ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳು ಮತ್ತು ಗ್ಯಾರಂಟಿಗಳು ಆಮ್ ಆದ್ಮಿ ಪಕ್ಷದ ಶೇ.90ರಷ್ಟು ನಕಲು ಆಗಿದ್ದು, ಇವುಗಳನ್ನು ಕರ್ನಾಟಕದ ಜನತೆಗೆ ಸಂಪೂರ್ಣವಾಗಿ ತಲುಪಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಆಪ್ ರಾಜ್ಯ ಸಂವಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಪ್ ಈಗಾಗಲೇ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರಿಗೆ ಪತ್ರ ಬರೆದರೆ ನಾವುಗಳು ಸಂಪೂರ್ಣವಾಗಿ ನಿಮಗೆ ತಾಂತ್ರಿಕ ಸಹಾಯ ಮಾಡುತ್ತೇವೆ” ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.
“ಜನತೆಯಿಂದ ಸಂಪೂರ್ಣ ತಿರಸ್ಕರಿಸಲ್ಪಟ್ಟಿರುವ ಬಿಜೆಪಿ ಇಂದು ರಾಜ್ಯದ ಜನರನ್ನು ಪ್ರಚೋದಿಸಿ ಗಲಾಟೆ ಮಾಡಿ ಎನ್ನುವ ಮೂಲಕ ಅಶಾಂತಿಯನ್ನು ಮೂಡಿಸಲು ಯತ್ನಿಸುತ್ತಿರುವುದು ಹೇಯ ಕೃತ್ಯ ಆಗಿದೆ. ರೈತರ ಆದಾಯ ದ್ವಿಗುಣ, ಸರ್ವರಿಗೂ ವಸತಿ, ವಿದೇಶಗಳಲ್ಲಿನ ಕಪ್ಪು ಹಣದಿಂದ ಪ್ರತಿಯೊಬ್ಬರ ಖಾತೆಗೂ 15ಲಕ್ಷ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡಿಕೆ, ಐದು ಟ್ರಿಲಿಯನ್ ಆರ್ಥಿಕತೆ, ಬುಲೆಟ್ ಟ್ರೈನ್, ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವಲ್ಲಿ ವೈಫಲ್ಯ, ಬೆಲೆ ಏರಿಕೆಯಂತಹ ಯಾವುದೇ ಆಶ್ವಾಸನೆಗಳನ್ನು ಈವರೆಗೂ ಈಡೇರಿಸದೆ ನೈತಿಕತೆ ಇಲ್ಲದೆ ಬಿಜೆಪಿಯವರು ಏಕಾಏಕಿ ರಾಜ್ಯದ ಶಾಂತಿಗೆ ಭಂಗ ತರುವ ರೀತಿಯಲ್ಲಿ ಅಶಾಂತಿಯನ್ನು ಮೂಡಿಸಲು ಯತ್ನಿಸುತ್ತಿರುವುದು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಗೆದ್ದ ಕಾಂಗ್ರೆಸ್ಗೆ ಜಿಲ್ಲೆ, ತಾಲ್ಲೂಕು ಗೆಲ್ಲುವ ಸವಾಲು!
“ಎಲ್ಲ ಭರವಸೆಗಳನ್ನು ಈಡೇರಿಸಲು ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ಪಾರದರ್ಶಕ ಆಡಳಿತ ಶೈಲಿಯಿಂದ ಮಾತ್ರ ಸಾಧ್ಯ, ಇವುಗಳನ್ನು ರೂಡಿಸಿಕೊಳ್ಳಲು ಕಾಂಗ್ರೆಸ್ ಕಾರ್ಯೋನ್ಮುಖವಾಗಬೇಕು. ಇನ್ನು ಒಂದು ತಿಂಗಳಲ್ಲಿ ತಾನು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸದಿದ್ದಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ” ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಉಸ್ತುವಾರಿ ಜಗದೀಶ್ ವಿ. ಸದಂ, ಕಾರ್ಯಾಧ್ಯಕ್ಷ ಶಿವರಾಯಪ್ಪ ಜೋಗಿನ್ ಉಪಸ್ಥಿತರಿದ್ದರು.