- ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಹೋರಾಟಗಾರ ಮೇಲೆ ಪೊಲೀಸ್ ದೌರ್ಜನ್ಯ
- ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳ ಪರವಾಗಿ ನಿಲ್ಲಬೇಕಿದೆ
ಅಂತರಾಷ್ಟ್ರೀಯ ಕ್ರಿಡಾಪಟುಗಳಿಗೆ ಆಗಿರುವ ಅನ್ಯಾಯ ಹಾಗೂ ಅವಮಾನವನ್ನು ಖಂಡಿಸಿ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತುಮಕೂರು ನಗರದ ಟೌನ್ಹಾಲ್ (ಬಿಜಿಎಸ್) ಸರ್ಕಲ್ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಕುಸ್ತಿ, ಕಬಡ್ಡಿ ಸೇರಿದಂತೆ ಇತರೆ ಕ್ರೀಡಾಪಟುಗಳು ಹಾಗೂ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹಿಳಾ ಕ್ರೀಡಾಪಟುಗಳನ್ನು ಪೊಲೀಸರು ಅಮಾನವೀಯವಾಗಿ ಎಳೆದೊಯ್ದ ರೀತಿ ಖಂಡನೀಯ ಎಂದರು.
ಮಹಿಳೆಯರು ಕ್ರೀಡಾ ಜಗತ್ತಿಗೆ ಬರುವುದೇ ಅಪರೂಪ. ಅಂತಹುದರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಭಾರತದ ಹಿರಿಮೆ ಸಾರಿದ ಕುಸ್ತಿಪಟುಗಳಿಗೆ ನಮ್ಮ ನೆಲದಲ್ಲಿ ಅವಮಾನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕ್ರೀಡಾಪಟುಗಳ ಮತ್ತು ಅವರ ಪೋಷಕರ ಪರವಾಗಿ ನಮ್ಮ ಧ್ವನಿ ಇಡೀ ರಾಷ್ಟ್ರಕ್ಕೆ ತಲುಪಬೇಕು ಎಂಬ ನಿಟ್ಟಿನಲ್ಲಿ ಇಂದು ಸಾಂಕೇತಿಕವಾಗಿ ಕುಸ್ತಿ ಪಂದ್ಯ ಏರ್ಪಡಿಸಿ ನಮ್ಮೆಲ್ಲರ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ಹಾಸ್ಟೆಲ್ಗೆ ಸೇರುವಂತಹ, ಕ್ರೀಡಾಂಗಣಕ್ಕೆ ಬರುವವರು, ರಾಷ್ಟ್ರ, ರಾಜ್ಯವನ್ನು ಪ್ರತಿನಿಧಿಸುವ ನಿಮ್ಮಗಳ ಜೊತೆ ನಾವಿದ್ದೇವೆ. ಯಾವುದೇ ಕೆಟ್ಟ ನಡುವಳಿಕೆಗಳಿಗೆ ಆಸ್ಪದ ಕೊಡಬಾರದು, ಆಯ್ಕೆ ಸಮಿತಿ, ಕೋಚ್ ಅಥವಾ ಪ್ರಾಯೋಜಕರಿಗೆ ಇದು ಎಚ್ಚರಿಕೆಯ ಸಂದೇಶ ಎಂದರು.
ದೆಹಲಿಯ ಜಂತರ್ಮಂಥರ್ನಲ್ಲಿ ಏ. 23 ರಿಂದ ಆರಂಭಗೊಂಡ ಹೋರಾಟಕ್ಕೆ ಇಂದಿಗೂ ನ್ಯಾಯ ಸಿಗದಿರುವುದು ಬೇಸರದ ಸಂಗತಿ. ಕುಸ್ತಿ ಒಂದೇ ಅಲ್ಲ, ಕ್ರಿಕೆಟ್, ಕಬಡ್ಡಿ, ಅಥ್ಲೆಟಿಕ್ಸ್ ಪ್ರತಿಯೊಂದರಲ್ಲೂ ಯಾರು ಧ್ವನಿ ಹೊರಗೆ ಹೇಳುವುದಕ್ಕೆ ಸಾಧ್ಯವಿಲ್ಲದೇ ಒಳಗೆಯೇ ಹೆಣ್ಣುಮಕ್ಕಳು ನೋವನ್ನು ಅನುಭವಿಸುತ್ತಿದ್ದಾರೋ ಅವರ ಪರವಾಗಿ ನಾವಿದ್ದೇವೆ ಎಂಬ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕರ್ತವ್ಯಲೋಪ ಆರೋಪ; ಇಬ್ಬರು ಶಿಕ್ಷಕರು ಅಮಾನತು
ಹಿರಿಯ ಕುಸ್ತಿಪಟು ರೇವಣಸಿದ್ಧಯ್ಯ ಮಾತನಾಡಿ, ರಾಮಾಯಣ ಮಹಾಭಾರತದ ಕಾಲದಿಂದಲೂ ಹೆಸರುವಾಸಿಯಾದ ಕುಸ್ತಿ ಪಂದ್ಯಾವಳಿಯಲ್ಲಿ ಇಂದು ಮಹಿಳೆಯರು ಭಾಗವಹಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದು, ಇಂತಹ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಬ್ರಿಜ್ ಭೂಷಣ್ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಬಂಧಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಅಂತರಾಷ್ಟ್ರೀಯ ಕ್ರೀಡಾಪಟು ಟಿ ಕೆ ಆನಂದ್, ರಾಷ್ಟ್ರೀಯ ಕ್ರೀಡಾಪಟು ಅನಿಲ್, ಸಿದ್ಧಲಿಂಗೇಗೌಡ, ಷಣ್ಮುಖಪ್ಪ, ಮೋಹನ್, ರೇವಣ ಸಿದ್ಧಯ್ಯ, ತರುಣೇಶ್, ನಟರಾಜಶೆಟ್ಟಿ, ಸಂಜೀವ್ಕುಮಾರ್, ಅನಿಲ್, ಗೀತಾ ರುದ್ರೇಶ್, ಸವಿತಾ, ಕವಿತಾ, ವಸುಂಧರ, ಸಿ ಡಿ ಜಯಶ್ರೀ, ಅನ್ನಪೂರ್ಣ, ಗೀತಾ, ಪ್ರೇಮ, ಲಕ್ಷ್ಮೀದೇವಮ್ಮ, ಟಿ ಕೆ ಆನಂದ್, ಪೈಲ್ವಾನ್ ಮಹೇಶ್, ಗಗನ್ ಗೌಡ, ಸಿದ್ಧರಾಜು, ಚಿಕ್ಕರಂಗಪ್ಪ, ತಾಹೇರಾ, ಪ್ರಕಾಶ್ ಸೇರಿದಂತೆ ಕುಸ್ತಿಪಟುಗಳು, ಹಲವಾರು ಕ್ರೀಡಾಪಟುಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.