಿಲ್ಲ. ಕೆಲ ದಿನಗಳ ಹಿಂದೆ ಆನೆ ದಾಳಿಗೆ ಯುವತಿ ಗಾಯಗೊಂಡಿದ್ದರು. ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗಲೂ ಸರಿಯಾದ ಚಿಕಿತ್ಸೆ ನೀಡಲಿಲ್ಲ. ವೈದ್ಯರು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಯುವತಿ ಮೃತಪಟ್ಟಳು. ಇದಕ್ಕೆಲ್ಲ ವೈದ್ಯರೇ ನೇರ ಹೊಣೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ತಾಯಿ, ಮಗು ಸಾವು ಸೂಚ್ಯಂಕ; 10 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
“ಇನ್ನೊಂದು ಪ್ರಕರಣದಲ್ಲಿ ಕಾಶಿಪುರ ತಾಂಡದ ಕೃಷ್ಣನಾಯ್ಕ ಎಂಬುವರು ಮನೆಯಲ್ಲಿ ನೇಣುಹಾಕಿ ಕೊಂಡಿದ್ದರು. ತಕ್ಷಣ ಅವರನ್ನು ಕೆರೆಬಿಳಚಿ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಇನ್ನೂ ಜೀವ ಇತ್ತು. ಆದರೆ, ಬೆಳಗ್ಗೆ 11 ಗಂಟೆಯಾದರೂ ವೈದ್ಯರು ಬರಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟ. ಆಸ್ಪತ್ರೆ ಸಿಬ್ಬಂದಿಗಳು ‘ನಮ್ಮ ಬಳಿ ಸೂಕ್ತ ಚಿಕಿತ್ಸಾ ಸಾಧನಗಳಿಲ್ಲ ದಾವಣಗೆರೆಗೆ ಹೋಗಿ’ ಎನ್ನುತ್ತಾರೆ. ಇಲ್ಲಿಂದ ಅಲ್ಲಿಗೆ ತೆರಳುವಷ್ಟರಲ್ಲಿ ರೋಗಿ ಮೃತಪಡುತ್ತಾನೆ. ಪ್ರತಿ ಬಾರಿಯೂ ವೈದ್ಯರ ಕರ್ತವ್ಯ ಲೋಪಕ್ಕೆ ರೋಗಿಗಳು ಸಾವನಪ್ಪುತ್ತಿದ್ದಾರೆ. ಚಿಕಿತ್ಸೆ ಅಥವಾ ಔಷಧಿ ಪಡೆಯಲು ಹೋದಾಗ ಔಷಧಿಯನ್ನು ಬೇಜವಾಬ್ದಾರಿತನದಿಂದ ಬಿಸಾಕುತ್ತಾರೆ. ಸರಿಯಾದ ರೀತಿಯಲ್ಲಿ ಯಾವುದೇ ಮಾಹಿತಿ ನೀಡುವುದಿಲ್ಲ. ಅವರೇ ದುಡಿದು ಸಂಪಾದಿಸಿದ ಔಷಧಿಗಳನ್ನು ನಮಗೆ ದಾನ ಮಾಡುತ್ತಿರುವ ಹಾಗೆ ವರ್ತಿಸುತ್ತಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆಯ ಪ್ರಕಾರ ಆರೋಗ್ಯ ಕೇಂದ್ರದಲ್ಲಿ ನಾಲ್ಕು ವೈದ್ಯರು ಇರಬೇಕು. 9:30 ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತರಾಗಿರಬೇಕು. ಅದರೆ, ಇಲ್ಲಿನ ಸಿಬ್ಬಂದಿ 11 ಗಂಟೆಗೆ 12 ಗಂಟೆಗೆ ಬರುತ್ತಾರೆ. ಹೆರಿಗೆ ಆಗಿರುವ ಸಂಖ್ಯೆ ಕಡಿಮೆ. ಬಿಪಿ ಶುಗರ್ ತಪಾಸಣೆ ಸಹ ಮಾಡುವುದಿಲ್ಲ. ಸದ್ಯ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆ ಈಡೆರಿಕೆಗೆ ಆಶ್ವಾಸನೆ ನೀಡಿದ್ದಾರೆ. ಹೀಗಾಗಿ, ಪ್ರತಿಭಟನೆ ನಿಲ್ಲಿಸಲಾಯಿತು. ವೈದ್ಯರು ಮುಂದೆ ಹೀಗೆ ನಡೆದುಕೊಂಡರೆ. ಮತ್ತೆ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದ ಸಲೀಂ ಅವರು ಈದಿನ.ಕಾಮ್ನೊಂದಿಗೆ ಮಾತನಾಡಿ, ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ತವ್ಯ ನಿರ್ವಹಿಸದ ವೈದ್ಯಾದಿಕಾರಿ ಸಿಬ್ಬಂದಿಗಳ ಮೇಲೆ ಕ್ರಮ ವಹಿಸಲಾಗುವುದು. ಸಮಸ್ಯೆ ಪರಿಹಾರವಾಗುವಂತೆ ಜಾಗೃತಿ ವಹಿಸಲಾಗುತ್ತದೆ ಎಂದು ಸದ್ಯ ಜಿಲ್ಲಾ ಆರೋಗ್ಯಧಿಕಾರಿ ಡಾ.ನಾಗರಾಜ್ ಭರವಸೆ ನೀಡಿದ್ದಾರೆ