- ಪರೀಕ್ಷಾ ಕೇಂದ್ರದ ಪ್ರವೇಶಕ್ಕೂ ಮೊದಲೇ ಅಕ್ರಮ ತಡೆದಿದ್ದೇವೆ
- ಪರಮೇಶ್ವರ್ ಮನೆಯ ಔತಣಕೂಟಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ
ವಿಧಾನಸೌಧವನ್ನು ವ್ಯಾಪಾರಸೌಧ ಮಾಡಿದ್ದು ಬಿಜೆಪಿಯವರು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ” ಬಿಜೆಪಿಯವರು ಪ್ರವಚನ ಮಾಡುವುದನ್ನು ನಿಲ್ಲಿಸಲಿ. ಪರೀಕ್ಷಾ ಅಕ್ರಮಗಳನ್ನು ನಾವು ಸಮರ್ಥವಾಗಿ ತಡೆದಿದ್ದೇವೆ” ಎಂದರು.
“ಬಿಜೆಪಿಯವರ ಬಲಗೈ ಬಂಟರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್ಐ ಅಕ್ರಮ ನಡೆದಾಗ ಬಿಜೆಪಿಯವರ ಅಧಿಕಾರ ಇತ್ತು. ಆಗ ಯಾಕೆ ಯಾವುದನ್ನೂ ಪತ್ತೆ ಹಚ್ಚಲಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಪರೀಕ್ಷಾ ಅಕ್ರಮ ಆಗದಂತೆ ತಡೆ
“ಯಾದಗಿರಿ ಹಾಗೂ ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ನಡೆಸುವ ಪ್ರಯತ್ನ ನಡೆದಿದೆ. ಪರೀಕ್ಷೆ ಅಕ್ರಮ ಆಗದಂತೆ ಕ್ರಮ ತೆಗೆದುಕೊಂಡಿದ್ದೇವೆ. ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ಆಗಿಲ್ಲ. ಪರೀಕ್ಷಾ ಕೇಂದ್ರದ ಪ್ರವೇಶಕ್ಕೂ ಮೊದಲೇ ಅಕ್ರಮ ತಡೆದು ವಶಕ್ಕೆ ಪಡೆದಿದ್ದೇವೆ. ಈಗಾಗಲೇ 9 ಜನ ಅರೆಸ್ಟ್ ಮಾಡಿದ್ದೇವೆ” ಎಂದು ಪರೀಕ್ಷಾ ಅಕ್ರಮದ ಬಗ್ಗೆ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಲಿಯುಗುರು ಲಾಕೆಟ್ ; ಸಂತೋಷನಿಗೇನೋ ಸುಣ್ಣ, ಸೆಲೆಬ್ರಿಟಿಗಳಿಗೇಕೆ ಬೆಣ್ಣೆ?
ಗೃಹ ಸಚಿವ ಡಾ. ಜಿ ಪರಮೇಶ್ವರ್ ಮನೆಯ ಔತಣಕೂಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ದಲಿತ ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ, ಬದಲಾಗಿ ರಾಗಿ ಮುದ್ದೆ ಬಗ್ಗೆ ಚರ್ಚೆ ನಡೆದಿದೆ” ಎಂದರು.
“ಪರಮೇಶ್ವರ್ ಸಾಹೇಬರ ಮನೆಯಲ್ಲಿ ನಡೆದ ಚರ್ಚೆ ಬಗ್ಗೆ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇದ್ದಂತಿದೆ. ಆದರೆ ಆವತ್ತು ಚರ್ಚೆ ನಡೆದಿದ್ದು ಹುದ್ದೆ ಬಗ್ಗೆ ಅಲ್ಲ ಬರೀ ಮುದ್ದೆ ಬಗ್ಗೆ. ಪ್ರೀತಿಯಿಂದ ಅವರು ಊಟಕ್ಕೆ ಕರೆದಿದ್ದರು ಅಷ್ಟೇ. ಇದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ” ಎಂದು ಹೇಳಿದರು.
ಊಟದ ಬಗ್ಗೆ ಏನೇನೋ ವ್ಯಾಖ್ಯಾನಗಳು ಆಗುತ್ತಿವೆ. ಆ ವ್ಯಾಖ್ಯಾನಗಳನ್ನು ಪರಮೇಶ್ವರ್ ಆಗಲಿ, ಸಿಎಂ ಆಗಲಿ, ಸತೀಶ್ ಜಾರಕಿಹೊಳಿ ಅವರಾಗಲಿ ಕೊಟ್ಟಿಲ್ಲ. ಇನ್ನೊಂದು ದಿನ ಡಿಕೆಶಿ ಸಾಹೇಬ್ರೀಗೂ ಕರೀತಾರೆ. ಮೊನ್ನೆಯ ಔತಣಕೂಟಕ್ಕೆ ಡಿಸಿಎಂ ಸಾಹೇಬ್ರು ಬರದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ” ಎಂದರು.
ದಲಿತ ಸಿಎಂ ಹೈಕಮಾಂಡ್ಗೆ ಬಿಟ್ಟಿದ್ದು
ದಲಿತ ಸಿಎಂ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗ ಆ ಪ್ರಶ್ನೆಯೇ ಇಲ್ವಲ್ಲ. ಈಗ ಯಾರ್ಯಾರಿಗೆ ಯಾವ ಯಾವ ಹುದ್ದೆ ಕೊಟ್ಟಿದ್ದಾರೋ ಅದನ್ನು ಎಲ್ಲರೂ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು.